ಕಳೆದುಕೊಂಡಿದ್ದು ಲಕ್ಷ ಲಕ್ಷ; ಆದರೆ ಬಂದಿದ್ದು 1,350 ಪರಿಹಾರ!
ಮಂಡ್ಯ, ಆಗಸ್ಟ್ 28: ಜಿಲ್ಲೆಯಲ್ಲಿ ಪ್ರವಾಹದಿಂದ ಸಂಭವಿಸಿದ ನಷ್ಟದ ಅಂದಾಜನ್ನು ಸರಿಯಾಗಿ ಮಾಡದ ಜಿಲ್ಲಾಡಳಿತ, ಕಡಿಮೆ ಮೊತ್ತದ ಚೆಕ್ ನೀಡಿದ ಘಟನೆ ಮಂಡ್ಯದ ಕೆ.ಆರ್ ಪೇಟೆಯಲ್ಲಿ ನಡೆದಿದೆ. ತಾನು ಕಳೆದುಕೊಂಡಿದ್ದ ಲಕ್ಷಾಂತರ ಮೌಲ್ಯದ ಬೆಳೆಗೆ ರೈತನೊಬ್ಬನಿಗೆ ಸರ್ಕಾರದಿಂದ ಕೇವಲ 1,350 ರೂ ಪರಿಹಾರ ತಲುಪಿದೆ.
ಮಂಡ್ಯದ ಬೂಕನಕೆರೆ ಹೋಬಳಿಯ ರೈತ ಸಿದ್ದಲಿಂಗೇಗೌಡರು ತಮ್ಮ 2 ಎಕರೆ 20 ಗುಂಟೆ ಜಮೀನಿನಲ್ಲಿ ಬಾಳೆ ಬೆಳೆದಿದ್ದರು. ಇನ್ನೇನು ಕಟಾವು ಮಾಡಬೇಕೆಂಬ ಸಮಯದಲ್ಲಿ ಮಳೆ ಸುರಿದು ಒಂದು ಎಕರೆ ಗಿಡಗಳು ಬುಡ ಸಮೇತ ನಾಶವಾಗಿದ್ದವು. ಇದರಿಂದ ಅಂದಾಜು 1 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿತ್ತು. ಈ ಸಂಬಂಧ ರೈತ ಸಿದ್ದಲಿಂಗೇಗೌಡ ಅವರು ಸೂಕ್ತ ಪರಿಹಾರ ಕೋರಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಅವರ ದೂರಿನ ಮೇರೆಗೆ ಭೇಟಿ ನೀಡಿದ ಅಧಿಕಾರಿಗಳು ನಾಶವಾಗಿದ್ದ ಬೆಳೆ ವೀಕ್ಷಣೆ ಮಾಡಿ ಸೂಕ್ತ ಪರಿಹಾರ ಕೊಡುವುದಾಗಿ ಭರವಸೆ ನೀಡಿದರು. ಆದರೆ ಪರಿಹಾರದ ರೂಪದಲ್ಲಿ ಬಂದ ಹಣವನ್ನು ನೋಡಿ ರೈತನಿಗೆ ಶಾಕ್ ಆಗಿದೆ.

ಇದರಿಂದ ಅಸಮಾಧಾನಗೊಂಡಿರುವ ರೈತ ಸಿದ್ದಲಿಂಗೇಗೌಡ, "ನಾನು ಬಾಳೆ ಫಸಲು ಬೆಳೆಯಲು ಸುಮಾರು 80 ಸಾವಿರ ಖರ್ಚು ಮಾಡಿದ್ದೆ. ಬಿರುಗಾಳಿ ಮಳೆ ಬಂದು ಬೆಳೆ ನಾಶವಾಗದೆ ಇದ್ದರೆ 2 ಲಕ್ಷ ಆದಾಯ ಬರುತ್ತಿತ್ತು. ಆದರೆ ಈ ಪರಿಹಾರವನ್ನು ಯಾವ ಆಧಾರದ ಮೇಲೆ ನೀಡಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ. ರೈತರು ಸಾಲ ಮಾಡಿ ಬೇಸಾಯ ಮಾಡುತ್ತಾರೆ. ಅವರಿಗಾಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ನೀಡದೆ ಈ ರೀತಿ ಅವಮಾನ ಮಾಡಬಾರದು" ಎಂದಿದ್ದಾರೆ.

"ಸರ್ಕಾರ ಕೊಡುವುದಿದ್ದರೆ ವೈಜ್ಞಾನಿಕವಾಗಿ ಪರಿಶೀಲನೆ ನಡೆಸಿ ಬೆಳೆ ನಷ್ಟ ಪರಿಹಾರ ನೀಡಲಿ. ಇಲ್ಲವೇ ಯಾವುದೇ ಪರಿಹಾರ ಕೊಡುವುದು ಬೇಡ" ಎಂದು ಬೇಸರಗೊಂಡಿದ್ದಾರೆ.












Click it and Unblock the Notifications