ಜಾನುವಾರಿಗೆ Lumpy Skin Disease, ಪರಿಹಾರಕ್ಕೆ ಮಾರ್ಗಸೂಚಿ
ಬೆಂಗಳೂರು, ಅಕ್ಟೋಬರ್ 02; ಕರ್ನಾಟಕ ಸರ್ಕಾರ ಜಾನುವಾರುಗಳಲ್ಲಿ ಕಂಡುಬರುವ ಚರ್ಮಗಂಟು ರೋಗದಿಂದ (Lumpy Skin Disease) ಮರಣ ಹೊಂದಿದ ಜಾನುವಾರುಗಳ ಮಾಲೀಕರಿಗೆ ಪರಿಹಾರ ನೀಡಲು ಅನುದಾನ ಬಿಡುಗಡೆ ಮಾಡುವ ಕುರಿತು ಮಾರ್ಗಸೂಚಿ ಹೊರಡಿಸಿದೆ.
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಗೆ 2022-23ನೇ ಸಾಲಿನ ಆಯವ್ಯಯ ಸಾಲುವಾರು ವೆಚ್ಚ ಅಂದಾಜುಗಳು ಬೇಡಿಕೆವಾರು ಸಂಪುಟ-3ರಲ್ಲಿ ಅನುದಾನ ನಿಗದಿಯಾಗಿರುತ್ತದೆ. ಆಯವ್ಯಯದಲ್ಲಿ ನಿಗದಿಯಾದ ಅನುದಾನಕ್ಕೆ ತಕ್ಕಂತೆ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಿ ಆದೇಶ ಹೊರಡಿಸಲಾಗಿದೆ.
ಕರ್ನಾಟಕದಲ್ಲಿ ಚರ್ಮಗಂಟು ರೋಗದಿಂದ ಮರಣ ಹೊಂದಿದ ಜಾನುವಾರುಗಳ ಮಾಲೀಕರಿಗೆ ಪರಿಹಾರ ಧನವನ್ನು ವಿತರಿಸಲು ಕೆಳಕಂಡ ಮಾರ್ಗಸೂಚಿಗಳನ್ನು ಅನುಸರಿಸತಕ್ಕದ್ದು ಎಂದು ಸೂಚಿಸಲಾಗಿದೆ. ಚರ್ಮಗಂಟು ರೋಗಕ್ಕೆ ತುತ್ತಾಗಿ ಮರಣ ಹೊಂದಿದ ಜಾನುವಾರುವಿನ ಚಿಕಿತ್ಸಾ ಮಾಹಿತಿಯನ್ನು ಆಧರಿಸಿ ಸಂಬಂಧಪಟ್ಟ ಸ್ಥಳೀಯ ಪಶುವೈದ್ಯಾಧಿಕಾರಿಗಳಿಂದ ಜಾನುವಾರುವಿನ ಮರಣ ದೃಢೀಕರಣ ಪತ್ರ ಹೊಂದಿರುವುದು ಕಡ್ಡಾಯವಾಗಿದೆ.
ಚರ್ಮಗಂಟು ರೋಗದಿಂದ ಮರಣ ಹೊಂದಿದ ಜಾನುವಾರು ವಿಮಾ ಸೌಲಭ್ಯ ಹೊಂದಿದಲ್ಲಿ ಮರಣ ಪರಿಹಾರ ಧನವನ್ನು ಪಾವತಿಸತಕ್ಕದ್ದಲ್ಲ. ಪರಿಹಾರ ಧನವನ್ನು ಜಾನುವಾರು ಮಾಲೀಕರ ಆಧಾರ್ ಸಂಖ್ಯೆ ಜೋಡಿಸಲ್ಪಟ್ಟಿರುವ ಬ್ಯಾಂಕ್ ಖಾತೆಗೆ RTGS/ NEFT ಮುಖಾಂತರ ನೇರವಾಗಿ ಪಾವತಿಸಬೇಕು. ಚರ್ಮಗಂಟು ರೋಗದಿಂದ ಮರಣ ಹೊಂದಿದ ಜಾನುವಾರುವಿನ ಸೂಕ್ತ ಛಾಯಚಿತ್ರಗಳು ಹಾಗೂ ಯುಐಡಿ ಇಯರ್ ಟ್ಯಾಗ್ ಅಪೇಕ್ಷಿತವಾಗಿರುತ್ತದೆ.

ಎಷ್ಟು ಪರಿಹಾರ ನಿಗದಿ ಮಾಡಲಾಗಿದೆ?
ಚರ್ಮಗಂಟು ರೋಗದಿಂದ ಮರಣಹೊಂದಿದ ಜಾನುವಾರುಗಳ ಮಾಲೀಕರಿಗೆ ವಿತರಣೆ ಮಾಡುವ ಪರಿಹಾರವನ್ನು ಈ ಕೆಳಗಿನಂತೆ ನಿಗದಿ ಮಾಡಲಾಗಿದೆ. ಕರುವಿಗೆ 5 ಸಾವಿರ ರೂ., ಹಸುವಿಗೆ 20 ಸಾವಿರ ರೂ. ಮತ್ತು ಎತ್ತು ಮೃತಪಟ್ಟರೆ 30,000 ರೂ. ಪರಿಹಾರ ನಿಗದಿ ಮಾಡಲಾಗಿದೆ.
1ನೇ ಆಗಸ್ಟ್ 2022 ರಿಂದ ಈ ಆದೇಶವನ್ನು ಹೊರಡಿಸಿದ ದಿನಾಂಕದವರೆಗೂ ಚರ್ಮಗಂಟು ರೋಗದಿಂದ ಮರಣಿಸಿದ ಜಾನುವಾರುಗಳ ಛಾಯಚಿತ್ರಗಳು ಲಭ್ಯವಿಲ್ಲದಿದ್ದ ಪಕ್ಷದಲ್ಲಿ ಮರಣಿಸಿದ ಜಾನುವಾರುಗಳ ಮಾಲೀಕರಿಗೆ ಛಾಯಚಿತ್ರಗಳನ್ನು ಒದಗಿಸುವಂತೆ ಒತ್ತಾಯಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. 1ನೇ ಆಗಸ್ಟ್ 2022 ರಿಂದ ಈ ಆದೇಶವನ್ನು ಹೊರಡಿಸಿದ ದಿನಾಂಕದವರೆಗೂ ಪಶುವೈದ್ಯಾಧಿಕಾರಿಗಳ ಗಮನಕ್ಕೆಬಾರದೇ ಚರ್ಮಗಂಟು ರೋಗಕ್ಕೆ ತುತ್ತಾಗಿ ಮರಣ ಹೂಂದಿ ಅಂತ್ಯಕ್ರಿಯಗೊಂಡಿದ್ದ ಪಕ್ಷದಲ್ಲಿ ಸ್ಥಳೀಯ ಪಶುವೈದ್ಯಾಧಿಕಾರಿಗಳು ಸಂಬಂಧಪಟ್ಟ ಗ್ರಾಮಪಂಚಾಯತಿ ಸದಸ್ಯರು ಹಾಗೂ ಮೂರು ಜನ ಸ್ಥಳೀಯ ಗ್ರಾಮಸ್ಥರ ಸಮಕ್ಷಮದಲ್ಲಿ ಪಂಚನಾಮೆ ಮಾಡಿ ಸದರಿ ಕಾಯಿಲೆಯಿಂದಲೇ ಜಾನುವಾರು ಮರಣ ಹೊಂದಿರುವುದಾಗಿ ಖಚಿತಪಟ್ಟಲ್ಲಿ ದೃಢೀಕರಣ ಪತ್ರ ನೀಡುವುದು.

ಅನುದಾನ ಬಳಕೆಗೆ ಅವಕಾಶ
ಈ ಅನುದಾನವನ್ನು ನಿಯಮಾನುಸಾರ ಯಾವ ಉದ್ದೇಶಕ್ಕಾಗಿ ಬಿಡುಗಡೆ ಮಾಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಉಪಯೋಗಿಸಿಕೊಂಡು ಕಡ್ಡಾಯವಾಗಿ ಹಣಬಳಕೆ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು, ಮತ್ತು ಆರ್ಥಿಕ ಇಲಾಖೆಯ ಅಧಿಸೂಚನೆಯಲ್ಲಿ ಸೂಚಿಸಿರುವಂತೆ ಅನುಷ್ಠಾನಗೊಳಿಸಬೇಕು.
ಸ್ವೀಕರ್ತನಾ ರಸೀದಿ ಮೇಲೆ (Pay Receipts) ಹಣ ಪಡೆಯುವ ಅಧಿಕಾರಿಗಳು, ಆಯುಕ್ತರು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಬೆಂಗಳೂರು ರವರ ಮೇಲು ಸಹಿ ಪಡೆದು ಖಜಾನೆಯಿಂದ ಹಣ ಸೆಳೆಯಲು ಅನುಮತಿ ನೀಡಿದೆ.
ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999 ಹಾಗೂ 2000 ರ ನಿಯಮಗಳನ್ನು ತಪ್ಪದೇ ಕಡ್ಡಾಯವಾಗಿ ಪಾಲಿಸುವ ಷರತ್ತಿಗೊಳಪಟ್ಟು ಅನುದಾನ ಬಿಡುಗಡೆಗೊಳಿಸಿ ಆದೇಶಿಸಿದೆ.

ವೈರಸ್ನಿಂದ ಉಂಟಾಗುತ್ತದೆ
ವೈರಸ್ನಿಂದ ಬರುವ ಸಾಂಕ್ರಾಮಿಕ ವೈರಸ್ ಕಾಯಿಲೆಯಾಗಿದ್ದು, ಈ ಕಾಯಿಲೆಯು ಸಿಡುಬು ರೋಗ ವೈರಸ್ Poxiviridae ಕುಟುಂಬದ Capripox ವೈರಸ್ನಿಂದ ಉಂಟಾಗುತ್ತದೆ. ರೋಗಗ್ರಸ್ಥ ಪ್ರಾಣಿಗಳಲ್ಲಿ ಪ್ರಾರಂಭಿಕ ಹಂತದಲ್ಲಿ ಜ್ವರ, ತದನಂತರ ವಾರದಲ್ಲಿ ಚರ್ಮಗಂಟು ಕಾಣಿಸಿ ಕ್ರಮೇಣ ಚರ್ಮ ಗಂಟು/ ಹಕ್ಕಳ/ ತುರಿಗಳಾಗಿ ಜಾನುವಾರುಗಳಲ್ಲಿ ಮಾರಣಾಂತಿಕವಾಗಿ ಕಾಡುತ್ತದೆ.
ರೋಗಗ್ರಸ್ಯ ದನಗಳು ಜ್ವರದಿಂದ ಬಳಲಿ ಮಂಕಾಗಿ ಮೂಗು, ಕಣ್ಣುಗಳಲ್ಲಿ ಸೋರುವಿಕೆ, ಜೊಲ್ಲು ಸೋರುವುದು, ಮೇವು ತಿನ್ನದೆ ಬಡಕಲಾಗುತ್ತವೆ. ರಾಸುಗಳು ಶ್ವಾಸಕೋಶದ ಉರಿಯೂತದಿಂದ ಸಾವನ್ನಪ್ಪಬಹುದು ಸಾಮಾನ್ಯವಾಗಿದೆ. ಚರ್ಮಗಂಟು ರೋಗವು ನೇರವಾಗಿ ಜಾನುವಾರುಗಳ ಆರೋಗ್ಯವನ್ನು ಹದಗೆಡಿಸಿ ಜಾನುವಾರುಗಳ ಉತ್ಪಾದಕತೆಯನ್ನು ಕುಂಠಿತಗೊಳಿಸುವುದರಿಂದ ರೈತರು ಹಾಗೂ ಜಾನುವಾರು ಮಾಲೀಕರ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತಿದೆ.

2 ಕೋಟಿ ರೂ. ಅನುದಾನ
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ ರಾಜ್ಯದಲ್ಲಿ ಚರ್ಮಗಂಟು ರೋಗದಿಂದ ಮರಣ ಹೊಂದಿದ ಜಾನುವಾರುಗಳ ಮಾಲೀಕರಿಗೆ ಪರಿಹಾರ ಧನ ನೀಡುವ ಸಂಬಂಧ ರೂ. 2 ಕೋಟಿ ಅನುದಾನವನ್ನು ಹಾಲು ಉತ್ಪಾದಕರಿಗೆ ಉತ್ತೇಜನ ಯೋಜನೆಯಡಿ ಸಹಾಯ/ ಪರಿಹಾರದಡಿ ಲಭ್ಯವಿರುವ ಅನುದಾನದಿಂದ ಬಿಡುಗಡೆಗೊಳಿಸಲಾಗಿದೆ.












Click it and Unblock the Notifications