ಕೊರೊನಾ ಲಾಕ್ ಡೌನ್; ಸಂಕಷ್ಟಕ್ಕೆ ಸಿಲುಕಿದ ಮಾವು ಬೆಳೆದ ರೈತ
ಹೈದರಾಬಾದ್, ಏಪ್ರಿಲ್ 16 : ಕೊರೊನಾ ಹರಡದಂತೆ ತಡೆಯಲು ಘೋಷಣೆ ಮಾಡಿರುವ ಲಾಕ್ ಡೌನ್ ಎಲ್ಲಾ ರೈತರ ಮೇಲೆ ಪರಿಣಾಮ ಬೀರಿದೆ. ಆದರೆ, ಮಾವು ಬೆಳೆದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾವಿನ ಹಣ್ಣು ಮಾರುಕಟ್ಟೆಗೆ ಬರುವ ಸಮಯಕ್ಕೆ ಲಾಕ್ ಡೌನ್ ಘೋಷಣೆಯಾಗಿದೆ.
Recommended Video
ಮಾವಿನ ಹಣ್ಣು ನಂಬಿಕೊಂಡು ಈ ಬಾರಿ ಬಂಡವಾಳ ಹೂಡುವಂತಿಲ್ಲ ಎಂದು ತೆಲಂಗಾಣದ ವ್ಯಾಪಾರಿಗಳು ಹೇಳುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ 50ರಷ್ಟು ಹಣ್ಣುಗಳು ಮಾತ್ರ ಈಗ ಮಾರುಕಟ್ಟೆಗೆ ಬಂದಿವೆ.
ಬೇಸಿಗೆ ಬಂತೆಂದರೆ ಮಾವಿನ ಹಣ್ಣಿನ ಬೇಡಿಕೆ ಹೆಚ್ಚುತ್ತಿದೆ. ಈ ಬಾರಿ ಕೊರೊನಾ ಪರಿಣಾಮ ಮಾವು ಬೆಳೆಗಾರರಿಗೆ ಹೊಡೆತ ನೀಡಿದೆ. ಮಾರುಕಟ್ಟೆಗೆ ಹಣ್ಣುಗಳನ್ನು ಸಾಗಿಸುವುದು ದೊಡ್ಡ ಸಾಹಸವಾಗಿದೆ. ಮತ್ತೊಂದು ಕಡೆ ಮಾರುಕಟ್ಟೆಯಲ್ಲಿ ಬೇಡಿಕೆಯೂ ಕುಸಿದಿದೆ.

ಹೈದರಾಬಾದ್ ಮಾರುಕಟ್ಟೆಯಲ್ಲಿನ ಮಾವಿನ ವ್ಯಾಪಾರಿಗಳು, "ಈ ಬಾರಿ ಫಲಸು ಮಾರುಕಟ್ಟೆಗೆ ಬರುತ್ತಿಲ್ಲ. ಕೊಳ್ಳುವವರು ಬರುತ್ತಿಲ್ಲ. ನಾವೆಲ್ಲರೂ ಕಷ್ಟ ಅನುಭವಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.
ಈ ಸಮಯದಲ್ಲಿ 10 ರಿಂದ 12 ಬಗೆಯ ಮಾವಿನ ಹಣ್ಣುಗಳು ಮಾರುಕಟ್ಟೆಯಲ್ಲಿ ಇರಬೇಕಿತ್ತು. ಆದರೆ, ಈ ಬಾರಿ ಕೇವಲ 5 ರಿಂದ 6 ಬಗೆಯ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಬಂದಿವೆ. ಆದರೆ,ಜನರು ಅವುಗಳನ್ನು ಕೊಳ್ಳಲು ಆಸಕ್ತಿ ತೋರುತ್ತಿಲ್ಲ.
ಮಾವಿನ ಹಣ್ಣುಗಳನ್ನು ಖರೀದಿ ಮಾಡುವಂತೆ ವಿವಿಧ ರಾಜ್ಯಗಳಲ್ಲಿ ರೈತರು ಸರ್ಕಾರವನ್ನು ಒತ್ತಾಯ ಮಾಡುತ್ತಿದ್ದಾರೆ. ಸಹಕಾರಿ ಸಂಘಗಳ ಮೂಲಕ ಖರೀದಿಸಿ ಜನರಿಗೆ ವಿತರಣೆ ಮಾಡಿ, ರೈತರಿಗೆ ನಷ್ಟವನ್ನು ಉಂಟು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ನಗರದಲ್ಲಿನ ರೆಸ್ಟೋರೆಂಟ್, ಜ್ಯೂಸ್ ಸೆಂಟರ್ಗಳಲ್ಲಿ ಮಾವಿನ ಹಣ್ಣಿಗೆ ಬೇಡಿಕೆ ಹೆಚ್ಚಿತ್ತು. ಆದರೆ, ಈಗ ಅವುಗಳು ಲಾಕ್ ಡೌನ್ ಕಾರಣದಿಂದಾಗಿ ಬಾಗಿಲು ಮುಚ್ಚಿವೆ. ಮದುವೆ ಸೇರಿದಂತೆ ಯಾವುದೇ ಸಮಾರಂಭಗಳಿಲ್ಲ. ಇದರಿಂದಾಗಿ ಮಾವಿಗೆ ಬೇಡಿಕೆ ಕಡಿಮೆ ಇದೆ.
ಲಾಕ್ ಡೌನ್ ಅನ್ನು ಮೇ 3ರ ತನಕ ವಿಸ್ತರಣೆ ಮಾಡಲಾಗಿದೆ. ಬಳಿಕ ರೆಸ್ಟೋರೆಂಟ್, ಜ್ಯೂಸ್ ಸೆಂಟರ್ ಮುಂತಾದವುಗಳನ್ನು ತೆರೆಯುವ ಕುರಿತು ಸರ್ಕಾರ ತೀರ್ಮಾನವನ್ನು ತೆಗೆದುಕೊಳ್ಳಲಿದೆ. ಮಾವು ಬೆಳೆದ ರೈತರು ಅಲ್ಲಿಯ ತನಕ ಕಾಯುವುದು ಅನಿವಾರ್ಯವಾಗಿದೆ.












Click it and Unblock the Notifications