ಲಾಕ್ಡೌನ್ ಎಫೆಕ್ಟ್: ಮಲ್ಲಿಗೆ ಬೆಳೆದರೂ 'ಹೂವಿನ'ಹಡಗಲಿ ರೈತರ ಜೀವನ ಘಮಿಸುತ್ತಿಲ್ಲ
ವಿಜಯನಗರ, ಮೇ 11: ಮಲ್ಲಿಗೆ ಹೂವು ಅಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ, ಘಮಘಮಿಸೋ ಹೂವಿನ ಸುವಾಸನೆ ಅದೆಷ್ಟು ಸುಮಧುರ. ಮಲ್ಲಿಗೆ ಹೂ ಬೆಳೆಯೋ ರೈತರ ಬದುಕಲ್ಲಿ ಮಾತ್ರ ಮಲ್ಲಿಗೆ ಹೂವಿನ ಪರಿಮಳವೇ ಇಲ್ಲದಂತಾಗಿದೆ.
ಕೊರೊನಾ ಲಾಕ್ಡೌನ್ ಹೊಡೆತಕ್ಕೆ ಮಲ್ಲಿಗೆ ನಾಡಿನ ಹೂವಿನ ಬೆಳೆಗಾರರು ಬೆಲೆ ಸಿಗದೆ ಕಂಗಾಲಾಗಿದ್ದಾರೆ. ಹೌದು. ಬಳ್ಳಾರಿ ಮತ್ತು ವಿಜಯನಗರ ಅವಳಿ ಜಿಲ್ಲೆಗಳಲ್ಲಿಯೇ ಮಲ್ಲಿಗೆ ಹೂವು ಬೆಳೆಯುವುದಕ್ಕೆ ಹೆಸರಾಗಿರುವ ಹೂವಿನಹಡಗಲಿಯನ್ನು ಮಲ್ಲಿಗೆ ನಾಡು ಎಂದು ಕರೆಯುತ್ತಾರೆ.
ವಿಜಯನಗರ ಜಿಲ್ಲೆಯ ಪಶ್ಚಿಮ ತಾಲ್ಲೂಕುಗಳಲ್ಲಿ ಒಂದಾದ ಹೂವಿನಹಡಗಲಿ ತಾಲ್ಲೂಕಿನಲ್ಲಿ ಅತೀ ಹೆಚ್ಚು ಮಲ್ಲಿಗೆ ಹೂವನ್ನು ಬೆಳೆಯಲಾಗುತ್ತದೆ.
Array
ಮಲ್ಲಿಗೆನಾಡು ಎಂದು ಹೆಸರುವಾಸಿಯಾಗಿರುವ ಹೂವಿನಹಡಗಲಿ ತಾಲ್ಲೂಕಿನಲ್ಲಿ ಬರೋಬ್ಬರಿ 500 ಎಕರೆಗಿಂತಲೂ ಹೆಚ್ಚು ಪ್ರದೇಶದಲ್ಲಿ ಮಲ್ಲಿಗೆ ಹೂವನ್ನು ಮಿರಾಕೊರನಹಳ್ಳಿ, ಮುದೇನೂರ, ಹನಕನಹಳ್ಳಿ, ತಮಲಾಪುರ, ಕೊಳಚಿ, ಕಗ್ಗಲ್ಗಟ್ಟಿ ತಾಂಡ, ಮಾಗಳ, ಹೀಗೆ ವಿವಿಧ ಗ್ರಾಮಗಳಲ್ಲಿ ಈಗ ನಿತ್ಯ ನೂರಾರು ಕ್ವಿಂಟಾಲ್ ಹೂ ಇಳುವರಿ ಬರುತ್ತಿದೆ.
ಬೇರೆ ಬೇರೆ ಜಿಲ್ಲೆಗಳಲ್ಲಿ ಬೇಡಿಕೆ
ಹೌದು. ಹೂವಿನಹಡಗಲಿ ತಾಲ್ಲೂಕಿನಲ್ಲಿ ಹೆಚ್ಚಾಗಿ ಕೆಂಪು ಮಣ್ಣನ್ನು ಹೊಂದಿರುವ ಪ್ರದೇಶವಾಗಿದೆ ಹಾಗಾಗಿ ಹೂವು ಬೆಳೆಯುವುದಕ್ಕೆ ಹೇಳಿಮಾಡಿಸಿದಂತಿದೆ. ಸಾಮಾನ್ಯವಾಗಿ ಹೂವಿನಹಡಗಲಿ ಮಲ್ಲಿಗೆಗೆ ಎಲ್ಲಿಲ್ಲದ ಬೇಡಿಕೆ. ಹುಬ್ಬಳ್ಳಿ, ದಾವಣಗೆರೆ, ಗದಗ, ಹಾವೇರಿ, ಕೊಪ್ಪಳ ಚಿತ್ರದುರ್ಗ ಭಾಗಗಳಲ್ಲಿ ಈ ಹೂವಿನಹಡಗಲಿಯ ಹೂವಿಗೆ ಭಾರೀ ಬೇಡಿಕೆ ಇದೆ.
ಮಲ್ಲಿಗೆ ಹೂವಿನ ದರ ಕುಸಿತ
ಕೊರೊನಾ 2ನೇ ಅಲೆಯಿಂದ ರಾಜ್ಯ ಸರ್ಕಾರ ಇಡೀ ರಾಜ್ಯವನ್ನು ಲಾಕ್ಡೌನ್ ಘೋಷಣೆ ಮಾಡಿರುವ ಹಿನ್ನಲೆ ಮದುವೆ ಮತ್ತು ಶುಭಸಮಾರಂಭಗಳು ಸಹ ನಡೆಯುತ್ತಿಲ್ಲ. ಜೊತೆಗೆ ಗ್ರಾಹಕರು ಬೀದಿಗಳಿಗೆ ಬರುವ ಹಾಗಿಲ್ಲ. ಅಗತ್ಯ ವಸ್ತುಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈ ಮೊದಲು ಪ್ರತಿ ಕ್ವಿಂಟಾಲ್ಗೆ 400 ರಿಂದ 500 ರೂ. ವರೆಗೆ ಬೇಡಿಕೆ ಇತ್ತು. ಈಗ ಲಾಕ್ಡೌನ್ನಿಂದಾಗಿ ಪ್ರತಿ ಕ್ವಿಂಟಾಲ್ಗೆ 100 ರೂ. ಸಹ ಕೇಳುವವರಿಲ್ಲವಾಗಿದೆ. ಮಲ್ಲಿಗೆ ಬೆಳೆಗಾರರು ಕೊರೊನಾ ಎರಡನೇ ಅಲೆಗೆ ತತ್ತರಿಸಿ ಹೋಗಿದ್ದಾರೆ. ಬೆಳೆಗೆ ಬೆಂಬಲ ಬೆಲೆ ಸಿಗದೇ ಅಡಕತ್ತರಿಯಲ್ಲಿ ಸಿಲುಕಿಕೊಂಡಿದ್ದಾರೆ.
ಕಳೆದ ವರ್ಷದ ಪರಿಹಾರ ಬಂದಿಲ್ಲ
ಕಳೆದ ವರ್ಷದ ಲಾಕ್ಡೌನ್ ಸಂದರ್ಭದಲ್ಲಿ ಆದ ನಷ್ಟವನ್ನು ರೈತರಿಗೆ ಇನ್ನು ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬಾರದಂಥಹ ಪರಿಸ್ಥಿತಿ ಇತ್ತು. ಹೊಲದಲ್ಲಿ ಅರಳಿದ್ದ ಮಲ್ಲಿಗೆ ಹೂ ದರವಿಲ್ಲದೇ ಬಾಡಿ ಹೋಗಿದ್ದವು. ಕಳೆದ ಬಾರಿ ಲಾಕ್ಡೌನ್ ನಲ್ಲಿ ಕೈ ಸುಟ್ಟುಕೊಂಡಿದ್ದ ರೈತರಿಗಿನ್ನು ಪರಿಹಾರ ಬಂದಿಲ್ಲ.
64 ಜನ ರೈತರಿಗೆ ಮಾತ್ರ ಪರಿಹಾರ
ಕಳೆದ ಬಾರಿ ಹೂವಿನ ಬೆಳೆಗಾರರಿಗೆ ಸರಕಾರ ಪರಿಹಾರ ಘೋಷಣೆ ಮಾಡಿತ್ತು. ಒಂದು ವರ್ಷದವಾದರೂ 300 ರೈತರಿಗೆ ಬಿಡಿಗಾಸು ದೊರೆತ್ತಿಲ್ಲ. ನೆಪ ಮಾತ್ರಕ್ಕೆ 64 ಜನ ರೈತರಿಗೆ ಮಾತ್ರ ಪರಿಹಾರವನ್ನು ವಿತರಣೆ ಮಾಡಲಾಗಿದೆ ಎಂಬ ಆರೋಪವೂ ಇದೆ. ಅಧಿಕಾರಿಗಳು ಬೆಳೆ ನಷ್ಟವನ್ನು ಜಿಪಿಎಸ್ ಮೂಲಕ ಸಂಗ್ರಹಿಸಿದ್ದಾರೆ. ಆದರೆ, ಇಲ್ಲಿಯವರೆಗೂ ರೈತರಿಗೆ ಪರಿಹಾರ ವಿತರಣೆ ಮಾಡುವಂತಹ ಕೆಲಸವಾಗಿಲ್ಲ. ಕೂಡಲೇ ಸರಕಾರ ರೈತರ ನೆರವಿಗೆ ಧಾವಿಸಬೇಕೆಂದು ರೈತರ ಒತ್ತಾಯವಾಗಿದೆ.