ಆರ್ಟಿಸಿಗೆ ಆಧಾರ್ ಕಾರ್ಡ್ ಲಿಂಕ್, ರೈತರಿಗೆ ಮಾಹಿತಿ
ಬೆಂಗಳೂರು, ಮಾರ್ಚ್ 18: ಕರ್ನಾಟಕ ಸರ್ಕಾರದ ಹೊಸ ಆದೇಶವೊಂದು ರೈತರ ಆತಂಕಕ್ಕೆ ಕಾರಣವಾಗಿದೆ. ಪಹಣಿ (ಆರ್ಟಿಸಿ)ಗೆ ಆಧಾರ್ ಜೋಡಣೆ ಮಾಡಬೇಕು ಎಂದು ಸರ್ಕಾರ ಆದೇಶ ಹೊರಡಿಸಿದ್ದು, ಈ ಕುರಿತ ಜವಾಬ್ದಾರಿಯನ್ನು ಗ್ರಾಮ ಆಡಳಿತ ಅಧಿಕಾರಿಗಳಿಗೆ ನೀಡಿದೆ.
ಆರ್ಟಿಸಿಗೆ ಆಧಾರ್ ಜೋಡಣೆ ಮಾಡಲು ಅನುಕೂಲವಾಗುವಂತೆ ಸರ್ಕಾರ ಹೊಸದಾದ ತಂತ್ರಾಂಶವನ್ನು ಸಿದ್ಧಗೊಳಿಸಿದೆ. ಇನ್ನು ಮುಂದೆ ಸರ್ಕಾರದ ಸೌಲಭ್ಯವನ್ನು ಪಡೆಯಲು ಆರ್ಟಿಸಿ, ಆಧಾರ್ ಲಿಂಕ್ ಜೋಡಣೆ ಮಾಡುವುದು ಕಡ್ಡಾಯವಾಗಿದೆ ಎಂದು ಸರ್ಕಾರ ಹೇಳಿದೆ.

ಈ ಕಡ್ಡಾಯವಾದ ಕಾರ್ಯವನ್ನು ಮಾಡಲು ಸರ್ಕಾರ ಗ್ರಾಮ ಆಡಳಿತ ಅಧಿಕಾರಿಗಳಿಗೆ ಜವಾಬ್ದಾರಿ ನೀಡಿದೆ. ಈ ಕುರಿತು ಗ್ರಾಮ ಆಡಳಿತ ಅಧಿಕಾರಿಗಳು ಪ್ರಕಟಣೆ ಮೂಲಕ ಮಾಹಿತಿಯನ್ನು ನೀಡಿದ್ದಾರೆ.
ಯಾವ-ಯಾವ ದಾಖಲೆಗಳು ಬೇಕು?; ಗ್ರಾಮ ಆಡಳಿತ ಅಧಿಕಾರಿಗಳ ಪ್ರಕಟಣೆಯ ಮಾಹಿತಿಯಂತೆ, ಈ ಮೂಲಕ ಎಲ್ಲಾ ರೈತ ಬಾಂಧದವರಿಗೆ ತಿಳಿಸುವುದೇನೆಂದರೆ, ಸರ್ಕಾರದ ಸೌಲಭ್ಯಗಳನ್ನು ನೇರವಾಗಿ ಪಡೆಯಲು, ಬ್ಯಾಂಕ್ ಸೌಲಭ್ಯಗಳನ್ನು ಪಡೆಯಲು ಮತ್ತು ಕೃಷಿ ಇಲಾಖೆ ಸೌಲಭ್ಯಗಳನ್ನು ಪಡೆಯಲು ಮತ್ತು ಬೆಳೆ ಪರಿಹಾರ ಪಡೆಯಲು ಜಮೀನಿನ ಉತಾರಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಕಡ್ಡಾಯವಾಗಿರುತ್ತದೆ.
ಕಾರಣ ಎಲ್ಲಾ ರೈತ ಬಾಂಧವರು ತಮ್ಮ ಜಮೀನಿನ ಉತಾರ ಮತ್ತು ಆಧಾರ್ ಕಾರ್ಡ್ ತೆಗೆದುಕೊಂಡು ನಿಮ್ಮ ಗ್ರಾಮದ ಗ್ರಾಮ ಒನ್ ಕೇಂದ್ರ, ಆನ್ಲೈನ್ ಕೇಂದ್ರ ಮತ್ತು ಗ್ರಾಮ ಆಡಳಿತ ಅಧಿಕಾರಿಗಳ ಕಛೇರಿಗೆ ಭೇಟಿ ನೀಡಬೇಕೆಂದು ಕೋರಲಾಗಿದೆ.
7 ವರ್ಷದ ಹಿಂದೆಯೇ ಕರ್ನಾಟಕ ಸರ್ಕಾರ ಆರ್ಟಿಸಿಗೆ ಆಧಾರ್ ಕಾರ್ಡ್ ಜೋಡಣೆ ಮಾಡುವ ಕಾರ್ಯವನ್ನು ಆರಂಭಿಸಿತ್ತು. ಆಗ ಹಲವು ರೈತರು ಜೋಡಣೆಯನ್ನು ಸಹ ಮಾಡಿದ್ದರು. ಆದರೆ ಈಗ ಸರ್ಕಾರದ ಸೌಲಭ್ಯಗಳು ಬೇಕು ಎಂದರೆ ಕಡ್ಡಾಯವಾಗಿ ಜೋಡಣೆ ಮಾಡಬೇಕು ಎಂದು ಸರ್ಕಾರ ಹೇಳಿದ್ದು, ರೈತರು ಸರ್ಕಾರಿ ಸೌಲಭ್ಯ ಕೈ ತಪ್ಪುವ ಭೀತಿಯಲ್ಲಿದ್ದಾರೆ.
ಈಗಾಗಲೇ ಫ್ರೂಟ್ ತಂತ್ರಾಂಶಕ್ಕೆ ರೈತರು ಆಧಾರ್ ಲಿಂಕ್ ಮಾಡಿದ್ದಾರೆ. ಈಗ ಮತ್ತೆ ಆಧಾರ್, ಆರ್ಟಿಸಿ ಲಿಂಕ್ ಮಾಡಬೇಕು ಎಂದು ಹೇಳಿರುವುದು ಗೊಂದಲಕ್ಕೆ ಕಾರಣವಾಗಿದೆ. ಆದರೆ ಆರ್ಟಿಸಿಯಲ್ಲಿನ ಮಾಹಿತಿಗಳೇ ತಪ್ಪಾಗಿವೆ. ಅವುಗಳನ್ನು ಸರಿಪಡಿಸಲು ಕ್ರಮ ಕೈಗೊಂಡಿಲ್ಲ. ಈ ಕುರಿತು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದರೂ ಉಪಯೋಗವಾಗಿಲ್ಲ. ಇಂತಹ ಸಮಯದಲ್ಲಿ ಆಧಾರ್, ಆರ್ಟಿಸಿ ಲಿಂಕ್ ಏಕೆ ಎಂಬುದು ಜನರ ಪ್ರಶ್ನೆ.
ಲಿಂಕ್ ಮಾಡುವುದು ಏಕೆ?; ಆರ್ಟಿಸಿ, ಆಧಾರ್ ಲಿಂಕ್ ಕುರಿತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿದ್ದಾರೆ. "ಹೆಚ್ಚಿನ ಸಂಖ್ಯೆಯ ಹಕ್ಕುಗಳು, ಗೇಣಿದಾರರು ಮತ್ತು ಬೆಳೆಗಳ ಮಾಹಿತಿ ಸತ್ತ ರೈತರ ಹೆಸರಿನಲ್ಲಿ ಇನ್ನೂ ಇವೆ. ಸರ್ಕಾರದ ಯೋಜನೆಗಳ ಸಹಾಯವನ್ನು ಪಡೆಯಲು, ಶಾಶ್ವತ ಪರಿಹಾರದ ಅಂಗವಾಗಿ ಆರ್ಟಿಸಿ, ಆಧಾರ್ ಲಿಂಕ್ ಮಾಡಲು ಸೂಚನೆ ನೀಡಲಾಗಿದೆ" ಎಂದು ಹೇಳಿದ್ದಾರೆ.
"ಆರ್ಟಿಸಿ, ಆಧಾರ್ ಕಾರ್ಡ್ ಲಿಂಕ್ ಮಾಡುವುದರಿಂದ ಭೂ ಸಂಬಂಧಿತ ವಂಚನೆಗಳನ್ನು ತಡೆಗಟ್ಟಲು ಸಹಾಯಕವಾಗುತ್ತದೆ. ಮಾಲೀಕತ್ವದ ಖಚಿತತೆ ಖಚಿತಪಡಿಸಿಕೊಳ್ಳಲು ಸಹಾಯಕವಾಗುತ್ತದೆ. 6 ಲಕ್ಷ ಮೃತ ರೈತರ ಹೆಸರಿನಲ್ಲಿ ಆರ್ಟಿಸಿಗಳಿರುವುದು ಸದ್ಯಕ್ಕೆ ತಿಳಿದುಬಂದಿದೆ" ಎಂದು ಸಚಿವರು ತಿಳಿಸಿದ್ದಾರೆ.
"ಗ್ರಾಮ ಆಡಳಿತ ಅಧಿಕಾರಿಗಳು ಭೂ ಮಾಲೀಕರು, ರೈತರ ಮನಗೆ ಆಗಮಿಸಿದ ಸಂದರ್ಭದಲ್ಲಿ ಎಲ್ಲಾ ಆರ್ಟಿಸಿಗಳನ್ನು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡುವ ಪ್ರಕ್ರಿಯೆಗೆ ರೈತರು ಸಹಕಾರ ನೀಡಬೇಕು" ಎಂದು ಸಚಿವರು ಮನವಿ ಮಾಡಿದ್ದಾರೆ.












Click it and Unblock the Notifications