ಅಡಿಕೆ ಬೆಳೆಗೆ ಎಲೆಚುಕ್ಕೆ ರೋಗ; ಮುಂದಿನ ವಾರ ಕೇಂದ್ರ ತಂಡ ಆಗಮನ
ಶಿವಮೊಗ್ಗ, ನವೆಂಬರ್ 16; ಕರ್ನಾಟಕದ ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಅಡಿಕೆ ಬೆಳೆಗೆ ಎಲೆಚುಕ್ಕೆ ರೋಗ ಕಾಣಿಸಿಕೊಂಡಿದೆ. ರೈತರು ಕಂಗಾಲಾಗಿದ್ದು, ಮುಂದಿನ ದಾರಿ ಏನು? ಎಂದು ಚಿಂತಿಸುತ್ತಿದ್ದಾರೆ.
ಗೃಹ ಸಚಿವ, ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ, "ಮುಂದಿನ ವಾರ ಅಡಿಕೆ ಬೆಳೆ ಎಲೆಚುಕ್ಕೆ ರೋಗ ಅಧ್ಯಯನಕ್ಕೆ ಕೇಂದ್ರದ ತಂಡ ರಾಜ್ಯಕ್ಕೆ ಆಗಮಿಸಲಿದೆ" ಎಂದು ಹೇಳಿದ್ದಾರೆ. ಕೇಂದ್ರ ತಂಡದ ಪರಿಶೀಲನೆ ಬಳಿಕ ಪರಿಹಾರ ಘೋಷಣೆ ಮಾಡಲಿದೆಯೇ? ಎಂದು ಕಾದು ನೋಡಬೇಕು.
ಎಲೆಚುಕ್ಕೆ ರೋಗಕ್ಕೆ ಔಷಧಿ ಲಭಿಸಿದರೆ ಕೂಡಲೇ ಕ್ರಮ: ಸಿಎಂ ಬಸವರಾಜ ಬೊಮ್ಮಾಯಿ
ರಾಜ್ಯದಲ್ಲಿ ಅಡಿಕೆ ತೋಟಗಳಲ್ಲಿ ಹಬ್ಬಿರುವ ಎಲೆಚುಕ್ಕೆ ರೋಗದ ಬಗ್ಗೆ ಅಧ್ಯಯನ ನಡೆಸಿ, ಪರಿಹಾರ ಕಂಡುಕೊಳ್ಳಲು, ಕೇಂದ್ರ ಸರ್ಕಾರದ 7 ಮಂದಿ ತಜ್ಞರನ್ನು ಒಳಗೊಂಡ ಸಮಿತಿ ಮುಂದಿನ ವಾರ ರಾಜ್ಯಕ್ಕೆ ಆಗಮಿಸಲಿದೆ.
ಅಡಿಕೆಯಲ್ಲಿ ಎಲೆಚುಕ್ಕೆ ರೋಗ; ಹತೋಟಿಗೆ ರೈತರಿಗೆ ಸಲಹೆಗಳು
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಸಚಿವರು, "ಮಲೆನಾಡು ಹಾಗೂ ಕರಾವಳಿ ಭಾಗದ ರೈತರು ಎದುರಿಸುತ್ತಿರುವ ಸಂಕಷ್ಟಕ್ಕೆ, ಕೇಂದ್ರ ಸರಕಾರ ತಕ್ಷಣ ಸ್ಪಂದಿಸಿದ್ದು ಅಡಿಕೆ ಬೆಳೆಗೆ ಎದುರಾಗಿರುವ ರೋಗ ನಿವಾರಣೆಗೆ ಪರಿಹಾರ ಕಂಡುಕೊಳ್ಳಲು ಸಮಿತಿ ಸಹಕಾರಿಯಾಗಲಿ" ಎಂದರು.
ಅಡಿಕೆಗೆ ಎಲೆಚುಕ್ಕೆ ರೋಗ, ರೈತರಿಗೆ ಆತಂಕ ಬೇಡ; ಆರಗ ಜ್ಞಾನೇಂದ್ರ
ಅಡಿಕೆ ಬೆಳೆಗಾರರ ಆತಂಕಕ್ಕೆ ಕಾರಣವಾದ ಎಲೆಚುಕ್ಕೆ ರೋಗಕ್ಕೆ ಪರಿಹಾರ ಬಯಸಿ ನಿಕಟಪೂರ್ವ ಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಬಿ. ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ನಿಯೋಗವೊಂದು ಭೇಟಿಯಾಗಿತ್ತು. ಮಲೆನಾಡು ಭಾಗದ ಶಾಸಕರು ಸಹ ನಿಯೋಗದಲ್ಲಿದ್ದರು.
ಸಚಿವರಿಗೆ ಬೆಳೆಗಾರರ ಪರಿಸ್ಥಿತಿ ವಿವರಿಸಲಾಗಿತ್ತು. ಕೇಂದ್ರ ಸರ್ಕಾರ ಸಮಸ್ಯೆಯ ಪರಿಹಾರಕ್ಕೆ ಪೂರಕವಾಗಿ ಸ್ಪಂದಿಸಿದ್ದು, ಸಮಿತಿ ರಚನೆ ಮಾಡಿದೆ. ಈ ಸಮಿತಿಯು ಎಲೆಚುಕ್ಕೆ ರೋಗ, ರೈತರ ಪರಿಸ್ಥಿತಿ ತಿಳಿಯಲು ಮುಂದಿನ ವಾರ ರಾಜ್ಯಕ್ಕೆ ಆಗಮಿಸಲಿದೆ.
ಅಡಿಕೆ ಬೆಳೆಗಾರರಿಗೆ ಆತಂಕ; ಕರ್ನಾಟಕದಲ್ಲಿ ಸುಮಾರು 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ತೋಟಗಳು ಎಲೆಚುಕ್ಕೆ ರೋಗಕ್ಕೆ ಬಲಿಯಾಗಿವೆ. ಈ ರೋಗ ಇತರೆಡೆಗೆ ಹರಡುತ್ತಿದೆ ಇದರಿಂದಾಗಿ ಬೆಳೆಗಾರರು ಆತಂಕಗೊಂಡಿದ್ದಾರೆ.
ನವೆಂಬರ್ 22ರಂದು ಕೇಂದ್ರದ ತಂಡವನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಸಚಿವ ಆರಗ ಜ್ಞಾನೇಂದ್ರ ಭೇಟಿ ಮಾಡಿ ರೋಗದ ತೀವ್ರತೆ, ಬೆಳೆಗಾರರ ಪರಿಸ್ಥಿತಿಯ ಕುರಿತು ಮನವರಿಕೆ ಮಾಡಿಕೊಡಲಿದ್ದಾರೆ.
ಸುಮಾರು 50 ಲಕ್ಷ ಜನರಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಜೀವನೋಪಾಯ ಕಲ್ಪಿಸಿಕೊಟ್ಟಿರುವ ಅಡಿಕೆ ಬೆಳೆ ಮಲೆನಾಡು ಭಾಗದ ರೈತರ ಆರ್ಥಿಕ ಜೀವನಾಡಿಯಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕರಾವಳಿ ಭಾಗದಲ್ಲಿನ ರೈತ ಸಮುದಾಯ ಎಲೆಚುಕ್ಕೆ ರೋಗದಿಂದ ಹಾಳಾಗುತ್ತಿರುವ ತೋಟವನ್ನು ನೋಡಿ ಗಾಬರಿಗೊಂಡಿದ್ದಾರೆ.
ರೋಗಕ್ಕೆ ಕಾರಣವೇನು?; ಅಡಿಕೆ ಬೆಳೆಯಲ್ಲಿನ ಎಲೆಚುಕ್ಕೆ ರೋಗ ಫಸಲಿನ ಮೇಲೆ ಪರಿಣಾಮ ಬೀರುತ್ತಿದೆ. ಬೆಳೆಗಾರರು ಸಾಮೂಹಿಕವಾಗಿ ಮುಂಜಾಗೃತ ಕ್ರಮಕೈಗೊಂಡು ಸೂಕ್ತ ಔಷಧ ಸಿಂಪರಣೆ ಮಾಡುವುದು ಅಗತ್ಯ ಎಂದು ಶಿವಮೊಗ್ಗದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ನಿರಂಜನ್ ಕೆ. ಎಸ್. ಹೇಳಿದ್ದಾರೆ.
ಮಲೆನಾಡಿನ ಪ್ರಮುಖ ಪ್ರದೇಶಗಳಲ್ಲಿ ಕಳೆದ ವರ್ಷ ಡಿಸೆಂಬರ್ನಲ್ಲಿ ಆರಂಭವಾದ ಮಳೆ ಅಕ್ಟೋಬರ್ ತನಕ ಸುರಿದಿದೆ. ಅಡಿಕೆಗೆ ಅಗತ್ಯವಿರುವ ಪ್ರಮಾಣದ ಬಿಸಿಲು ಸಿಗುತ್ತಿಲ್ಲ, ಹೀಗಾಗಿ ಯಥೇಚ್ಛವಾಗಿ ಸುರಿಯುತ್ತಿರುವ ಮಳೆ ಎಲೆಚುಕ್ಕೆ ರೋಗಕ್ಕೆ ಪ್ರಮುಖ ಕಾರಣ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ರೋಗ ಬಾಧಿತ ಮರದ ಸೋಗೆಗಳ ಮೇಲ್ಭಾಗದಲ್ಲಿ ಹಳದಿ ಮತ್ತು ಕಪ್ಪು ಬಣ್ಣದ ಚುಕ್ಕೆಗಳು ಕಾಣಿಸುತ್ತವೆ. ಈ ಚುಕ್ಕೆಗಳು ಶೀಘ್ರವಾಗಿ ಒಂದಕ್ಕೊಂದು ಕೂಡಿಕೊಂಡು ಪೂರ್ತಿ ಸೋಗೆಗಳನ್ನು ಆವರಿಸುತ್ತದೆ. ನಂತರ ಸೋಗೆಗಳು ಒಣಗಲಾರಂಭಿಸುತ್ತವೆ. ಇಂತಹ ಒಣಗಿದ ಎಲ್ಲಾ ಸೋಗೆಗಳು ಜೋತುಬಿದ್ದು ಮರ ಶಕ್ತಿ ಕಳೆದುಕೊಂಡು ಇಳುವರಿ ಕುಂಠಿತಗೊಳ್ಳುತ್ತದೆ.