ರೈತರ ಜಮೀನಿಗೆ ಪರಿಹಾರ ಕೊಡಿ, ಇಲ್ಲಾಂದ್ರೆ ರೈಲು ಕೊಡಿ!
ಶಿಮ್ಲಾ, ಏ 14: ನ್ಯಾಯಾಲಯ ನೀಡುವ ಆದೇಶ ಈ ರೀತಿಯೂ ಇರಲು ಸಾಧ್ಯವೇ ಎಂದು ಹುಬ್ಬೇರಿಸುವಂತೆ ಮಾಡಿದೆ ಹಿಮಾಚಲ ಪ್ರದೇಶದ ಸ್ಥಳೀಯ ಕೋರ್ಟ್ ನೀಡಿದ ಆದೇಶವೊಂದು.
ಭಾರತೀಯ ರೈಲ್ವೆ, ಹಳಿ ನಿರ್ಮಾಣಕಕ್ಕಾಗಿ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಇಬ್ಬರು ರೈತರ ಜಮೀನನ್ನು ಸ್ವಾಧೀನ ಪಡಿಸಿಕೊಂಡಿತ್ತು. ಭೂಸ್ವಾಧೀನ ಪಡಿಸಿಕೊಂಡು ಒಂಬತ್ತು ವರ್ಷವಾದರೂ ರೈಲ್ವೆ ಇಲಾಖೆ ಈ ಇಬ್ಬರು ರೈತರಿಗೆ ಪರಿಹಾರ ನೀಡಿರಲಿಲ್ಲ.
ಇದರಿಂದ ಇವರಿಬ್ಬರೂ ಕೋರ್ಟ್ ಮೆಟ್ಟಲೇರಿದ್ದರು. ಮೇಲಾ ರಾಮ್ ಮತ್ತು ಮದಲ್ ಲಾಲ್ ಎನ್ನುವ ರೈತರಿಗೆ ಕ್ರಮವಾಗಿ 8.91 ಲಕ್ಷ ಮತ್ತು 26.53 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಹಿಮಾಚಲ ಪ್ರದೇಶದ ಸ್ಥಳೀಯ ನ್ಯಾಯಾಲಯ 2013ರಲ್ಲಿ ರೈಲ್ವೆ ಇಲಾಖೆಗೆ ನಿರ್ದೇಶನ ನೀಡಿತ್ತು.
ಕೋರ್ಟ್ ಆದೇಶದ ಆರು ವಾರದ ಗಡುವಿನೊಳಗೆ ಇಲಾಖೆ ರೈತರಿಗೆ ಪರಿಹಾರದ ಮೊತ್ತ ನೀಡಬೇಕಿತ್ತು. (ಚೀನಾ ಗಡಿಯಲ್ಲಿ ರೈಲು ನಿಲ್ದಾಣ)
ಕೋರ್ಟ್ ಆದೇಶದ ಎರಡು ವರ್ಷದ ನಂತರವೂ ರೈಲ್ವೆ ಇಲಾಖೆಯಿಂದ ಯಾವ ಪರಿಹಾರವೂ ಬರದಿದ್ದಾಗ ರೈತರು ಮತ್ತೆ ಕೋರ್ಟ್ ಮೆಟ್ಟಲೇರಿದರು.
ಕೋರ್ಟ್ ಆದೇಶ ಉಲ್ಲಂಘಿಸಿದ್ದಕ್ಕಾಗಿ ರೈಲ್ವೆ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡ ಮುಖೇಶ್ ಬನ್ಸಾಲ್ ಇದ್ದ ನ್ಯಾಯಪೀಠ ಐತಿಹಾಸಿಕ ತೀರ್ಪು ಪ್ರಕಟಿಸಿದೆ.
ಇದೇ ಏಪ್ರಿಲ್ ಹದಿನೈದನೇ ತಾರೀಕಿನೊಳಗೆ ರೈಲ್ವೆ ಇಲಾಖೆ ರೈತರಿಬ್ಬರಿಗೆ ಪರಿಹಾರ ನೀಡದಿದ್ದರೆ, ದೆಹಲಿ - ಉನಾ ಜನಶತಾಬ್ದಿ ರೈಲನ್ನು ರೈತರಿಬ್ಬರ ಹೆಸರಿಗೆ ಬರೆಯಲು ಕೋರ್ಟ್ ರೈಲ್ವೆ ಇಲಾಖೆಗೆ ಆದೇಶ ನೀಡಿದೆ.
ಬುಧವಾರದ (ಏ 15) ಗಡುವು ಮೀರಿದರೆ ಏಪ್ರಿಲ್ 16ರಂದು ಬೆಳಗ್ಗೆ ಐದು ಗಂಟೆಗೆ ದೆಹಲಿಯಿಂದ ಹೊರಡುವ ಜನಶತಾಬ್ದಿ ರೈಲನ್ನು ಉನಾ ನಿಲ್ದಾಣದಲ್ಲಿ ಕೋರ್ಟ್ ತನ್ನ ವಶಕ್ಕೆ ಪಡೆದುಕೊಳ್ಳಲಿದೆ.
1998ರಲ್ಲಿ ರೈಲ್ವೆ ಇಲಾಖೆ ಈ ಇಬ್ಬರು ರೈತರಿಂದ ಜಮೀನು ಸ್ವಾಧೀನ ಪಡಿಸಿಕೊಂಡಿತ್ತು. (ಮಾಹಿತಿ: ಟೈಮ್ಸ್ ಆಫ್ ಇಂಡಿಯಾ)