ಮಕ್ಕಳ ಎಡವಟ್ಟಿಗೆ ಲಕ್ಷಾಂತರ ರೂಪಾಯಿಯ ತಂಬಾಕು ಬೆಳೆ ನಾಶ
ಮೈಸೂರು, ಜೂನ್ 10: ಹುಲುಸಾಗಿ ಬೆಳೆದಿದ್ದ ತಂಬಾಕು ಬೆಳೆಗೆ ಕೀಟನಾಶಕದ ಬದಲಿಗೆ ಕಳೆನಾಶಕ ಸಿಂಪಡಿಸಿದ ಪರಿಣಾಮ ನಾಲ್ಕು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ನಾಶವಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿರುವ ಘಟನೆ ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಶಿರೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ತಂಬಾಕು ಬೆಳೆಗಾರ ಕುಮಾರ ಎಂಬುವರೇ ತಮ್ಮ ಮಕ್ಕಳು ಮಾಡಿದ ಎಡವಟ್ಟಿನಿಂದ ತಂಬಾಕು ಬೆಳೆಯನ್ನು ಕಳೆದುಕೊಂಡವರು. ಕುಮಾರ ಅವರು ಲಕ್ಷಾಂತರ ರೂಪಾಯಿ ಸಾಲ ಮಾಡಿ ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ತಂಬಾಕು ಬೆಳೆಯನ್ನು ಬೆಳೆದಿದ್ದರು. ಗೊಬ್ಬರ ಹಾಕಿ ಆರೈಕೆ ಮಾಡಿದ್ದರಿಂದ ಬೆಳೆ ಹುಲುಸಾಗಿ ಬಂದಿತ್ತು. ಇದರಿಂದ ಈ ಬಾರಿ ಉತ್ತಮ ಇಳುವರಿ ಪಡೆಯಬಹುದೆಂಬ ನಿರೀಕ್ಷೆಯಲ್ಲಿ ಅವರಿದ್ದರು.
ಈ ನಡುವೆ ತಂಬಾಕು ಗಿಡಗಳಲ್ಲಿ ಕೀಟಗಳು ಕಂಡು ಬಂದಿದ್ದು, ಇವುಗಳನ್ನು ಹೀಗೆಯೇ ಬಿಟ್ಟರೆ ಎಲೆಗಳನ್ನು ತಿಂದು ಹಾಕಿ ಇಳುವರಿ ಕುಂಠಿತವಾಗುವ ಸಾಧ್ಯತೆಯಿತ್ತು. ಹೀಗಾಗಿ ಅವರು ಕೀಟನಾಶಕವನ್ನು ತಂದು ಮನೆಯಲ್ಲಿಟ್ಟು, ಗಿಡಗಳಿಗೆ ಸಿಂಪಡಣೆ ಮಾಡಲು ತಯಾರಿ ನಡೆಸಿದ್ದರು.

ಈ ನಡುವೆ ಬ್ಯಾಂಕಿಗೆ ಹೋಗುವ ಸಂದರ್ಭ ಬಂದಿದ್ದು, ಹೋಗುವ ಮುನ್ನ ತಮ್ಮ ಮಕ್ಕಳಿಗೆ, ಕೀಟನಾಶಕವನ್ನು ತಂಬಾಕು ಗಿಡಗಳಿಗೆ ಸಿಂಪಡಣೆ ಮಾಡುವಂತೆ ಹೇಳಿ ಹೋಗಿದ್ದರು. ಮನೆಯಲ್ಲಿ ಕೀಟ ನಾಶಕದೊಂದಿಗೆ ಕಳೆ ನಾಶಕವನ್ನು ಕೂಡ ಇಡಲಾಗಿತ್ತು. ಇವೆರಡರಲ್ಲಿ ಯಾವುದು ಕೀಟನಾಶಕ ಎಂಬುದನ್ನು ತಿಳಿದುಕೊಳ್ಳದ ಮಕ್ಕಳು, ತಂದೆ ಇಟ್ಟಿದ್ದ ನಾಲ್ಕು ಬಗೆಯ ಔಷಧಿಗಳನ್ನು ಬೆರೆಸಿ ಇಡೀ 4 ಎಕರೆ ಜಮೀನಿನಲ್ಲಿದ್ದ ಗಿಡಗಳಿಗೆ ಸಿಂಪಡಣೆ ಮಾಡಿದ್ದಾರೆ.
ಇದರಿಂದ ಸಂಜೆ ವೇಳೆಗೆ ಗಿಡಗಳ ಎಲೆಗಳು ಒಣಗಿದಂತೆ ಕಾಣತೊಡಗಿದಾಗ ಗಾಬರಿಗೊಂಡ ರೈತ, ಮಕ್ಕಳನ್ನು ಕೇಳಿದಾಗ ಕಳೆ ನಾಶಕ ಬೆರೆಸಿದ ಬಗ್ಗೆ ಹೇಳಿದ್ದಾರೆ. ಇದರಿಂದ ಏನು ಮಾಡಬೇಕೆಂದೇ ತೋಚದಂತಾಗಿದ್ದಾರೆ ರೈತ ಕುಮಾರ. ಪ್ರತಿವರ್ಷ ತಂಬಾಕು ಬೆಳೆಯುತ್ತಿದ್ದೆ ಇದರಿಂದ ಮೂರು ಸಾವಿರ ಕೆಜಿಯಷ್ಟು ಇಳುವರಿ ಬರುತ್ತಿತ್ತು. ಈ ವರ್ಷವೂ ಉತ್ತಮವಾಗಿ ಬೆಳೆ ಬಂದಿತ್ತು. ಇನ್ನೇನು ಕಟಾವು ಮಾಡಬೇಕಾಗಿತ್ತು. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಬೆಳೆ ಬೆಳೆಯಲು ಹುಣಸೂರಿನ ಬ್ಯಾಂಕಿನಿಂದ ಸುಮಾರು ಆರು ಲಕ್ಷ ರೂಪಾಯಿ ಸಾಲ ಪಡೆದಿದ್ದೆ ಎಂದು ಅಳಲು ತೋಡಿಕೊಂಡಿದ್ದಾರೆ.












Click it and Unblock the Notifications