ಮಂಡ್ಯ: ರೈತರಿಗೆ ಮಾಹಿತಿ ನೀಡಲು ರೆಡಿಯಾಗುತ್ತಿದ್ದಾರೆ ಕೃಷಿ ಸಖಿಯರು!
ಮಂಡ್ಯ, ಸೆಪ್ಟೆಂಬರ್ 7 : ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರೈತರಿಗೆ ಕೃಷಿ ಮಾಹಿತಿಯನ್ನು ನೀಡುವುದಕ್ಕಾಗಿ ಕೃಷಿ ಸಖಿಯರು ಸಿದ್ಧವಾಗುತ್ತಿದ್ದಾರೆ. ವಿ.ಸಿ.ಫಾರಂನ ಕೃಷಿ ವಿಜ್ಞಾನ ಕೇಂದ್ರದಲ್ಲಿ ತರಬೇತಿ ಪಡೆದಿರುವ ಸಖಿಯರು ಗ್ರಾಮಸೇವಕರಂತೆ ಕಾರ್ಯನಿರ್ವಹಿಸಲು ಬರುತ್ತಿದ್ದಾರೆ. ಇನ್ನು ಮುಂದೆ ಪಂಚಾಯಿತಿ ವ್ಯಾಪ್ತಿಯ ರೈತರು ಕೃಷಿ ಮಾಹಿತಿಗಾಗಿ ರೈತಸಂಪರ್ಕ ಕೇಂದ್ರಗಳಿಗೆ ಹೋಗಬೇಕಿಲ್ಲ. ಕೃಷಿ ಸಖಿಯರೊಂದಿಗೆ ಸಮಾಲೋಚಿಸಿ ಮಾಹಿತಿ ಪಡೆಯಬಹುದಾಗಿದೆ.
ಈ ಹಿಂದೆ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮಸೇವಕರಿದ್ದರು. ಅವರು ರೈತರಿಗೆ ಬೆಳೆಗಳು, ಕೀಟನಾಶಕಗಳು, ರೋಗಬಾಧೆ, ಬೆಳೆ ಬೆಳೆಯುವ ವಿಧಾನ, ರೋಗದಿಂದ ಸಂರಕ್ಷಣೆ ಪಡೆಯುವ ಬಗ್ಗೆ ಮಾಹಿತಿ ನೀಡುತ್ತಿದ್ದರು. ತದನಂತರದಲ್ಲಿ ಗ್ರಾಮಸೇವಕರು ಮರೆಯಾದರು. ಇದೀಗ ಆ ಜಾಗಕ್ಕೆ ಕೃಷಿ ಸಖಿಯರು ಬಂದಿದ್ದಾರೆ. ಗ್ರಾಮಸೇವಕರ ಮಾದರಿಯಲ್ಲೇ ಇವರೂ ಕರ್ತವ್ಯನಿರ್ವಹಿಸುವರು.
ಜಮೀನುಗಳಲ್ಲಿ ಉತ್ಪಾದನೆ ಮತ್ತು ಉತ್ಪಾದಕತೆ ಸವೆತ, ಅತಿಯಾದ ಬೆಳೆ ಬೆಳವಣಿಗೆ, ಕೀಟ ಮತ್ತು ರೋಗದಂತಹ ನೈಸರ್ಗಿಕ ವಿಪತ್ತುಗಳಿಗೆ ಪರಿಹಾರ ಒದಗಿಸುವುದರ ಬಗ್ಗೆ ತಿಳಿಸುವ ಸಂಪೂರ್ಣ ಜವಾಬ್ದಾರಿ ಕೃಷಿ ಸಖಿಯರದ್ದಾಗಿರುತ್ತದೆ .

30 ಮಂದಿ ಆಯ್ಕೆ
ಮೊದಲ ಹಂತದಲ್ಲಿ ಜಿಲ್ಲಾ ಪಂಚಾಯತ್ನ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಜಿಲ್ಲಾ ಗ್ರಾಮೀಣ ಅಭಿವೃದ್ಧಿ ಏಜೆನ್ಸಿಯವರು ನಾಗಮಂಗಲ ತಾಲೂಕಿನಿಂದ 12, ಕೆ.ಆರ್.ಪೇಟೆ ತಾಲೂಕಿನಿಂದ 12, ಮಂಡ್ಯ ತಾಲೂಕಿನಿಂದ 6 ಮಂದಿ ಸೇರಿ 30 ಮಂದಿ ಕೃಷಿ ಸಖಿಯರನ್ನು ಆಯ್ಕೆ ಮಾಡಿಕೊಂಡು, ಕೃಷಿ ವಿಜ್ಞಾನ ಕೇಂದ್ರದಲ್ಲಿ ತರಬೇತಿ ನೀಡಲಾಗಿದೆ.
ಆಯ್ಕೆ ಹೇಗೆ?
ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬರು ಕೃಷಿ ಸಖಿಯರು ಇರಲಿದ್ದಾರೆ. ಇವರನ್ನು ಸೀಶಕ್ತಿ ಸ್ವಸಹಾಯ ಸಂಘಗಳಿಂದ ಆಯ್ಕೆ ಮಾಡಲಾಗಿದೆ. ಸಂಘಗಳಲ್ಲಿ ಸದಸ್ಯರಾಗಿ 2 ರಿಂದ 3 ವರ್ಷಗಳಾಗಿರಬೇಕು. ಎಸ್ಸೆಸೆಲ್ಸಿ ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿರಬೇಕು. ಅಂತಹವರನ್ನು ಕೃಷಿ ಸಖಿಯರನ್ನಾಗಿ ಆಯ್ಕೆ ಮಾಡಿಕೊಳ್ಳಲಾಗುವುದು. ತರಬೇತಿ ಪಡೆದು ಕೃಷಿ ಸಖಿಯಂತೆ ಕಾರ್ಯನಿರ್ವಹಿಸುವವರಿಗೆ ಮಾಸಿಕ 3000 ರೂ. ಗೌರವಧನ ನೀಡಲಾಗುತ್ತದೆ.
ಮಣ್ಣು ಫಲವತ್ತತೆ, ಬೆಳೆಗಳಿಗೆ ರೋಗ-ಕೀಟಬಾಧೆ, ಬಿತ್ತನೆ ಬೀಜಗಳ ಆಯ್ಕೆ ಮತ್ತು ಮಹತ್ವ, ಬೆಳೆಗಳ ಸಂರಕ್ಷಣೆ, ಬೆಳೆಯುವ ವಿಧಾನ, ರಾಸಾಯನಿಕ ಗೊಬ್ಬರಗಳ ಬಳಸುವ ವಿಧಾನ, ರೋಗ ಹರಡದಂತೆ ತಡೆಯಲು ವಹಿಸಬೇಕಾದ ಮುಂಜಾಗ್ರತೆ ಹೀಗೆ ಕೃಷಿಗೆ ಸಂಬಂಸಿದ ಎಲ್ಲಾ ಮಾಹಿತಿಯನ್ನು ರೈತರಿಗೆ ನೀಡಲಿದ್ದಾರೆ.

ರೈತರೊಂದಿಗೆ ನಿರಂತರ ಸಂಪರ್ಕ
ಗ್ರಾಮ ಮಟ್ಟದಲ್ಲೇ ಇದ್ದುಕೊಂಡು ಸ್ಥಳೀಯ ರೈತರೊಂದಿಗೆ ನಿರಂತರ ಸಂಪರ್ಕ ಸಾಧಿಸುತ್ತಾ ಅವರಿಗೆ ಅಗತ್ಯ ಮಾಹಿತಿ ನೀಡುವುದರೊಂದಿಗೆ ಕೃಷಿ ಕ್ಷೇತ್ರವನ್ನು ಬಲವರ್ಧನೆಗೊಳಿಸುವ ಮಹತ್ವಾಕಾಂಕ್ಷೆಯನ್ನು ಸರ್ಕಾರ ಹೊಂದಿದೆ. ಕೃಷಿ ವಿಜ್ಞಾನ ಕೇಂದ್ರಗಳು ಕೃಷಿಯಲ್ಲಿ ವ್ಯವಸ್ಥಿತವಾಗಿ ಮತ್ತು ವೈಜ್ಞಾನಿಕ ಪದ್ಧತಿಯಲ್ಲಿ ಸಖಿಯರಿಗೆ ತರಬೇತಿ ನೀಡಿ ಕೃಷಿಯಲ್ಲಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳನ್ನಾಗಿಸುವ ನಿಟ್ಟಿನಲ್ಲಿ ಹೆಜ್ಜೆಯನ್ನಿಟ್ಟಿದೆ.












Click it and Unblock the Notifications