ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲೂ ಮದ್ಯ ನಿಷೇಧಿಸಿ!
ಬೆಂಗಳೂರು, ಸೆ. 09: ಜನರ ಆರೋಗ್ಯದ ದೃಷ್ಟಿಯಿಂದ ಕೇವಲ ವೈನ್ ಮತ್ತು ಬೀಯರ್ ಮಾರಾಟಕ್ಕೆ ಅವಕಾಶ ನೀಡಿ ಕೇರಳ ರಾಜ್ಯ ಕಾನೂನನ್ನು ಜಾರಿ ಗೊಳಿಸಿದೆ.ವೈನ್ ಮತ್ತು ಬಿಯರ್ ಬಿಟ್ಟು ಬೇರೆ ಮದ್ಯ ಮಾರಾಟದ ತಡೆ ಒಡ್ಡುವುದರಿಂದ ರಾಜ್ಯದ ರೈತರಿಗೆ ವರದಾನವಾಗಲಿದೆ. ಕೇರಳ ಮಾದರಿ ನಿಷೇಧವನ್ನು ಕರ್ನಾಟಕದಲ್ಲೂ ಜಾರಿಗೊಳಿಸುವಂತೆ ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘ ಮತ್ತು ಕರ್ನಾಟಕ ರಾಜ್ಯ ವೈನ್ ಉತ್ಪಾದಕರ ಸಂಘ ಆಗ್ರಹಿಸಿದೆ.
ಕೇರಳ ದೇಶದಲ್ಲೇ ಅತಿ ಹೆಚ್ಚು ಮದ್ಯ ಸೇವನೆಯ ರಾಜ್ಯ, ಇದರಿಂದ ಎಚ್ಚೆತ್ತು ಕೊಂಡ ಅಲ್ಲಿನ ಸರ್ಕಾರ ಜನರ ಆರೋಗ್ಯದ ದೃಷ್ಟಿಯಿಂದ ಕೇವಲ ವೈನ್ ಮತ್ತು ಬಿಯರ್ ಮಾರಾಟಕ್ಕೆ ಅವಕಾಶ ನೀಡಿ ಕಾನೂನನ್ನು ಜಾರಿ ಗೊಳಿಸಿದೆ. ಇದು ಜನರ ಆರೋಗ್ಯ ಹೆಚ್ಚಿಸುವುದರ ಜೊತೆಗೆ ದ್ರಾಕ್ಷಿ ಬೆಳೆಗಾರರಿಗೂ ವರದಾನವಾಗಿದೆ. ಈ ಮಾದರಿಯನ್ನು ಕರ್ನಾಟಕದಲ್ಲೂ ಜಾರಿಗೆ ತರಬೇಕೆಂಬುದು ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘ ಮತ್ತು ಕರ್ನಾಟಕ ರಾಜ್ಯ ವೈನ್ ಉತ್ಪಾದಕರ ಸಂಘದ ಒತ್ತಾಯವಾಗಿದೆ.

ವೈನ್ ಒಂದು ಆರೋಗ್ಯಕರ ಪೇಯವಾಗಿದ್ದು ಇದರಿಂದ ಲಭಿಸುವ ಲಾಭ ನೂರಾರಿದೆ. ವೈನ್ ಮಾರಾಟಕ್ಕೆ ಪ್ರೋತ್ಸಾಹ ನೀಡುವುದರಿಂದ ಜನರ ಆರೋಗ್ಯದ ಮೇಲೂ ಸತ್ ಪರಿಣಾಮ ಬೀರುತ್ತದೆ. ದೇಶಿಯ ವೈನ್ ಉತಾದ್ಪಕರಿಗೆ ಉತ್ತೇಜನ ದೊರೆತಂತಾಗುತ್ತದೆ ಎಂದು ಕರ್ನಾಟಕ ರಾಜ್ಯ ವೈನ್ ಉತ್ಪಾದಕರ ಸಂಘದ ಅಧ್ಯಕ್ಷರಾದ ಪಿ.ಎಲ್.ವೆಂಕಟರಾಮರೆಡ್ಡಿ ತಿಳಿಸಿದರು.
ರೈತರ ಹಿತ ಕಾಪಾಡಬಹುದು: ಇದೆಲ್ಲ ವೈನ್ ಉತ್ಪಾದಕರ ವಿಷಯವಾದರೇ ರಾಜ್ಯ ಸರ್ಕಾರ ಈ ಮಾದರಿಯನ್ನು ಅನುಷ್ಠಾನಗೊಳಿಸಿದರೇ ರೈತರ ಹಿತ ಕಾಪಾಡಬಹುದು. ಸದ್ಯ ನಡೆಯುತ್ತಿರುವ ಸರಣಿ ರೈತರ ಆತ್ಮಹತ್ಯೆಯನ್ನು ತಡೆಯುವಲ್ಲಿ ಇದೊಂದು ಅದ್ಭುತ ಪರಿಹಾರ ಎಂದೇ ಹೇಳಬಹುದು. ಯಾಕೆಂದರೆ ವೈನ್ ಉತ್ಪಾದನೆಗೆ ಬೇಕಾಗಿರುವ ಮೂಲ ವಸ್ತು ದ್ರಾಕ್ಷಿ. ಅಲ್ಲದೇ ದ್ರಾಕ್ಷಿ ಬೆಳೆ ರೈತರಿಗೆ ಲಾಭದಾಯಕ ಕೂಡ ಆಗಿದೆ.
ರಾಜ್ಯದಲ್ಲಿ ಕೂಡ ಕೇರಳ ಮಾದರಿಯಲ್ಲಿ ಹೊಸ ಮದ್ಯ ನೀತಿಯನ್ನು ಜಾರಿಗೆ ತಂದು ಕೇವಲ ವೈನ್ ಮತ್ತು ಬೀಯರ್ ಮಾರಟಕ್ಕೆ ಅವಕಾಶ ಮಾಡಿಕೊಡುವ ದಿಟ್ಟ ನಿರ್ಧಾರವನ್ನು ಸರ್ಕಾರ ಕೈಗೊಳ್ಳಬೇಕು. ಇದು ದ್ರಾಕ್ಷಿ ಬೆಳೆಗಾರರು ಮತ್ತು ವೈನ್ ಉತ್ಪಾದಕರ ಹಿತ ಕಾಯುವ ಜೊತೆಜೊತೆಗೆ ರಾಜ್ಯದ ಜನತೆಯ ಹಿತವನ್ನು ಕಾಯುವಂತಾಗುತ್ತೆ ಎಂದು ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘ ಮತ್ತು ಕರ್ನಾಟಕ ರಾಜ್ಯ ವೈನ್ ಉತ್ಪಾದಕರ ಸಂಘ ಒತ್ತಾಯಿಸಿದೆ.

ಮುಂಬರುವ ದಿನಗಳಲ್ಲಿ ಈ ಬಗ್ಗೆ ಜನ ಸಮಾನ್ಯರಲ್ಲಿ ಅರಿವು ಮೂಡಿಸುವುದಕ್ಕೆ ಕಾರ್ಯಕ್ರಮಗಳನ್ನು ಕೂಡಾ ಹಮ್ಮಿಕೊಳ್ಳಲಾಗುವುದು ಎಂದು ವೆಂಕಟರಾಮರೆಡ್ಡಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳೆಗಾರರು ಮತ್ತು ವೈನ್ ಉತ್ಪಾದಕರ ಸಂಘದ ಅಧ್ಯಕ್ಷ ರಮೆಶ್ ಎನ್ ಸೇರಿದಂತೆ, ಹಲವು ವೈನರಿಗಳ ಪ್ರತಿನಿಧಿಗಳು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.












Click it and Unblock the Notifications