'ಸೂರ್ಯ ರೈತ' ಯೋಜನೆಗೆ ಚಾಲನೆ: ಪಂಪ್ಸೆಟ್ಗೆ ಸೋಲಾರ್ ವಿದ್ಯುತ್
ಕನಕಪುರ, ಜನವರಿ 20: ಸೌರಶಕ್ತಿ ಆಧಾರಿತ ನೀರಾವರಿ ಪಂಪ್ ಸೆಟ್ ಚಾಲನೆಯ 'ಸೂರ್ಯ ರೈತ' ಯೋಜನೆಗೆ ಕನಕಪುರ ತಾಲ್ಲೂಕಿನ ಹಾರೋಬೆಲೆ ಗ್ರಾಮದಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಶುಕ್ರವಾರ ಚಾಲನೆ ನೀಡಿದ್ದಾರೆ.
ರೈತರ ಹೊಲದಲ್ಲಿಯೇ ಸೌರಶಕ್ತಿ ಫಲಕಗಳ ಮೂಲಕ ವಿದ್ಯುತ್ ಅನ್ನು ಉತ್ಪಾದನೆ ಮಾಡಿ, ಅದರಿಂದಲೇ ಕೃಷಿ ಪಂಪ್ ಸೆಟ್ಗೆ ವಿದ್ಯುತ್ ಪೂರೈಕೆ ಮಾಡುವಂತೆ ಮಾಡುವುದು ಈ ಯೋಜನೆಯ ಉದ್ದೇಶ ಅದಲ್ಲದೆ, ಹೆಚ್ಚುವರಿಯಾಗಿ ಉತ್ಪಾದನೆ ಆಗುವ ವಿದ್ಯುತ್ ಅನ್ನು ನೇರವಾಗಿ ಬೆಸ್ಕಾಂಗೆ ಮಾರಿ ರೈತರಿಗೆ ಆದಾಯ ಹೆಚ್ಚಿಸುವ ಉದ್ದೇಶವನ್ನೂ ಸೂರ್ಯ ರೈತ ಯೋಜನೆ ಹೊಂದಿದೆ.
ಹಾರೋಬೆಲೆ ಗ್ರಾಮ ಪಂಚಾಯಿತಿಯ 310 ಕೃಷಿ ಪಂಪ್ ಸೆಟ್ ಗಳಿಗೆ ಸೌರ ಘಟಕಗಳನ್ನು ಅಳವಡಿಸುವ ಕಾರ್ಯ ನಡೆದಿದ್ದು, 250 ಘಟಕಗಳು ಈಗಾಗಲೇ ಕಾರ್ಯಾರಂಭ ಮಾಡಿವೆ. ಇದಕ್ಕಾಗಿ ಇಂಧನ ಇಲಾಖೆಯು 24.36 ಕೋಟಿ ರೂಪಾಯಿ ವ್ಯಯಿಸಿದೆ.

ಈ ಯೋಜನೆಯ ಮೂಲಕ ಸರ್ಕಾರವೇ ರೈತರಿಗೆ ಉಚಿತವಾಗಿ ಸೋಲಾರ್ ಪ್ಲಾಂಟ್ ಹಾಕಿಕೊಡಲಿದೆ, ಇದರಿಂದ ರೈತನ ಪಂಪ್ಸೆಟ್ಗೆ ಉಚಿತವಾಗಿ ವಿದ್ಯುತ್ ದೊರಕಲಿದೆ, ಅಷ್ಟೇ ಅಲ್ಲದೆ, ಪಂಪ್ಸೆಟ್ಗಳಿಗೆ ಸೋಲಾರ್ ವಿದ್ಯುತ್ ಬಳಸುವುದರಿಂದ ಸಾಕಷ್ಟು ವಿದ್ಯುತ್ ಉಳಿತಾಯ ಆಗುತ್ತದೆ.
ಇಂಧನ ಇಲಾಖೆಯು ಪ್ರತಿ ತಾಲ್ಲೂಕಿಗೆ 20 ಮೆಗಾವ್ಯಾಟ್ ಸಾಮರ್ಥ್ಯದ ಸೋಲಾರ್ ಪ್ಲಾಂಟ್ ಅನ್ನು ಅನುಷ್ಠಾನ ಮಾಡುತ್ತಿದ್ದು, ಇದರಿಂದ ರಾಜ್ಯವು ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲಿದೆ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ದೇಶದಲ್ಲಿಯೇ ಮೊದಲ ಬಾರಿಗೆ ಇಂತಹ ಯೋಜನೆಯೊಂದು ಜಾರಿಗೊಳ್ಳುತ್ತಿದೆ. ದೇಶ ವಿದೇಶಗಳ ಪ್ರತಿನಿಧಿಗಳು ಭೇಟಿ ನೀಡಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ' ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಉದ್ಘಾಟನೆ ಸಂದರ್ಭ ಮಾತನಾಡಿದ ಎಚ್.ಕೆ,.ಪಾಟೀಲ್ ಅವರು ಸೂರ್ಯ ರೈತ ಯೋಜನೆಯನ್ನು ಗದಗಿನಲ್ಲೂ ಅನುಷ್ಠಾನ ಮಾಡುವಂತೆ ಮನವಿ ಮಾಡಿದ್ದಾರೆ.












Click it and Unblock the Notifications