KHB: ಜಿಗಣಿ ಬಳಿ 2500 ಎಕರೆಯಲ್ಲಿ 50000 ನಿವೇಶನ

ಕೆಎಚ್ಬಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸೋಮಣ್ಣ ಅವರು ಜಿಗಣಿ ಸಮೀಪ ನಿರ್ಮಿಸುವ ಈ ಬಡಾವಣೆಗೆ 'ಸ್ವಾಮಿ ವಿವೇಕಾನಂದ ಬಡಾವಣೆ' ಎಂದು ಹೆಸರಿಡಲಾಗುವುದು. ಬಡಾವಣೆ ನಿರ್ಮಾಣಕ್ಕಾಗಿ ಬಜೆಟ್ನಲ್ಲಿ 3,000 ಕೋಟಿ ರೂ. ಮೀಸಲಿಡಲಾಗಿದೆ. ಇದರಲ್ಲಿ 450 ಕೋಟಿ ರೂ. ಅನ್ನು ಕುಡಿಯುವ ನೀರು ಕಲ್ಪಿಸಲು ವೆಚ್ಚ ಮಾಡಲಾಗುವುದು' ಎಂಬ ವಿವರ ನೀಡಿದರು.
ದೇವನಹಳ್ಳಿ ಬಳಿಯೂ 400 ಎಕರೆ:
ದೇವನಹಳ್ಳಿ ಬಳಿಯೂ 400 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡು ಹೊಸ ಬಡಾವಣೆ ನಿರ್ಮಿಸಲು ಆಲೋಚಿಸಲಾಗುತ್ತಿದೆ. ಸರ್ ಎಂವಿ ಲೇ ಔಟಿನಲ್ಲಿ 296 ಮನೆಗಳು, ಕೆಂಗೇರಿ ಬಳಿ 808, ಸೂರ್ಯನಗರದಲ್ಲಿ 384 ಮನೆಗಳನ್ನು ನಿರ್ಮಿಸಿಕೊಡುವ ಕಾರ್ಯ ಪ್ರಗತಿಯಲ್ಲಿದೆ. ಇಲ್ಲೆಲ್ಲ 1, 2, 3 BHK ಮನೆಗಳನ್ನು ಇಲ್ಲಿ ನಿರ್ಮಿಸಿಕೊಡಲಾಗುವುದು.
ವಿವೇಕಾನಂದ ಬಡಾವಣೆಗಾಗಿ ಶೀಘ್ರವೇ ಭೂಸ್ವಾಧೀನ:
'ಶೀಘ್ರವೇ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. 2 ರಿಂದ 3 ವರ್ಷದಲ್ಲಿ ಯೋಜನೆ ಪೂರ್ಣಗೊಳಿಸಲಾಗುವುದು. ಮಂಡಳಿ ನೇರವಾಗಿ ರೈತರಿಂದಲೇ ಭೂ ಸ್ವಾಧೀನಪಡಿಸಿಕೊಳ್ಳಲಿದೆ. ಜಿಪಿಎ ದಾರರ ಭೂಮಿ ನೋಂದಣಿ ಮಾಡಿಕೊಳ್ಳದಿರಲು ತೀರ್ಮಾನಿಸಿದೆ. ರೈತರಿಗೆ ಅನುಕೂಲವಾಗುವಂತೆ ಬಡಾವಣೆ ನಿರ್ಮಿಸಲಾಗುವುದು. ಮಧ್ಯವರ್ತಿಗಳ ಹಾವಳಿ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು' ಎಂದೂ ಅವರು ತಿಳಿಸಿದರು.
ವರ್ತೂರು ಬಳಿ ಈಜಿಪುರ ನಿರಾಶ್ರಿತರಿಗೆ ವಸತಿ:
ನಗರದ ಈಜಿಪುರದ ನಿರಾಶ್ರಿತರಾಗಿ ಪುನರ್ ವಸತಿ ಕಲ್ಪಿಸಬೇಕೆಂದು ವರ್ತೂರು ಬಳಿ 5 ಎಕರೆ ಭೂಮಿಯಲ್ಲಿ ಕೊಳಚೆ ನಿರ್ಮೂಲನೆ ಮಂಡಳಿ ವತಿಯಿಂದ ವಸತಿ ಸಮುಚ್ಛಯ ನಿರ್ಮಿಸಿಕೊಡಲಾಗುವುದು. ಈಜಿಪುರದಲ್ಲಿ ನಿರಾಶ್ರಿತರು ಅಕ್ರಮವಾಗಿ ನೆಲೆಸಿದ್ದರು. ಇಲ್ಲಿ ಮೂಲ ಹಂಚಿಕೆದಾರರಿಗಿಂತ ಇತರರೇ ಹೆಚ್ಚಾಗಿದ್ದರು. ಇವರುಗಳು ಆರ್ಥಿಕವಾಗಿ ಹಿಂದುಳಿದಿರುವ ಕಾರಣ ಹಾಗೂ ಮಾನವೀಯತೆ ದೃಷ್ಟಿಯಿಂದ ಸರಕಾರ ಇವರಿಗೆ ಮನೆ ನಿರ್ಮಿಸಿ ಕೊಡಲಿದೆ ಎಂದು ಸೋಮಣ್ಣ ತಿಳಿಸಿದರು.












Click it and Unblock the Notifications