ಹಬ್ಬಕ್ಕೆ ಸಮ್ಮಿಶ್ರ ಸರ್ಕಾರದ ಗಿಫ್ಟ್: ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲಮನ್ನಾ
Recommended Video

ಬೆಂಗಳೂರು, ಆಗಸ್ಟ್ 24: ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ಸಮ್ಮಿಶ್ರ ಸರ್ಕಾರ ರೈತರಿಗೆ ಭರ್ಜರಿ ಉಡುಗೊರೆ ನೀಡಿದೆ.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ 2 ಲಕ್ಷದವರೆಗಿನ ಸುಸ್ತಿ ಸಾಲವನ್ನು ಮನ್ನಾ ಮಾಡುವ ಮಹತ್ವದ ನಿರ್ಧಾರವನ್ನು ಶುಕ್ರವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ 2 ಲಕ್ಷದವರೆಗಿನ ಸುಸ್ತಿ ಸಾಲ ಮನ್ನಾದ ಜತೆಗೆ 25 ಸಾವಿರ ಚಾಲ್ತಿ ಸಾಲವನ್ನು ಕೂಡ ಮನ್ನಾ ಮಾಡಲಾಗುವುದು. ಇದರಿಂದ ರಾಜ್ಯದ ಬೊಕ್ಕಸಕ್ಕೆ 32 ಸಾವಿರ ಕೋಟಿ ರೂ. ಹೊರೆಯಾಗಲಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಸಾಲಮನ್ನಾ ಮಾಡಲು ಈಗಾಗಲೇ 6,500 ಕೋಟಿ ರೂ. ತೆಗೆದಿರಿಸಲಾಗಿದೆ. ಹಂತಹಂತವಾಗಿ ರೈತರ ಸಾಲ ಮನ್ನಾ ಆಗಲಿದೆ. 2019-20ನೇ ಸಾಲಿನಲ್ಲಿ 8,656 ಕೋಟಿ, 2020-21ನೇ ಸಾಲಿನಲ್ಲಿ 7,856 ಕೋಟಿ ಮತ್ತು 2021-22ನೇ ಸಾಲಿನಲ್ಲಿ 7,231 ಕೋಟಿ ರೂ. ಸಾಲಮನ್ನಾ ಮಾಡಲಾಗುವುದು.

ನಾಲ್ಕು ಹಂತದ ಸಾಲಮನ್ನಾದ ಬಡ್ಡಿ ವಿಚಾರದಲ್ಲಿ ಕೆಲವು ರಾಷ್ಟ್ರೀಕೃತ ಬ್ಯಾಂಕುಗಳು ಈ ಹಿಂದೆ ಹಿಂದೆ ಸರಿದಿದ್ದವು. ಹೀಗಾಗಿ ಮಾರುಕಟ್ಟೆಯ ಶೇ 12ರ ಬಡ್ಡಿದರ ಪಾವತಿಸಲು ಸರ್ಕಾರ ನಿರ್ಧರಿಸಿದೆ. 7,419 ಕೋಟಿ ರೂ. ಬಡ್ಡಿ ಮೊತ್ತವನ್ನು ಬ್ಯಾಂಕುಗಳಿಗೆ ಪಾವತಿಸಲಾಗುವುದು ಎಂದು ವಿವರಿಸಿದರು.
ಕಂತುಗಳ ಪ್ರಕಾರ ಸಾಲಮನ್ನಾ ಮಾಡಿದರೂ ರೈತರಿಗೆ ಈ ವರ್ಷದಿಂದಲೇ ಋಣಮುಕ್ತ ಪತ್ರ ನೀಡಲಾಗುವುದು. ಅದನ್ನು ವಿತರಿಸಲು ಇಬ್ಬರು ಐಎಎಸ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗುವುದು.

ನಾಲ್ಕು ಹಂತಗಳಲ್ಲಿ ಸಾಲಮನ್ನಾ ಮಾಡಲು ಬ್ಯಾಂಕುಗಳು ಒಪ್ಪಿಕೊಂಡಿರಲಿಲ್ಲ. ಸಾಲಮನ್ನಾ ಹೇಗೆ ಮಾಡಬೇಕು ಎನ್ನುವುದು ನನಗೆ ತಿಳಿಸಿದೆ. ಬಜೆಟ್ನಲ್ಲಿ ಘೋಷಣೆ ಮಾಡಿದಂತೆಯೇ ಸಾಲಮನ್ನಾ ಮಾಡಲಾಗುವುದು. ಸರ್ಕಾರದ ಖಜಾನೆಯಿಂದಲೇ ಅದಕ್ಕೆ ಬೇಕಾಗುವ ಆರ್ಥಿಕ ಮೂಲವನ್ನು ತುಂಬಿಕೊಳ್ಳಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು.












Click it and Unblock the Notifications