ಸೆಪ್ಟೆಂಬರ್ 27ರಂದು ಭಾರತ್ ಬಂದ್; ರೈತ ಮುಖಂಡರ ಅಭಿಪ್ರಾಯ
ಸೆ.27ರಂದು ರೈತರು ಕರೆ ನೀಡಿರುವ ಭಾರತ್ ಬಂದ್ ತಯಾರಿ ಬಗ್ಗೆ ಒನ್ಇಂಡಿಯಾ ಕನ್ನಡ ರೈತ ಮುಖಂಡರನ್ನು ಮಾತನಾಡಿಸಿದಾಗ...
ಕೆ.ಟಿ.ಗಂಗಾಧರ್, ಹಿರಿಯ ರೈತ ಮುಖಂಡರು
"ಭಾರತ್ ಬಂದ್ ತಯಾರಿ ಬಹಳ ಜೋರಾಗಿ ನಡೆದಿದ್ದು, ಇಡೀ ರಾಜ್ಯ ಪ್ರವಾಸ ಕೈಗೊಂಡಿದ್ದೇವೆ. ಎಲ್ಲಾ ಕಡೆ ಸಂಯುಕ್ತ ಕಿಸಾನ್ ಮೋರ್ಚಾ ಬ್ಯಾನರ್ ಅಡಿಯಲ್ಲಿ ಬಂದ್ ಮಾಡುವುದಕ್ಕೆ ತಯಾರಿ ನಡೀತಿದೆ. ರಾಷ್ಟ್ರಮಟ್ಟದ, ರಾಜ್ಯಮಟ್ಟದ ಮತ್ತು ಜಿಲ್ಲಾಮಟ್ಟದ ಸಮಸ್ಯೆಗಳನ್ನು ತೆಗೆದುಕೊಂಡಿದ್ದೇವೆ. ರೈತರು, ಕಾರ್ಮಿಕರು, ನಿರುದ್ಯೋಗಿ ಯುವಕರು, ಮಹಿಳೆಯರು, ದಲಿತ ಸಂಘಟನೆಗಳು ಹೀಗೆ ಎಲ್ಲಾ ಸಂಘಟನೆಗಳೂ ಭಾರತ್ ಬಂದ್ ಮಾಡಲು ಸ್ವಯಂ ಪ್ರೇರಣೆಯಿಂದ ಮುಂದೆ ಬಂದಿವೆ," ಎಂದು ರೈತ ಮುಖಂಡ ಕೆ.ಟಿ. ಗಂಗಾಧರ್ ಹೇಳಿದರು.
"ರೈತರ ಸಮಸ್ಯೆಗಳ ಜೊತೆ ಇನ್ನೂ ಅನೇಕ ವಿಷಯಗಳಿವೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯೂ ಸೇರಿದಂತೆ ಪ್ರಜಾಪ್ರಭುತ್ವ ಹರಣ ಆಗುತ್ತಿರುವ ಬಗ್ಗೆ ದೇಶವ್ಯಾಪಿ ಆತಂಕವಿದೆ. ಹೀಗೆ ಎಲ್ಲಾ ವಿಷಯಗಳನ್ನೊಳಗೊಂಡಂತೆ ಸಂಯುಕ್ತ ಕಿಸಾನ್ ಮೋರ್ಚಾ ಈ ಭಾರತ್ ಬಂದ್ಗೆ ಕರೆ ನೀಡಿರುವುದು. ನಾವು ಭೇಟಿ ಮಾಡುತ್ತಿರುವ ಎಲ್ಲರಿಗೂ ಸ್ವಯಂಪ್ರೇರಿತವಾಗಿ ಬಂದ್ ಮಾಡಲು ಕೋರುತ್ತಿದ್ದೇವೆ. ಎಲ್ಲರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಇದೆ. ಭಾರತ್ ಬಂದ್ ಯಶಸ್ವಿಯಾಗುತ್ತದೆ," ಎಂದು ರೈತ ಮುಖಂಡರಾದ ಕೆ.ಟಿ. ಗಂಗಾಧರ್ ತಿಳಿಸಿದರು.

ಜಿ.ಎಂ. ವೀರಸಂಗಯ್ಯ, ರೈತ ಮುಖಂಡರು
"ಭಾರತ್ ಬಂದ್ಗೆ ತಯಾರಿ ನಡೆಸುತ್ತಿದ್ದೀವಿ. ಇಡೀ ಭಾರತ ದೇಶದ ರೈತರಿಗೆ ಮಾರಕ ಆಗಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೇಶದಾದ್ಯಂತ ಚಳವಳಿ ನಿರಂತರವಾಗಿ ನಡೆದಿದೆ. ರೈತರೊಂದಿಗೆ ನಾಮಕಾವಸ್ಥೆಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸಿದೆ. ಕೃಷಿ ನಾಶ ಮಾಡುವ ಈ ಕಾಯಿದೆಗಳನ್ನು ಹಿಂಪಡೆಯಲೇಬೇಕು ಎಂಬುದು ಎಲ್ಲಾ ಸಂಘಟನೆಗಳ ಒಕ್ಕೂಟ ಒತ್ತಾಯ ಮಾಡುತ್ತಿದೆ. ಕಳೆದ ಹತ್ತು ತಿಂಗಳಿನಿಂದ ಚಳವಳಿ ನಡೆಯುತ್ತಿದ್ದು, ಕರ್ನಾಟಕದಲ್ಲಿ ಸುಮಾರು 15 ಸಂಘಟನೆಗಳು ಕರ್ನಾಟಕದಲ್ಲಿ ಬಂದ್ ಮಾಡಲು ತಯಾರಿ ನಡೆಸಿವೆ. ಸರ್ಕಾರಕ್ಕೆ ಎಚ್ಚರಿಕೆ ಕೊಡುವ ಮತ್ತು ಅರಿವು ಮೂಡಿಸುವ ಕೆಲಸ ಇದು. ಇದೆಲ್ಲವನ್ನು ಗಮನಿಸಿ ಕೇಂದ್ರ ಸರ್ಕಾರ ಮೂರು ಕೃಷಿ ಕಾಯಿದೆಗಳನ್ನು ಹಿಂಪಡದರೆ ಅವರಿಗೆ ಮರ್ಯಾದೆ ಬರುತ್ತದೆ. ಹಾಗೇನಾದರೂ ನಿರ್ಲಕ್ಷ್ಯ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಅದರ ಫಲ ಕಾಬಬೇಕಾಗುತ್ತದೆ," ಎಂದು ರೈತ ಮುಖಡರಾದ ಜಿ.ಎಂ. ವೀರಸಂಗಯ್ಯ ಎಚ್ಚರಿಸಿದರು.

ಬಡಗಲಪುರ ನಾಗೇಂದ್ರ, ರೈತ ಮುಖಂಡರು
"ಸಂಯುಕ್ತ ಕಿಸಾನ್ ಮೋರ್ಚಾ ಸೆಪ್ಟೆಂಬರ್ 27ನೇ ತಾರೀಖು ಭಾರತ್ ಬಂದ್ಗೆ ಕರೆ ನೀಡಿದೆ. ಕರ್ನಾಟಕದಲ್ಲಿ ಇದನ್ನು ಯಶಸ್ವಿ ಮಾಡಲು ಬೇಕಾದ ತಯಾರಿ ನಡೆಸಿದ್ದೇವೆ. ಕಳೆದ 15ನೇ ತಾರೀಖು ಒಂದು ಸಭೆ ನಡೆಸಿದ್ದೀವಿ. ದೇಶಾದ್ಯಂತ ಒಟ್ಟಾರೆ 112 ಸಂಘಟನೆಗಳು ಭಾರತ್ ಬಂದ್ಗೆ ಬೆಂಬಲ ವ್ಯಕ್ತಪಡಿಸಿವೆ. ಬೆಂಗಳೂರು ಸೇರಿದಂತೆ ಜಿಲ್ಲಾವಾರು, ತಾಲ್ಲೂಕುವಾರು ಬಂದ್ಗೆ ಬೇಕಾದ ಎಲ್ಲಾ ತಯಾರಿ ನಡೆದಿದೆ. ಇದಕ್ಕೊಂದು ತಂಡ ಮಾಡಿದ್ದೇವೆ. ಎಲ್ಲರೂ ಸೇರಿ ಭಾರತ್ ಬಂದ್ ಯಶಸ್ವಿ ಮಾಡುತ್ತೇವೆ," ಎಂದು ಹಿರಿಯ ರೈತ ಮುಖಂಡ ಬಡಗಲಪುರ ನಾಗೇಂದ್ರ ಹೇಳಿದರು.
ಚಾಮರಸ ಮಾಲಿ ಪಾಟೀಲ್, ರೈತ ಮುಖಂಡರು
"ಪ್ರಧಾನಿ ನರೇಂದ್ರ ಮೋದಿ ಚುನಾವಣೆಗೂ ಮುನ್ನ ನೀಡಿದ ಆಶ್ವಾಸನೆಗಳ್ಯಾವೂ ಅವರು ಅಧಿಕಾರಕ್ಕೆ ಬಂದ ಮೇಲೆ ಈಡೇರಿಲ್ಲ. ಅಧಿಕಾರಕ್ಕೆ ಬಂದ ಕೂಡಲೇ ರೈತರ ಸಾಲಮನ್ನಾ ಮಾಡುತ್ತೇವೆ ಅಂದಿದ್ದರು, ಮಾಡಲಿಲ್ಲ. ರೈತರ ಆದಾಯ ದ್ವಿಗುಣ ಮಾಡ್ತೀವಿ ಎಂದು ಹೇಳ್ತಿದ್ದಾರೆ, ಅದು ಹಸೀ ಸುಳ್ಳು. ಇಷ್ಟರ ನಡುವೆ ಮೂರು ಕರಾಳ ಕೃಷಿ ಕಾಯಿದೆಗಳನ್ನು ತಂದಿದ್ದಾರೆ. ರೈತರಿಗೆ ಮಾರಕವಾಗಿರುವ ಅವುಗಳನ್ನು ಹಿಂಪಡೆಯಬೇಕು. ರೈತರಿಗೆ ಖಾತ್ರಿಯಾದ ಎಂಎಸ್ಪಿ ದೊರೆಯಬೇಕು. ಅಲ್ಲಿಯವರೆಗೆ ಹೋರಾಟ ಮುಂದುವರೆಯುತ್ತದೆ, ಇದು ಅನಿವಾರ್ಯ," ಎಂದು ರೈತ ಮುಖಂಡ ಚಾಮರಸ ಮಾಲಿ ಪಾಟೀಲ್ ತಿಳಿಸಿದರು.
(ಮುಂದುವರೆಯುವುದು)












Click it and Unblock the Notifications