ತೀರ್ಥಹಳ್ಳಿ : ಹಲಸಿನ ಉತ್ಪನ್ನಗಳ ಮಾರಾಟ ಮೇಳ
ಶಿವಮೊಗ್ಗ, ಮೇ. 26 : ಮಲೆನಾಡಿನ ಭಾಗದಲ್ಲಿ ಹೆಚ್ಚಾಗಿ ಬೆಳೆಯುತ್ತಿರುವ ಹಲಸಿನ ಉತ್ಪನ್ನಗಳ ಬಳಕೆ ಹಾಗೂ ಬೇಡಿಕೆ ಹೆಚ್ಚಾಗಲು ವ್ಯಾಪಕ ಪ್ರಚಾರ ಹಾಗೂ ಮಾರುಕಟ್ಟೆ ಸೌಲಭ್ಯ ಅಗತ್ಯವೆಂದು ರಾಜ್ಯ ಯೋಜನ ಆಯೋಗದ ಉಪಾಧ್ಯಕ್ಷ ಡಿ.ಹೆಚ್.ಶಂಕರಮೂರ್ತಿ ತಿಳಿಸಿದರು.
ತೀರ್ಥಹಳ್ಳಿ ಪಟ್ಟಣದಲ್ಲಿ ಉದ್ಯಾನ ಕಲಾ ಸಂಘ , ತೋಟಗಾರಿಕೆ ವಿಶ್ವವಿದ್ಯಾನಿಲಯ, ಕೃಷಿ ವಿಶ್ವವಿದ್ಯಾನಿಲಯ, ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ, ಕೃಷಿಕ ಸಮಾಜ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಹಲಸಿನ ಮೇಳದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು. ಜೀವನ ಪದ್ದತಿ, ಸಂಸ್ಕೃತಿಗೆ ತಕ್ಕಂತೆ ಊಟ ಉಪಚಾರ, ತಿಂಡಿ ತಿನಿಸುಗಳ ಬಳಕೆಯಲ್ಲಿಯು ವೈವಿದ್ಯತೆಯನ್ನು ಕಾಣುತ್ತೇವೆ. ತಾನು ಬದುಕುವ ಪರಿಸರದಲ್ಲಿ ದೊರೆಯುವ ಆಹಾರ ಪದಾರ್ಥಗಳ ಬಳಕೆಯಲ್ಲಿ ಹೆಚ್ಚು ಅವಲಂಭಿತನಾಗುತ್ತಾನೆ. ಆದರೆ, ದೊರೆಯುವ ಪದಾರ್ಥಗಳ ಮಹತ್ವ, ಬಳಕೆ ಇತ್ಯಾದಿಗಳ ಬಗ್ಗೆ ಪ್ರಚಾರ ಸಿಕ್ಕಾಗ ಅವುಗಳಿಗೆ ಬೇಡಿಕೆ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.
ಅವಿಭಕ್ತ ಕುಟುಂಬದ ವ್ಯವಸ್ಥೆಯಲ್ಲಿ ಕುಟುಂಬಕ್ಕೆ ಬೇಕಾದ ಆಹಾರ ಪದಾರ್ಥಗಳನ್ನು ಮನೆಯಲ್ಲಿ ಸಿದ್ದಪಡಿಸಿಕೊಳ್ಳುವ ರೂಢಿ ಸಂಪ್ರದಾಯವಿತ್ತು. ಆದರೆ, ಈಗಿನ ಚಿಕ್ಕ ಕುಟುಂಬಗಳು ಎಲ್ಲವು ಸಿದ್ಧವಾಗಿ ಬರುವ ಪ್ಯಾಕುಗಳಿಗೆ ಸೀಮಿತವಾಗಿವೆ ಎಂದರಲ್ಲದೆ, ಹಲಸಿನಲ್ಲಿ ವಿವಿಧ ಉತ್ಪನ್ನಗಳನ್ನು ತಯಾರಿಸಿ, ಜನಪ್ರಿಯಗೊಳಿಸಿದರೆ ರೈತರಿಗೆ ಲಾಭವಾಗಲಿದೆ ಎಂದರು.
ಮೈಸೂರು ಕಾಗದ ಕಾರ್ಖಾನೆ ಅಧ್ಯಕ್ಷ ಆರಗ ಜ್ಞಾನೇಂದ್ರ ಅವರು ಮಾತನಾಡಿ, ಮಲೆನಾಡಿನ ಭಾಗದಲ್ಲಿ ಯತೇಚ್ಫೆವಾಗಿದ್ದ ಹಲಸಿನ ಮರಗಳು ಇದೀಗ ಕಣ್ಮರೆಯಾಗುತ್ತಿವೆ. ಬೇಡಿಕೆ ಹಾಗೂ ಮಾರುಕಟ್ಟೆ ಸೌಲಭ್ಯವಿಲ್ಲದಿರುವುದರಿಂದ ಹಲಸಿನ ಬೆಳೆ ನಿರ್ಲಕ್ಷ್ಯಕೊಳಗಾಗಿದೆ. ಆದರೆ ಮಲೆನಾಡಿನ ಬಡಕುಟುಂಬಗಳಿಗೆ ಹಲಸೆ ಜೀನನಾಧಾರ. ಆದ್ದರಿಂದ ಹಲಸಿನ ಉತ್ಪನ್ನಗಳಿಗೆ ವ್ಯವಸ್ಥಿತ ಮಾರುಕಟ್ಟೆ ಸೌಲಭ್ಯ ಅಗತ್ಯವೆಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications