
ಪಿಎಸ್ಐ, ಕೆಪಿಟಿಸಿಎಲ್ನಂಥ ಅಕ್ರಮಗಳಲ್ಲಿ ಹಿರಿತಲೆಗಳ ರಕ್ಷಣೆ: ಸಿದ್ದರಾಮಯ್ಯ
ಬೆಂಗಳೂರು ಆಗಸ್ಟ್ 26: ಕರ್ನಾಟಕದಲ್ಲಿ ಪಿಎಸ್ಐ, ಸಹಾಯಕ ಪ್ರಾಧ್ಯಾಪಕರು, ಹಾಗೂ ಬ್ರೇಕ್ ಇನ್ಸ್ಪೆಕ್ಟರ್ ನೇಮಕಾತಿ ಹಗರಣಗಳ ಬೆನ್ನಲ್ಲೇ ಕೆಪಿಟಿಸಿಎಲ್ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿವೆ. ಇದನ್ನು ನೋಡಿದರೆ ಒಂದೇ ಒಂದು ಪರೀಕ್ಷೆಯನ್ನೂ ಅಕ್ರಮಗಳಿಲ್ಲದೇ ನಡೆಸಲು ಈ ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂಬುದು ಗೊತ್ತಾಗುತ್ತದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸಿದ್ದರಾಮಯ್ಯ ಅವರು ಮಾಧ್ಯಮ ಹೇಳಿಕೆ ನೀಡಿದ್ದಾರೆ. ಅದರಲ್ಲಿ ಪಿಎಸ್ಐ ನೇಮಕಾತಿ ಹಗರಣದ ತನಿಖೆ ಇನ್ನೂ ಮುಗಿದಿಲ್ಲ. ಈ ಪ್ರಕರಣದ ಹಿರಿ ತಲೆಗಳ ಇನ್ನೂ ಬಂಧನವಾಗಿಲ್ಲ. ಆಗಲೇ ಕೆಪಿಟಿಸಿಎಲ್ (ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ) ಕಿರಿಯ ಅಭಿಯಂತರರ ನೇಮಕಾತಿಗಾಗಿ ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯಲ್ಲೂ ಅಕ್ರಮ ನಡೆದಿರುವುದು, ಲಕ್ಷಗಟ್ಟಲೆ ಹಣ ವರ್ಗಾವಣೆಗಳು ಸರ್ಕಾರದ ಯೋಗ್ಯತೆ, ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ.
ಸಿಇಟಿ ಬಿಕ್ಕಟ್ಟು: 75:25 ಅನುಪಾತ ಸೂತ್ರ ತಿರಸ್ಕರಿಸಿದ ಕೆಇಎ
ಸರ್ಕಾರದ 40 ಪರ್ಸೆಂಟ್ ಅಕ್ರಮಗಳಿಗೆ ನಾಡಿನ ಜನ ಛೀಮಾರಿ ಹಾಕುತ್ತಿದ್ದಾಗ ಬಿಜೆಪಿ ಜಾನುವಾರು ಹತ್ಯೆ ನಿಷೇಧ ಕಾಯ್ದೆಯ ಚರ್ಚೆಯನ್ನು ಹುಟ್ಟು ಹಾಕಿ ಜನರ ಗಮನ ಬೇರೆಡೆ ಸೆಳೆಯಲು ಯತ್ನಿಸಿತು. ಪಿಎಸ್ಐ ನೇಮಕಾತಿ ಹಗರಣ ಹೊರಗೆ ಬರುತ್ತಿದ್ದಂತೆ ಹಿಜಾಬ್ ಮುಂತಾದ ವಿವಾದವನ್ನು ಸೃಷ್ಟಿಸಿ ಜನರ ಕಣ್ಣಿಗೆ ಮಣ್ಣೆರೆಚಬಹುದು ಎಂದು ನಂಬಿಕೊಂಡು ತಮ್ಮ ಗಲಭೆ ಸ್ಕ್ವಾಡ್ಗಳನ್ನು ಬೀದಿಗಿಳಿಸಿತು ಎಂದು ಸಿದ್ದರಾಮಯ್ಯ ದೂರಿದರು.

ಭ್ರಷ್ಟಾಚಾರದಲ್ಲಿ ಬಿಜೆಪಿಯದ್ದು ಭಂಡತನ
ಭ್ರಷ್ಟಾಚಾರದ ವಿಚಾರದಲ್ಲಿ ಡೋಂಟ್ ಕೇರ್ ಎನ್ನುವ ಭಂಡತನವನ್ನು ಆಪರೇಷನ್ ಕಮಲದ ಸರ್ಕಾರ ಆರಂಭದಿಂದಲೇ ಪ್ರದರ್ಶಿಸುತ್ತಿದೆ. ಸರ್ಕಾರದ ಅಕ್ರಮಗಳು, ಭ್ರಷ್ಟಾಚಾರ ಬೆಳಕಿಗೆ ಬಂದಾಗಲೆಲ್ಲಾ ಬಿಜೆಪಿ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುವ ಬದಲಿಗೆ ಜನರ ಗಮನ ಬೇರೆಡೆ ಸೆಳೆಯುತ್ತದೆ. ಈ ಮೂಲಕ ಕಳಪೆ ಮತ್ತು ಬೈಪಾಸ್ ಮಾರ್ಗವನ್ನು ಅನುಸರಿಸಿದ್ದರಿಂದ ಅಕ್ರಮ ನಡೆಸುವವರಿಗೆ ಸರ್ಕಾರದ ಬಗ್ಗೆ ಯಾವುದೇ ಭಯ ಇಲ್ಲದಂತಾಗಿದೆ ಎಂದು ಆಪಾದಿಸಿದರು.
ಬಿಎಸ್ ಯಡಿಯೂರಪ್ಪ ದೆಹಲಿ ಭೇಟಿ: ಚುನಾವಣೆ ಸಂಪುಟದ ಮಹತ್ವದ ಚರ್ಚೆ!

ಅಕ್ರಮ ಎಸಗುವವರಿಗೆ ಸರ್ಕಾರದ ಬಗ್ಗೆ ಭಯ ಇಲ್ಲ
ಪಿಎಸ್ ಐ ನೇಮಕಾತಿ ಅಕ್ರಮದ ತನಿಖೆ ಇನ್ನೂ ನಡೆಯುತ್ತಿರುವಾಗಲೇ ಕೆಪಿಟಿಸಿಎಲ್ (ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ) ನೇಮಕಾತಿ ಹಗರಣ ಹೊರಗೆ ಬಂದಿರುವುದೇ ಸರ್ಕಾರದ ಬಗ್ಗೆ ಯಾವುದೇ ಭಯ ಇಲ್ಲ ಎಂಬುದಕ್ಕೆ ಸಾಕ್ಷಿ. ಬ್ಲೂಟೂತ್ ಸೇರಿದಂತೆ ಇನ್ನಿತರೆ ತಂತ್ರಜ್ಞಾನ ಬಳಸಿಕೊಂಡು ಪರೀಕ್ಷಾ ಅಕ್ರಮಗಳನ್ನು ನಡೆಸುವುದು ರಾಜ್ಯದಲ್ಲಿ ಅತ್ಯಂತ ಸಾಮಾನ್ಯ ಸಂಗತಿ ಎನ್ನುವಂತಾಗಿಬಿಟ್ಟಿದೆ.

ವರದಿ ಕೈ ಸೇರಿಲ್ಲ ಎಂದು ಸಚಿವ ನೆಪ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎಲ್ಲಾ ರೀತಿಯಲ್ಲೂ ವಿಫಲವಾಗಿದೆ. ಇಂಧನ ಸಚಿವ ಸುನಿಲ್ಕುಮಾರ್ ಅವರು ಅಕ್ರಮದ ವರದಿ ಇನ್ನೂ ತಮ್ಮ ಕೈ ಸೇರಿಲ್ಲ ಎನ್ನುವುದನ್ನೇ ನೆಪ ಮಾಡಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ಬದಲಾಗಿ ಅವರು ಅಕ್ರಮಕ್ಕೆ ಕಾರಣರಾದ ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ಈ ಅಕ್ರಮಕ್ಕೆ ಯಾರನ್ನೂ ಹೊಣೆಗಾರರನ್ನಾಗಿಸಿಲ್ಲ ಎಂದು ಕಿಡಿ ಕಾರಿದರು.

ಅಕ್ರಮಗಳಲ್ಲಿನ ಹಿರಿ ತಲೆ ರಕ್ಷಣೆ?
ಪಿಎಸ್ಐ ನೇಮಕಾತಿ ಅಕ್ರಮದ ತನಿಖೆಯಂತೆಯೇ ಕೆಪಿಟಿಸಿಎಲ್ ನೇಮಕಾತಿ ಅಕ್ರಮವೂ ಕೇವಲ ಅಭ್ಯರ್ಥಿಗಳ ಮತ್ತು ಕೆಳ ಹಂತದ ಕೆಲವರ ಬಂಧನ ನಡೆಸಿ ಹಿರಿತಲೆಗಳನ್ನು ರಕ್ಷಿಸುವ ಸ್ಪಷ್ಟ ಲಕ್ಷಣ ಕಾಣಿಸುತ್ತಿದೆ. ಪಿಎಸ್ಐ ನೇಮಕಾತಿ ಹಗರಣದಲ್ಲಿ ಸರ್ಕಾರದ ಯಾವ್ಯಾವ ಮಂತ್ರಿಗಳು ಫಲಾನುಭವಿಗಳಾಗಿದ್ದಾರೆ ಎನ್ನುವುದನ್ನಾಗಲಿ, ಪರೀಕ್ಷಾ ಅಕ್ರಮದಲ್ಲಿ ಸುಲಿಗೆಯಾದ ಕೋಟಿ ಕೋಟಿ ಹಣ ಯಾವ ಮಂತ್ರಿಗಳ ಸಹವರ್ತಿಗಳ ಜೇಬು ಸೇರಿದೆ ಎನ್ನುವುದನ್ನಾಗಲಿ ತನಿಖಾ ತಂಡ ಇಲ್ಲಿಯವರೆಗೂ ಬಹಿರಂಗಗೊಳಿಸದೆ ಗುಟ್ಟಾಗಿಯೇ ಇಟ್ಟಿದೆ ಎಂದು ಸಿದ್ದರಾಮ್ಯಯ ಆರೋಪಿಸಿದ್ದಾರೆ.
ಇದೆ ಪ್ರಕರಣದಲ್ಲಿ ಬಂಧಿತರಾಗಿರುವ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಸೇರಿದಂತೆ ಇನ್ನಿತರರ ಮೇಲೆ ಪೂರ್ಣ ಪ್ರಮಾಣದ ಆರೋಪ ಪಟ್ಟಿಯನ್ನು ಇದುವರೆಗೂ ಸಲ್ಲಿಸಲಾಗಿದೆ. ಇದರಿಂದ ಸರ್ಕಾರ ಮುಚ್ಚಿಡಲು ಹೊರಟಿದೆ, ಅದರ ಉದ್ದೇಶವೇನು ಎಂಬುದು ಸ್ಪಷ್ಟವಾಗಬೇಕು. ಈ ಕೂಡಲೇ ಇಂಧನ ಸಚಿವ ವಿ.ಸುನಿಲ್ ಕುಮಾರ್ ಕೆಪಿಟಿಸಿಎಲ್ ನೇಮಕಾತಿ ಹಗರಣದ ಹೊರೆ ಹೊರಬೇಕು. ತಪ್ಪಿತಸ್ಥರಿಗೆ ತಕ್ಕ ಶಾಸ್ತಿ ಆಗಬೇಕು ಎಂದು ಅವರು ಆಗ್ರಹಿಸಿದರು.