ಸಂದರ್ಶನ: ಭೂ ಸುಧಾರಣೆಯೋ, ಭೂ ಕಬಳಿಕೆಯೋ...?
ಸಾಮಾನ್ಯವಾಗಿ ಸಾಮಾಜಿಕ ಸಮಸ್ಯೆಗಳು ಹಾಗೂ ತಾರತಮ್ಯಗಳಿಗೆ ಪರಿಹಾರವಾಗಿ ಕಾಯಿದೆಗಳು ರೂಪುಗೊಳ್ಳುತ್ತವೆ. ಹಾಲಿ ಇರುವ ದುರವಸ್ಥೆಯ ಸುಧಾರಣೆಗಾಗಿ ಅಥವಾ ಸಕಲರ ಏಳಿಗೆಯ ಉದ್ದೇಶದಿಂದ ಹೊಸ ದಿಕ್ಕಿನತ್ತ ಚಲಿಸಲು ಮುನ್ನೋಟದ ಹಾದಿಯಾಗಿ ಕಾಯಿದೆಗಳು ಜನ್ಮತಾಳುತ್ತವೆ. ಅಂತೆಯೇ ಭೂ ಸುಧಾರಣೆ ಕಾಯಿದೆಯೂ ಬಿ.ಡಿ.ಜತ್ತಿ ಸಮಿತಿಯ ಸಾಮಾಜಿಕ ನ್ಯಾಯದ ಚಿಂತನೆಯಲ್ಲಿ ಮೊಳೆತ ಕಾಯಿದೆ.
Recommended Video
1961 ರ ಭೂ ಸುಧಾರಣೆ ಕಾಯಿದೆ ಗೇಣಿ ಮತ್ತು ಕೃಷಿ ಭೂಮಿ ಹಿಡುವಳಿಯ ಮೇಲೆ ಮಿತಿ ಹಾಗೂ ನಿರ್ಭಂಧಗಳ ಅಗತ್ಯತೆಯನ್ನು ಮನಗಂಡು ಜಾರಿಗೆ ಬಂತು. 1957 ಮೇ ತಿಂಗಳಲ್ಲಿ ಆಗಿನ ರಾಜ್ಯ ಸರ್ಕಾರ ಬಿ.ಡಿ.ಜತ್ತಿ ಅವರ ಅಧ್ಯಕ್ಷತೆಯಲ್ಲಿ ಮೈಸೂರು ಗೇಣಿ ಮತ್ತು ಕೃಷಿ ಭೂಮಿ ಕಾಯಿದೆ ಸಮಿತಿ ರಚಿಸಿತು. ಸಮಿತಿಯು 'ಜತ್ತಿ ಸಮಿತಿ' ಎಂದೇ ಹೆಸರಾಯಿತು. ಜತ್ತಿ ಸಮಿತಿ ನೇಮಕವಾದ ನಾಲ್ಕು ತಿಂಗಳಲ್ಲಿ (ಅಕ್ಟೋಬರ್ 1957) ತನ್ನ ವರದಿ ಸಲ್ಲಿಸಿತು. ವರದಿಯ ಆಧಾರದ ಮೇಲೆ ಮಸೂದೆ ರೂಪಿಸಲಾಯಿತು. ತದನಂತರ ಜಂಟಿ ಸದನ ಸಮಿತಿಯು ಮಸೂದೆಗೆ ಒಪ್ಪಿಗೆ ನೀಡಿತು. ಅದೇ ವರ್ಷ ವಿಧಾನಸಭೆಯ ಒಪ್ಪಿಗೆ ಪಡೆದು 1962 ರ ಮಾರ್ಚ್ 5 ರಂದು ಭಾರತದ ರಾಷ್ಟ್ರಪತಿಗಳ ಸಮ್ಮತಿ ಪಡೆದು ಕಾಯಿದೆಯಾಯಿತು. ಈ ಕಾಯಿದೆಯು ಜಾರಿಗೆ ಬಂದದ್ದು 1965 ಅಕ್ಟೋಬರ್ 2 ಗಾಂಧಿ ಜಯಂತಿಯಂದು. (ಮುಂದಿನ ದಿನಗಳಲ್ಲಿ ಈ ಕಾಯಿದೆಯಲ್ಲಿ ಭೂ ಸುಧಾರಣಾ ಕಾಯಿದೆ 1961 ಎಂದು ಹೆಸರಾಯಿತು).
ಕೃಷಿ ಬಿಕ್ಕಟ್ಟಿಗೆ ಪರಿಹಾರ ರೈತರ ಹೊಲದಲ್ಲಿಲ್ಲ, ಬದಲಿಗೆ...
ಕೃಷಿಕನಲ್ಲದವರೂ ಭೂ ಖರೀದಿಸಬಹುದಗಿದೆ
1961 ರ ಭೂ ಸುಧಾರಣೆ ಕಾಯಿದೆ, ಸ್ವತಃ ಕೃಷಿಕನೋ ಅಥವಾ ಕೃಷಿ ಕಾರ್ಮಿಕನೋ ಅಲ್ಲದವರನ್ನು ಜಮೀನು ಕೊಳ್ಳುವುದರಿಂದ ತಡೆಗಟ್ಟಿತು. ಆದರೆ ಒಂದು ಕುಟುಂಬಕ್ಕೆ ಭೂಮಿ ಇಲ್ಲದೆ, ಅದರ ಸದಸ್ಯನೊಬ್ಬ ಬೇಸಾಯವನ್ನು ತನ್ನ ಏಕೈಕ ವೃತ್ತಿಯಾಗಿ ಮಾಡಲು ಇಚ್ಛೆಪಟ್ಟರೆ ಅಂತಹ ವ್ಯಕ್ತಿ ಭೂಮಿ ಪಡೆದುಕೊಳ್ಳಲು ಅನುಮತಿ ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಬಹುದಾಗಿತ್ತು. ಅನುಮತಿ ಸಿಕ್ಕಲ್ಲಿ ಅಂತಹ ವ್ಯಕ್ತಿ ಕನಿಷ್ಟ ಐದು ವರ್ಷ ಕಾಲ ಸ್ವಂತ ಬೇಸಾಯ ಮಾಡಬೇಕು ಎಂಬ ಷರತ್ತಿನ ಮೇಲೆ ಭೂಮಿ ನೀಡಲಾಗುತ್ತಿತ್ತು. ಆ ಅವಧಿಯಲ್ಲಿ ಅವನು ಸ್ವಂತ ಬೇಸಾಯವನ್ನು ಕೈ ಬಿಟ್ಟಿದ್ದೇ ಆದರೆ ಆ ಜಮೀನನ್ನು ಅವನಿಗೆ ಕೊಟ್ಟಿದ್ದ ಬೆಲೆಗೆ ಸರ್ಕಾರ ವಶಪಡಿಸಿಕೊಳ್ಳುವುದಕ್ಕೆ ಕಾಯಿದೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಎರಡು ವರ್ಷಗಳ ಕಾಲ ಕೃಷಿ ಮಾಡದೆ ಹೋದ ಜಮೀನುಗಳನ್ನು ಸರ್ಕಾರವು ವಶಪಡಿಸಿಕೊಂಡು ಗೇಣಿಗೆ ನೀಡಲು ಕಾಯಿದೆಯಲ್ಲಿ ಅವಕಾಶ ಮಾಡಲಾಗಿತ್ತು.
ಹಿಡುವಳಿಯ ಮೇಲೆ ಮಿತಿ
1961 ರ ಭೂ ಸುಧಾರಣಾ ಕಾಯಿದೆ ಗೇಣಿದಾರರ ರಕ್ಷಣಗೆ ನಿಂತಿತು. ಗೇಣಿ ಭೂಮಿಯ ಒಡೆತನ ವರ್ಗಾಯಿಸುವಲ್ಲಿ ಸರ್ಕಾರದ ಮಧ್ಯಸ್ಥಿಕೆಯ ಅನಿವಾರ್ಯತೆಯನ್ನು ಜತ್ತಿ ಸಮಿತಿ ಮನಗಂಡಿತ್ತು. ಮೊದಲ ಹಂತದಲ್ಲಿ ಜಮೀನಿನ ಸ್ವಾಮ್ಯವನ್ನು ಸರ್ಕಾರ ವಹಿಸಿಕೊಂಡು, ಆನಂತರ ಅದನ್ನು ಗೇಣಿದಾರರಿಗೆ ವರ್ಗಾಯಿಸುವ ಕ್ರಮ ಶಿಫಾರಸ್ಸು ಮಾಡಿತು. ಇದೊಂದು ಮಹತ್ವದ ಶಿಫಾರಸ್ಸು ಕಾಯಿದೆಯಲ್ಲಿ ಅಡಕವಾಗಿತ್ತು.
ಕಾಯಿದೆಯ ಪ್ರಕಾರ ಒಂದು ಕುಟುಂಬಕ್ಕೆ ನಿಗದಿಪಡಿಸಿದ ಗರಿಷ್ಠ ಮಿತಿಯನ್ನು ಆ ಕುಟುಂಬದ ಒಡೆತನಕ್ಕೆ ಸೇರಿದ ಜಮೀನುಗಳಷ್ಟೇ ಅಲ್ಲದೆ ಅವರು ಭೋಗ್ಯಕ್ಕೆ ಹಾಗೂ ಗೇಣಿಗೆ ಪಡೆದಿದ್ದ ಜಮೀನುಗಳು ಸಹ ಲೆಕ್ಕಕ್ಕೆ ಸೇರಬೇಕಿತ್ತು. ಪ್ರತಿ ಕುಟುಂಬಕ್ಕೆ ನಿಗದಿಯಾದ ಗರಿಷ್ಠ ಮಿತಿ 27 standarad ಎಕರೆಗಳು. Standard ಎಕರೆ ಎಂದರೆ ಒಂದು ಎಕರೆ ನೀರಾವರಿ ಉಳ್ಳ ಉತ್ಕೃಷ್ಠ ಭೂಮಿ. ಅದು ವರ್ಷಕ್ಕೆ 25 ಅಂಗುಲಕ್ಕಿಂತ ಕಡಿಮೆ ಮಳೆಯಾಗುವ ಪ್ರದೇಶದಲ್ಲಿನ ಸುಮಾರು 8 ಎಕರೆ ಖುಷ್ಕಿ ಭೂಮಿಗೆ ಸಮ ಎಂದು ಪರಿಗಣಿಸಲಾಯಿತು.
ಬಾಣಲೆಯಿಂದ ಬೆಂಕಿಗೊ, ಸುಗಮ ಬಾಳುವೆಗೊ?
1974 ರ ಕಾಯಿದೆ ಹಿಡುವಳಿ ಮಿತಿ
ಈ ಕಾಯಿದೆಯು ಭೂ ಹಿಡುವಳಿಯ ಮಿತಿಯನ್ನು ಇನ್ನಷ್ಟು ಕಡಿಮೆ ಮಾಡಿತು. 1961 ರ ಕಾಯಿದೆಯಲ್ಲಿದ್ದ standard ಎಕರೆಯ ಕಲ್ಪನೆಯನ್ನು ಕೈಬಿಟ್ಟು Unit ಕಲ್ಪನೆಯನ್ನು ಅನುಸರಿಸಲಾಯಿತು. ಅತ್ಯಂತ ಹೆಚ್ಚು ಬೆಲೆ ಬಾಳುವ ಒಂದು ಎಕರೆ ಜಮೀನು ಒಂದು unit ಎಂದು ಪರಿಗಣಿಸಲಾಯಿತು. ಒಂದು ಕುಟುಂಬಕ್ಕೆ ನಿಗದಿಪಡಿಸಿದ ಗರಿಷ್ಟ ಮಿತಿ ಇಂತಹ 10 unit ಗಳು. ಖುಷ್ಕಿ ಜಮೀನಾದರೆ 54 ಎಕರೆ, ಎರಡು ಬೆಳೆ ತೆಗೆಯಬಲ್ಲ ನೀರಾವರಿ ಜಮೀನಾದರೆ 10 ರಿಂದ 12 ಎಕರೆ. ಇತರೆ ದರ್ಜೆಯ ನೀರಾವರಿ ಜಮೀನಾದರೆ 18 ಎಕರೆ.
ಹಿಡುವಳಿ ಮತ್ತು ಕುಟುಂಬ
ಕಾಯಿದೆಯು ವಿಧಿಸಿದ ಮಿತಿ ಒಂದು ಕುಟುಂಬಕ್ಕೆ 10 ಯೂನಿಟ್ ಗಳು. ಇದು ಆ ಕುಟುಂಬದಲ್ಲಿ ಐದು ಮಂದಿ ಅಥವಾ ಅದಕ್ಕಿಂತ ಕಡಿಮೆ ಜನ ಇದ್ದರೆ. ಕುಟುಂಬದಲ್ಲಿದ್ದ ಒಂದೊಂದು ಹೆಚ್ಚುವರಿ ವ್ಯಕ್ತಿಗೆ ಎರಡು unit ಹೆಚ್ಚಿಗೆ ದೊರೆಯುತ್ತಿದ್ದು, ಒಟ್ಟು ಒಂದು ಕುಟುಂಬಕ್ಕೆ ಗರಿಷ್ಠ ಮಿತಿ 20 unit ಗಳು.
ಭೂಮಿ ಕೊಳ್ಳಲು ಆದಾಯದ ಮಿತಿ 2 ಲಕ್ಷ ಇದ್ದದ್ದು 25 ಲಕ್ಷಕ್ಕೆ ಏರಿಕೆ ಆಗಿದ್ದು 2015 ರಲ್ಲಿ. ಸಿದ್ಧರಾಮಯ್ಯ ಅವರ ಆಡಳಿತದಲ್ಲಿ. ಇದೀಗ ಭಾರತೀಯ ಜನತಾ ಪಕ್ಷದ ಸರ್ಕಾರವು, ಹಣದ ಮೂಲಕ್ಕೆ ಯಾವುದೇ ನಿರ್ಭಂದ ವಿಧಿಸುವುದಿಲ್ಲ ಜೊತೆಗೆ ಒಬ್ಬ ವ್ಯಕ್ತಿ/ಕುಟುಂಬ ತನ್ನ ಒಡೆತನದಲ್ಲಿ ಇಟ್ಟುಕೊಳ್ಳಬಹುದಾದ ಭೂಮಿಯ ಮಿತಿಯನ್ನು ಹೆಚ್ಚಿಸುವುದಾಗಿಯೂ ಹೇಳಿದೆ.
ಹಿಡುವಳಿಯ ಮಿತಿ ಹೆಚ್ಚಳಕ್ಕೆ ಶಿಫಾರಸ್ಸು
ಐದು ಮಂದಿಯ ಒಂದು ಕುಟುಂಬಕ್ಕೆ 10 Unit ನಷ್ಟು ಒಡೆತನ ಹೊಂದಲು ಅವಕಾಶ ಇದ್ದದ್ದನ್ನು ಭಾಜಪ 20-unit ಹೊಂದಬಹುದಾಗಿಯೂ, ಐದಕ್ಕಿಂತ ಹೆಚ್ಚು ಮಂದಿ ಇರುವ ಕುಟುಂಬಗಳಲ್ಲಿ ಗರಿಷ್ಠ 40 ಯೂನಿಟ್ ಭೂಮಿ ಹೊಂದಬಹುದಾಗಿಯೂ ಕಾಯಿದೆ ತಿದ್ದುಪಡಿ ಮಾಡಲು ಸಕಲ ಸಿದ್ಧತೆಗಳು ನಡೆದಿವೆ. ಮುಂದಿನ ಅಧಿವೇಶನದಲ್ಲಿ ಭೂ ಸುಧಾರಣಾ ತಿದ್ದಪಡಿ ಮಸೂದೆ ಮಂಡಿಸುವುದಾಗಿಯೂ ಇಲ್ಲವೇ ಸುಗ್ರೀವಾಜ್ಞೆ ಮುಖೇನ ಕಾಯಿದೆ ಜಾರಿಗೆ ತರುವುದಾಗಿಯೂ ಮಾತುಗಳು ಕೇಳಿಬರುತ್ತಿವೆ. ಆ ಬಗ್ಗೆ ಹಿರಿಯ ರೈತ ಮುಖಂಡ ಕೆ.ಟಿ. ಗಂಗಾಧರ್ ಅವರನ್ನು ಒನ್ ಇಂಡಿಯಾ ಸಂಪರ್ಕಿಸಿದಾಗ ಬಹಳ ಭಾವುಕವಾಗಿ ಮಾತನಾಡಿದರು.
ಕೆ.ಟಿ.ಗಂಗಾಧರ್ ಅವರ ಮಾತು
"ನಾನು ಏನ್ ಮಾಡ್ಲೋ ನಾಗೇಶಣ್ಣ, ಈ ಅಶೋಕಂಗೆ, ಯಡಿಯೂರಪ್ಪನೋರಿಗೆ ಹೆಂಗೆ ತಿಳಿಸಿ ಹೇಳೋದು..! ಯಾರು ಬೇಕಾದ್ರೂ ಭೂಮಿ ಕೊಳ್ಳಬಹುದು. ಆದಾಯಕ್ಕೆ ಮಿತಿ ಇಲ್ಲ. ಒಬ್ಬ ವ್ಯಕ್ತಿ, ಕುಟುಂಬ ಭೂಮಿಯ ಒಡೆತನ ಹೊಂದುವ ಮಿತಿ ಹೆಚ್ಚಿಸ್ತಾರಂತೆ...! ಭೂ ಸುಧಾರಣೆ ಕಾಯಿದೆ ಯಾಕೆ ಬಂತಪ್ಪಾ...?
ಗ್ರಾಮೀಣ ಯುವಕರು ಕೃಷಿಯಲ್ಲಿ ತೊಡಗಿ ಸ್ವಂತ ಉದ್ಯೋಗ ಕಂಡುಕೊಳ್ಳೋದರ ಜೊತೆಗೆ ದೇಶದ ಆಹಾರ ಭದ್ರತೆಗೂ ಅವನು ಸಂಪನ್ಮೂಲವಾಗಲಿ ಅಂತ ಅಲ್ವೇನ್ರಿ.? ಭೂ ಮಾಲೀಕರತ್ರಾನೇ ಸುಮ್ನೆ ಭೂಮಿ ಬಿದ್ದಿದ್ರೆ ಪ್ರಯೋಜನ ಏನು. ಉಳುವವನಿಗೆ ತನ್ನದೇ ಭೂಮಿ ಅನ್ನೋ ಮನೋಭಾವದಲ್ಲಿ ಕಾಳಜಿಯಿಂದ ದುಡಿದು ಸ್ವಂತ ಕಾಲ ಮೇಲೆ ನಿಂತ್ಕೊಳ್ಳೋದಲ್ದೆ ದೇಶದ ಆಹಾರ ಭದ್ರತೆಗೆ ಕಾಂಟ್ರಿಬ್ಯೂಟ್ ಮಾಡ್ಲಿ ಅಂತಾ ಅಲ್ವೇನ್ರಿ ? ಅದು ಬಿಟ್ಟು ಈಗ ಇವ್ರು ಮಾಡ್ತಿರೋದೇನಿದು?''
ಮುಂದಿನ ಹೋರಾಟ ?
""ಹೋರಾಟ ಮಾಡ್ತೀವಿ. ಮೊದಲು ಇವರಿಗೆ ಕಾಯಿದೆಯ ಕರಾಳತೆ ಮನವರಿಕೆ ಮಾಡಿ ಕೊಡುವ ಪ್ರಯತ್ನದಲ್ಲಿದ್ದೀವಿ. ನಿನ್ನೆ ಮೊನ್ನೆ ಕೊರೊನಾ ವೈರಸ್ ಬಂದಾಗ ಹಳ್ಳಿಗಳಲ್ಲಿ ಜೆಸಿಬಿ, ಟ್ರಾಕ್ಟರ್ ರಸ್ತೆಗೆ ಅಡ್ಡ ನಿಲ್ಸಿ, ಬೇಲಿ ಎಳೆದು ಊರೊಳಗೆ ಯಾರೂ ಬರಬ್ಯಾಡಿ ಅಂತಾ ಹೇಳಿದ್ದು ನೆನಪಿದ್ಯೋ? ಹಂಗೇ ನಮ್ಮ ಜಮೀನಿನ ತನಕ ಬಂದ್ರೆ ಅದ್ಯಾರು ಬರ್ತೀರಾ ನೋಡಾಣ ಅಂತಾ ಎದುರು ಬೀಳ್ತೀವಿ. ಅದಕ್ಕೆ ಮುಂಚೆ ಇವರಿಗೆ ಮನವರಿಕೆ ಮಾಡಿಕೊಡಬೇಕಿದೆ. ವಯಸ್ಸಾಯ್ತಲ್ಲೋ ನಾಗೇಶಣ್ಣ., ಎಷ್ಟು ಹೋರಾಟ ಮಾಡೋದು...'' ಎಂದು ಹೇಳಿದರಾದರು ಅವರ ಎಂದಿನ ರಣೋತ್ಸಾಹ ಕುಂದಿರಲಿಲ್ಲ.