ಭೂ ಸುಧಾರಣೆ ಸುಗ್ರೀವಾಜ್ಞೆ: ಗಾಂಧಿ ಮಾರ್ಗದಲ್ಲಿ ಚಳವಳಿಗಳು ನಡೆಯಬೇಕು...
ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವುದಾಗಿ ಸರ್ಕಾರ ಹೇಳಿದಾಗಿನಿಂದ ಅದಕ್ಕೆ ವಿರೋಧ ವ್ಯಕ್ತವಾಗುತ್ತಲೇ ಇತ್ತು. ಏತನ್ಮಧ್ಯೆ ಕೊರೊನಾ ಸಂಕಷ್ಟದ ಈ ಕಾಲದಲ್ಲಿ ರೈತ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆಯನ್ನೂ ಮಾಡಲಾಗದ ಸಂದರ್ಭದಲ್ಲಿ ಸುಗ್ರೀವಾಜ್ಞೆ ತರಲಾಗಿದೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿ ಗ್ರಾಮದ ಪ್ರವೇಶದಲ್ಲಿ "ಕೃಷಿ ಭೂಮಿ ಮಾರಾಟದ ಸರಕಲ್ಲ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆಗೆ ಧಿಕ್ಕಾರ. ಬಂಡವಾಳಶಾಹಿಗಳಿಗೆ, ಭೂಗಳ್ಳರಿಗೆ ಗ್ರಾಮದೊಳಗೆ ಪ್ರವೇಶವಿಲ್ಲ" ಎಂಬುದಾಗಿ ಫಲಕ ಹಾಕುವ ಮುಖಾಂತರ ತನ್ನ ಪ್ರತಿರೋಧ ಒಡ್ಡುವ ಕೆಲಸವನ್ನು ಮಾಡಲು ಮುಂದಾಗಿದೆ.
ಇವೆಲ್ಲದರ ನಡುವೆ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ಯಾರಿಗೂ ತೊಂದರೆ ಇಲ್ಲ. ಇದಾವ ಕಾರಣಕ್ಕೆ ಚಳವಳಿ ಮಾಡುತ್ತಿದ್ದಾರೆ ಎನ್ನುವ ಧೋರಣೆ ಉಳ್ಳವರೂ ಅನೇಕರಿದ್ದಾರೆ. ಅವರ ಪ್ರಶ್ನೆಗಳನ್ನು ಅಂಕಣಕಾರ, ಚಳವಳಿಗಳ ಸಂಪನ್ಮೂಲವಾಗಿರುವ ಕೆ.ಪಿ.ಸುರೇಶ್ ಅವರಿಗೆ ದಾಟಿಸಿ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಅವರ ಸುದೀರ್ಘ ಮಾತಿನ ಸಾರಾಂಶ ಹಿಡಿದಿಡುವ ಪ್ರಯತ್ನವಿದು.

ಕೆ.ಪಿ.ಸುರೇಶ್ ಅವರ ಮಾತು...
ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ಸುಗ್ರೀವಾಜ್ಞೆ ತಂದಿರುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವರು ನಿಜಕ್ಕೂ ಯಾರು? ಭೂಮಿಯನ್ನೇ ನಂಬಿಕೊಂಡು ಬದುಕಿರುವ ರೈತರು ತಮ್ಮ ಭೂಮಿ ಏಕೆ ಮಾರಾಟ ಮಾಡ್ತಾರೆ? ಭೂಮಿ ತಮಗೆ liability ಅಂದುಕೊಂಡಿರುವವರು ಮಾರಾಟ ಮಾಡಬಹುದು? ಇದರಿಂದ ಸಮಸ್ಯೆ ಏನು?
ಭೂಮಿಯನ್ನು ಯಾವ ನಾಗರೀಕತೆಯೂ ಯಾರೋ ಕೆಲವರ ಹತ್ತಿರ ಇರಬಹುದಾದ/ಇರಬೇಕಾದ asset ಅಂತ ನೋಡಿಲ್ಲ. ಸರ್ಕಾರ ಸೈಟುಗಳನ್ನು ಕೊಡುವುದು, ಭೂ ರಹಿತರಿಗೆ ಭೂಮಿ ಕೊಡುವುದು ಯಾತಕ್ಕೆ? Land is an asset which must be shared by every human being in each society. ಭೂಮಿ ಯಾರೋ ದುಡ್ಡಿರುವವರ ಸ್ವತ್ತಾಗುವುದಲ್ಲ. ಹಾಗಾಗಿ ಇದರ ವಿರುದ್ಧ ಎಲ್ಲರದ್ದೂ ಹೋರಾಟವಿದೆ.
ಒಬ್ಬ ಟ್ಯಾಕ್ಸಿ ಡ್ರೈವರ್, ತನ್ನ ಆದಾಯದ ಮೂಲವಾದ ಟ್ಯಾಕ್ಸಿಯನ್ನು ಮಾರಾಟ ಮಾಡುವ ಸಂದರ್ಭ ಬಂದರೆ ಹೇಗೆ? ಊಹಿಸಿಕೊಳ್ಳಿ. ರೈತರು ಭೂಮಿ ಮಾರೋದು ಅಂದರೆ ಬದುಕಿನ ಮೂಲವನ್ನೇ ಮಾರಿದ ಹಾಗೆ. ಅಂಥದೊಂದು ಸ್ಥಿತಿ ರೈತರಿಗೆ ಬಂದದ್ದಾದರೂ ಯಾರಿಂದ? ಎಲ್ಲಿಂದ? ಮೊದಲು ಉತ್ತರ ಹುಡುಕಬೇಕು. ನಮಗೆಲ್ಲಾ ಗೊತ್ತೇ ಇದೆ. ರೈತರಿಗೆ ತಮ್ಮ ಬದುಕಿನ ಆಧಾರವಾದ ಭೂಮಿ liability ಆಗುವುದು ಒಂದು ಸೀಸನ್ ನಲ್ಲಿ. ಬೆಳೆದ ಬೆಳೆಗೆ ಬೆಲೆ ಸಿಗದೆ ಇದ್ದಾಗ. ಬೆಳೆ ನಷ್ಟವಾದಾಗ. ಅಂಥ ಸಂದರ್ಭದಲ್ಲಿ ಅವನ ನೆರವಿಗೆ ಸಮಾಜ- ಸರ್ಕಾರ ನಿಲ್ಲಬೇಕೇ ಹೊರತು. ಆ vulnerable situation ನಲ್ಲಿ ರೈತ ತನ್ನ ಭೂಮಿ ಮಾರಾಟ ಮಾಡಿ ತನ್ನ ಬದುಕಿನ ಆಧಾರವನ್ನೇ ಕಳೆದುಕೊಳ್ಳುವ ರೀತಿ ಯಾರೂ ಮಾಡಬಾರದು. ಆದರೆ ಈಗಾಗಿರುವುದು ಅದೇ. ಕೊರೊನಾ ಸಂಕಷ್ಟದಲ್ಲಿ ರೈತರು ಇನ್ನಿಲ್ಲದ ಸಮಸ್ಯೆಗಳಲ್ಲಿ ಸಿಲುಕಿರುವಾಗ ಯಾರು ಬೇಕಾದರೂ ಕೃಷಿ ಭೂಮಿ ಕೊಳ್ಳಬಹುದೆಂಬ ಕಾನೂನು ತರುವ ಮುಖೇನ ಸಂಕಷ್ಟದಲ್ಲಿರುವ ರೈತನಿಗೆ ಆಮಿಷ ಒಡ್ಡಿದಂತಾಗಿದೆ.

ರೈತರಿಗೂ ಬಂಡವಾಳ ಹೂಡುವ ಸನ್ನಿವೇಶ ಬರಬೇಕು
ಇಷ್ಟಕ್ಕೂ ರೈತ ಭೂಮಿಯನ್ನು ಮಾರುವ ಸ್ಥಿತಿ ಬರುವುದು ಏಕೆ ಎಂದು ಇನ್ನೊಮ್ಮೆ ಪರಿಶೀಲಿಸಿ ನೋಡಿ. When he has no capacity to invest capital. ರೈತರಿಗೆ ಸಿಗಬೇಕಾದ capital ಸಿಕ್ಕಿಲ್ಲ. ದೇಶದಲ್ಲಿ ರಿಸೋರ್ಸ್ ಮ್ಯಾನೇಜ್ಮೆಂಟ್ ಸರಿಯಾಗಿ ಮಾಡಿಯೇ ಇಲ್ಲ. ರೈತನ ಭೂಮಿಯ ಮೇಲೆ ಸರ್ಕಾರಗಳು- ಬ್ಯಾಂಕ್ ಗಳು ಎಷ್ಟು ಸಾಲ ಕೊಡುತ್ತವೆ? ಅದೇ ಒಂದು ಮನೆ ಕೊಂಡರೆ ಅದರ ಮೌಲ್ಯದ 80 ಪರ್ಸೆಂಟ್ ವರೆಗೆ ಸಾಲ ಕೊಡಲಾಗುತ್ತದೆ. ರೈತನಿಗೆ?
ರೈತನಿಗೂ ಒಮ್ಮೆ ನಷ್ಟ ಅನುಭವಿಸಿದಾಗ ಮತ್ತೆ ಬಂಡವಾಳ ಹೂಡುವಂತಹ ಸನ್ನಿವೇಶ, ಅದಕ್ಕೆ ಬೇಕಾದ ಸಂಪನ್ಮೂಲ ಈ ಸಮಾಜ - ಸರ್ಕಾರ ಸಿಗುವಂತೆ ಮಾಡಬೇಕು. ತನ್ನ ಬದುಕಿನ ಆಧಾರವಾದ ಭೂಮಿಯನ್ನು ಮಾರಾಟ ಮಾಡುವ ಸಂದರ್ಭದಲ್ಲಿರುವ ರೈತನಿಂದ ಭೂಮಿ ಕಸಿದುಕೊಳ್ಳುವ ಸಮಾಜವನ್ನು ಪ್ರಳಯಾಂತಕ ಸಮಾಜ ಎನ್ನಬೇಕು. ಹಾಗಾಗಿ ಈಗಿನ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ಭೂಮಿಯ ಹಂಚಿಕೆಯಾಗುವುದಿಲ್ಲ. ಭೂಮಿ ದುಡ್ಡಿದ್ದವನ ಸ್ವತ್ತಾಗಿ ಉಳಿಯುತ್ತದೆ.

ಯಾವ ಶರತ್ತೂ ಇಲ್ಲದೆ ಹೀಗೆ ಭೂಮಿ ಕೊಡಬಹುದಾ?
ಇದೀಗ ಹೊಸ ಭೂ ಸುಧಾರಣೆ ಕಾನೂನಿನ ಪ್ರಕಾರ ನೀಡಿರುವ ಇಡುವಳಿಯ ಮಿತಿ ಹೆಚ್ಚಿದೆ ಎಂಬ ಆರೋಪವಿದೆ. ಇದ್ದರೇನಂತೆ? ಹಣ ಇದ್ದವರು ತಗೊಳ್ತಾರ?
ಒಮ್ಮೆ ಹಿಂದಕ್ಕೆ ಹೋಗಿ ನೋಡಿ. ಹೆಚ್ಚು ಭೂಮಿ ಉಳ್ಳವರು ತಮ್ಮ ಭೂಮಿಯನ್ನು optimum ಬಳಸಿರುವ ಉದಾಹರಣೆ ಸಿಗೋದೇ ಇಲ್ಲ. ಈಗ ಭೂಮಿ ಕೊಂಡು ಕೊಳ್ಳೋವ್ರಿಗೆ ಯಾವುದೂ ಶರತ್ತಿಲ್ಲದೆ ಭೂಮಿಯ ಒಡೆತನ ಕೊಡೋದ್ರಿಂದ ಆ ಭೂಮಿಯಲ್ಲಿ ಏನು ನಿರೀಕ್ಷೆ ಮಾಡ್ತೀರ?.ಎಷ್ಟೋ ಜನಕ್ಕೆ ಭೂಮಿ ಕೊಳ್ಳುವ ಆಸೆ ಇದೆ. ಕೃಷಿ ಮಾಡುವ ಆಸೆ ಇದೆ ಎಂದೆಲ್ಲಾ ಹೇಳಲಾಗ್ತಿದೆ. Operatate ಮಾಡುವಷ್ಟು, ಅಂದರೆ ಬೆಳೆಯುವಷ್ಟು ಭೂಮಿ ಕೊಳ್ಳಲು ಅವಕಾಶವಿದ್ದರೆ ಸಾಕು. ಉದಾಹರಣೆಗೆ ಒಂದತ್ತಿಪ್ಪತ್ತು ಎಕರೆಯಷ್ಟು ಭೂಮಿ ಕೊಡೋದಾದ್ರೆ ಓಕೆ. 108 ಎಕರೆ 216 ಎಕರೆ ಅಂದರೇನು ?
ಯಾವ ಶರತ್ತೂ ಇಲ್ಲದೆ ಹೀಗೆ ಭೂಮಿ ಕೊಡಬಹುದಾ? ಕೃಷಿ ಭೂಮಿ ದೇಶದ ಆಹಾರ ಭದ್ರತೆಗೆ ಬಳಸಬೇಕು. ರಾಸಾಯನಿಕಗಳಿಂದ ಭೂಮಿಯ ಆರೋಗ್ಯ ಕೆಡಿಸಬಾರದು, nutrition and food security ಗೆ ಬಳಸಬೇಕು ! ಹೀಗೆ ಕೆಲವು ಶರತ್ತುಗಳನ್ನು ವಿಧಿಸಿಯಾದರೂ ಕೊಡಲಾಗ್ತಿದೆಯೇ? ಅದೂ ಇಲ್ಲ.
ರೈತರಿಗಿರುವ ದೊಡ್ಡ ಸವಾಲು ಅದೇ; ನಿಮಗೆ ಇನ್ನೊಂದು ಉದಾಹರಣೆ ಹೇಳ್ತೀನಿ. ದಲಿತರಿಗೆ ಮತ್ತು ಆದಿವಾಸಿಗಳಿಗೆ ಸರ್ಕಾರ ಕೊಟ್ಟ ಭೂಮಿಯನ್ನು ಮಾರುವ ಹಾಗಿಲ್ಲ, ಯಾರೂ ಕೊಳ್ಳುವ ಹಾಗಿಲ್ಲ ಎನ್ನುವ ಕಾನೂನಿದೆ. ಯಾಕಿದೆ ಅದು? ಅವರಿಗೆ ಭೂಮಿ ಜೀವನಾಧಾರವಾಗಿರಬೇಕು. ಅದು ಅವರ ಕೆಲಸದ ಬದುಕಿನ ಭದ್ರತೆಯಾಗಿರಬೇಕು ಎಂದು. ಜೊತೆಗೆ ಮಾರಾಟ ಮಾಡುವ ಅವಕಾಶವಿದ್ದರೆ ಸಂಕಷ್ಟ ಆಮಿಷಗಳ ನಡುವೆ ಆ ಸಮುದಾಯ ಭೂಮಿ ಕಳೆದುಕೊಳ್ಳುಬಹುದಾದ ಸಾಧ್ಯತೆಗಳೇ ಹೆಚ್ಚು. ಆದ್ದರಿಂದ ಅಂಥದೊಂದು ಕಾನೂನಿದೆ. ಈಗ ರೈತರ ಮುಂದಿರುವ ದೊಡ್ಡ ಸವಾಲು ಕೂಡ ಅದೇ. "Big fish swallows small fishes" ಅನ್ನುವ ಹಾಗೆ ಆಗ್ತಿದೆ. ಯಾವ Angle ನಲ್ಲಿ ನೋಡಿದರೂ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದಿರುವುದು ಸರಿಯಲ್ಲ.ಆಯ್ತು. ಭೂಮಿ ಮೇಲೆ ಇನ್ವೆಸ್ಟ್ ಮಾಡುವುದು wise ಅನ್ನುವುದಾದರೆ why not farmers retain their land?

"ಭೂಮಿ ಮಾರಲ್ಲ ಅನ್ನುವ ತೀರ್ಮಾನಕ್ಕೆ ಬರಬೇಕು"
ಇದೀಗ ರೈತರು ಏನು ಮಾಡಬೇಕು ? ರೈತ ಸಂಘಟನೆಗಳ ಪಾತ್ರವೇನು?
ನಿಷೇಧಾತ್ಮಕವಾದದ್ದನ್ನು ಪ್ರತಿಭಟಿಸುವುದು ಸುಲಭ. ಈಗ ಸುಲಭವಾದ ಕಾನೂನು ಬಂದಿರುವಾಗ ಕೊಂಚ ಕಷ್ಟ. ಈಗ ರೈತರು ಎಷ್ಟೇ ಕಷ್ಟವಾದರೂ ಭೂಮಿ ಕೊಡೋಲ್ಲ, ಮಾರೋಲ್ಲ ಎಂಬ ತೀರ್ಮಾನಕ್ಕೆ ಬರಬೇಕು. ರೈತ ಸಂಘ ಮಾರಬೇಡಿ ಅಂದ್ರೆ ‘ನನ್ನ ಕಷ್ಟಕ್ಕೆ ನೀನು ಬರ್ತೀಯಾ" ಅನ್ನಬಹುದು. ಹಾಗಾಗಿ ನಿಜವಾಗಿಯೂ ರೈತರು ಯಾವ ಪರಿಸ್ಥಿತಿಯಲ್ಲಿ ತಮ್ಮ ಭೂಮಿಯನ್ನು ಮಾರಾಟ ಮಾಡ್ತಾರೆ ಎನ್ನುವುದನ್ನು ಅಧ್ಯಯನ ಮಾಡಬೇಕು. ಮಗಳ ಮದುವೆಗಾ? ಮಗನ ಬ್ಯುಸಿನೆಸ್ ಗೆ ಬಂಡವಾಳ ಕೊಡುವುದಕ್ಕಾ? ಮಕ್ಕಳ ವಿದ್ಯಾಭ್ಯಾಸಕ್ಕಾ? ಆರೋಗ್ಯದ ಕಾರಣಕ್ಕಾ? ಹೀಗೆ ಜನಸಾಮಾನ್ಯರ, ರೈತರ ಸಮಸ್ಯೆಗಳನ್ನು ಮಹಾತ್ಮ ಗಾಂಧೀಜಿ ಕಣ್ಣುಗಳಿಂದ ನೋಡಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಕೆಲಸವನ್ನು ರೈತ ಸಂಘಟನೆಗಳು ಮಾಡಬೇಕು. ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ಒಂದು support system ಬೇಕು.ಹೀಗೆ ರೈತರ ಮತ್ತು ಚಳವಳಿಗಳ ಮುಂದೆ ಬಹು ದೊಡ್ಡ ಸವಾಲುಗಳೇ ಇವೆ.












Click it and Unblock the Notifications