ಭಾರತದ ಪ್ರತಿಷ್ಠೆಗೆ ನಿಮ್ಮಿಂದ ಭಾರೀ ಪೆಟ್ಟು; ರಾಹುಲ್ ಗಾಂಧಿ ಟೀಕೆ
ನವದೆಹಲಿ, ಫೆಬ್ರುವರಿ 03: ದೆಹಲಿಯಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ಮುಂದುವರೆದಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, "ಸರ್ಕಾರ ರೈತರನ್ನು ನಡೆಸಿಕೊಳ್ಳುತ್ತಿರುವ ರೀತಿ ಸರಿಯಿಲ್ಲ. ಅವರನ್ನು ಬರದಂತೆ ತಡೆಯಲು ದೆಹಲಿಯಲ್ಲಿ ಬ್ಯಾರಿಕೇಡ್ ಗಳನ್ನು ಹಾಕಲಾಗಿದೆ. ಈ ಸಂಗತಿಗಳಿಂದ ಭಾರತದ ಪ್ರತಿಷ್ಠೆಗೆ ಭಾರೀ ಪೆಟ್ಟುಬಿದ್ದಿದೆ. ಬಿಜೆಪಿ ಹಾಗೂ ಆರ್ ಎಸ್ ಎಸ್ ಸೇರಿ ಭಾರತದ ಶಕ್ತಿಯನ್ನೇ ಚೂರು ಚೂರು ಮಾಡುತ್ತಿವೆ" ಎಂದು ಆರೋಪಿಸಿದ್ದಾರೆ.
ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ, ಪಾಪ್ ಗಾಯಕಿ ರಿಹಾನಾ ಟ್ವೀಟ್ ಮಾಡಿದ್ದ ಬೆನ್ನಲ್ಲೇ ರೈತರ ಪ್ರತಿಭಟನೆ ಕುರಿತು ಸರ್ಕಾರದ ನಿಲುವಿನ ಬಗ್ಗೆಯೂ ಟೀಕೆಗಳು ಜೋರಾಗಿವೆ. ಬುಧವಾರ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ರೈತರ ಈ ವಿವಾದವನ್ನು ಆದಷ್ಟು ಬೇಗ ಸರ್ಕಾರ ಪರಿಹರಿಸಬೇಕು. ಸರ್ಕಾರ ಅವರ ಮಾತನ್ನು ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಮುಂದೆ ಓದಿ...

"ರೈತರನ್ನು ನಡೆಸಿಕೊಳ್ಳುತ್ತಿರುವ ರೀತಿಯೇ ಪ್ರತಿಷ್ಠೆಗೆ ಪೆಟ್ಟು ಕೊಟ್ಟಿದೆ"
ದೆಹಲಿಯಲ್ಲಿ ರೈತರು ನಗರಕ್ಕೆ ನುಗ್ಗದಂತೆ ತಡೆಯಲು ನಿರ್ಮಿಸಿರುವ ಬ್ಯಾರಿಕೇಡ್ ಗಳು ಹಾಗೂ ಅವರನ್ನು ನಡೆಸಿಕೊಳ್ಳುತ್ತಿರುವ ರೀತಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠೆಗೆ ಪೆಟ್ಟು ಕೊಟ್ಟಿದೆ. ಸರ್ಕಾರ ನಮ್ಮ ರೈತರನ್ನು ನಡೆಸಿಕೊಳ್ಳುತ್ತಿರುವ ರೀತಿಯಿಂದ ಮಾತ್ರವಲ್ಲ, ನಮ್ಮ ಜನರನ್ನು, ನಮ್ಮ ಪತ್ರಕರ್ತರನ್ನು ನಡೆಸಿಕೊಳ್ಳುತ್ತಿರುವ ರೀತಿಯಿಂದಲೂ ಭಾರತದ ಘನತೆಗೆ ಹಾನಿಯಾಗಿದೆ ಎಂದು ಹೇಳಿದ್ದಾರೆ.

"ದೇಶಕ್ಕಾಗಿ ಕಷ್ಟಪಟ್ಟ ರೈತರಿಗೆ ಇಂಥ ಸ್ಥಿತಿ"
ಭಾರತದ ಅತಿ ದೊಡ್ಡ ಶಕ್ತಿ ಎಂದೇ ಕರೆಸಿಕೊಂಡಿದ್ದ ಮೃದು ಆಡಳಿತ ಧೋರಣೆಯನ್ನು ಬಿಜೆಪಿ ಆರ್ ಎಸ್ ಎಸ್ ಮನಸ್ಥಿತಿ ಚೂರು ಚೂರು ಮಾಡಿವೆ ಎಂದು ಆರೋಪಿಸಿದ್ದಾರೆ. ರೈತರನ್ನು ತಡೆಯಲು ದೆಹಲಿ ಗಡಿಗಳಲ್ಲಿ ನಿರ್ಮಿಸಲಾಗಿರುವ ಬಹು ಹಂತದ ಬ್ಯಾರಿಕೇಡ್ ಗಳ ಕುರಿತು ಮಾತನಾಡಿ, ನಮ್ಮ ರಾಜಧಾನಿ ಕೋಟೆಯಂತೆ ಬದಲಾಗುತ್ತಿದೆ. ದೇಶಕ್ಕಾಗಿ ಕಷ್ಟ ಪಟ್ಟ ರೈತರನ್ನು ಈ ರೀತಿ ನಡೆಸಿಕೊಳ್ಳಬಾರದು ಎಂದಿದ್ದಾರೆ.
|
"ಪ್ರಧಾನಿಯವರೇ ನಿಮ್ಮ ಕೆಲಸವನ್ನು ನೀವು ಮಾಡಿ"
ನಿಮ್ಮ ಕೆಲಸವನ್ನು ನೀವು ಸರಿಯಾಗಿ ಮಾಡಿ ಎಂದು ಪ್ರಧಾನಿಯವರಲ್ಲಿ ಕೇಳಿಕೊಳ್ಳುತ್ತೇನೆ. ಈ ದೇಶವನ್ನು ಮಾರುವುದು ನಿಮ್ಮ ಕೆಲಸವಲ್ಲ. ನಿಮ್ಮ ಕೆಲಸ ದೆಹಲಿ ಹೊರಗೆ ನಿಂತು ಹೋರಾಡುತ್ತಿರುವ ರೈತರನ್ನು ಕಾಪಾಡುವುದು. ಹೋಗಿ ಅವರ ಕೈ ಹಿಡಿಯಿರಿ. ಅವರ ಬಳಿ ಹೋಗಿ, ನನ್ನಿಂದ ನಿಮಗೆ ಏನಾಗಬೇಕು ಎಂಬುದನ್ನು ಕೇಳಿ ಅಷ್ಟೇ ಸಾಕು ಎಂದು ಕೇಳಿಕೊಂಡಿದ್ದಾರೆ.

"ನಿಮ್ಮೆಲ್ಲಾ ಧೈರ್ಯ ಒಟ್ಟುಗೂಡಿಸಿ ದೇಶ ಮುನ್ನಡೆಸಿ"
ಆದರೆ ನಮ್ಮ ಪ್ರಧಾನಿ ಹೀಗೆ ಮಾಡುತ್ತಿಲ್ಲ. ಅವರೇ ಬೇರೆ ಹಾದಿಯಲ್ಲಿದ್ದಾರೆ. ನಾವು ಎಲ್ಲೋ ಇದ್ದೇವೆ. ದೇಶ ಇನ್ನೊಂದು ಕಡೆ ಇದೆ. ಪ್ರಧಾನಿಯವರಲ್ಲಿ ನಾನು ಕೇಳಿಕೊಳ್ಳುವುದು ಒಂದೇ, ನಿಮ್ಮ ಧೈರ್ಯವನ್ನೆಲ್ಲಾ ಒಟ್ಟುಗೂಡಿಸಿ ಈ ದೇಶವನ್ನು ಮುನ್ನಡೆಸಿ ಎಂದಿದ್ದಾರೆ.












Click it and Unblock the Notifications