ದೇಶಕ್ಕೆ ಭೂತಾನ್ ಅಡಿಕೆ ಆಮದಿಗೆ ಆಂತಕ ವ್ಯಕ್ತಪಡಿಸಿದ ಕೋಟೆ ನಾಡಿನ ರೈತರು !
ಚಿತ್ರದುರ್ಗ, ಅ.03: ನೆರೆಯ ಭೂತಾನ್ ದೇಶದಿಂದ ಭಾರತಕ್ಕೆ 17 ಸಾವಿರ ಟನ್ ಹಸಿರು ಅಡಿಕೆ ಆಮದು ಮಾಡಿಕೊಳ್ಳುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕೋಟೆ ನಾಡು ಚಿತ್ರದುರ್ಗದ ಅಡಿಕೆ ಬೆಳೆಗಾರರು ವಿರೋಧ ವ್ಯಕ್ತಪಡಿಸಿದ್ದು, ಆತಂಕ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಚಿತ್ರದುರ್ಗ, ಭೀಮಸಮುದ್ರ, ಅರೆಮಲೆನಾಡು ಹೊಳಲ್ಕೆರೆ ಹಾಗೂ ಹಿರಿಯೂರು ತಾಲ್ಲೂಕು ಸೇರಿದಂತೆ ಇತರೆ ಭಾಗಗಳಲ್ಲಿ ಅತಿ ಹೆಚ್ಚು ಅಡಿಕೆ ಬೆಳೆಯುತ್ತಾರೆ. ಹೀಗಾಗಿ ಇಲ್ಲಿನ ರೈತರು ತಮ್ಮ ಅಡಿಕೆ ಬಗ್ಗೆ ಆತಂಕ ಹೊರ ಹಾಕಿದ್ದಾರೆ.
ಭಾರತಕ್ಕೆ ಭೂತಾನ್ ದೇಶದಿಂದ ಅಡಿಕೆ ಆಮದು: ಆತಂಕ ಬೇಡ ಎಂದ ಆರಗ ಜ್ಞಾನೇಂದ್ರ
ಈ ಕುರಿತು ಮಾತನಾಡಿರುವ ರೈತ ಮುಖಂಡ ಕಸವನಹಳ್ಳಿ ರಮೇಶ್ ಸರ್ಕಾರ ರೈತರ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಇಲ್ಲಿನ ರೈತರ ಅಡಿಕೆ ಬೆಲೆ ಕುಸಿಯುವ ಆತಂಕ
"ಕೇಂದ್ರ ಸರ್ಕಾರ ಭೂತಾನ್ ನಿಂದ 17000 ಟನ್ ಹಸಿ ಅಡಿಕೆ ತೆರಿಗೆ ಇಲ್ಲದೆ ಅಮದು ಮಾಡಿಕೊಳ್ಳುತ್ತಿರುವುದು ಅತ್ಯಂತ ದುರದೃಷ್ಟಕರ ಹಾಗೂ ಖಂಡನೀಯ" ಎಂದು ರೈತ ಮುಖಂಡ ಕಸವನಹಳ್ಳಿ ರಮೇಶ್ ಹೇಳಿದ್ದಾರೆ.
ದಕ್ಷಿಣ ಭಾರತದ ರಾಜ್ಯಗಳಲ್ಲಿ ಅತಿ ಹೆಚ್ಚು ನೀರು, ಗೊಬ್ಬರ ಪೋಷಕಾಂಶ ನಿರ್ವಹಣಾ ವೆಚ್ಚವನ್ನು ಮಾಡಿ ದೀರ್ಘಾವಧಿಯಲ್ಲಿ 6 ರಿಂದ 8 ವರ್ಷಗಳ ಕಾಲ ಕಾದು ಬೆಳೆಯನ್ನು ಪಡೆಯಬೇಕಾದ ಸ್ಥಿತಿಯಲ್ಲಿ ಅಡಿಕೆ ಬೆಳೆಗಾರರು ಇದ್ದಾರೆ. ಆಮದು ಮಾಡಿಕೊಳ್ಳುವ ಅಡಿಕೆಯಿಂದ ಇಲ್ಲಿನ ರೈತರಿಗೆ ಬೆಲೆ ಕುಸಿಯುತ್ತದೆ ಎಂಬ ಆತಂಕ ಶುರುವಾಗಿದೆ. ಒಮ್ಮೊಮ್ಮೆ ಅತಿಯಾದ ಮಳೆಯಿಂದ ಕೊಳೆ ರೋಗಕ್ಕೆ ತುತ್ತಾಗಿ ಖರ್ಚು ಮಾಡಿದ ಹಣ ಸಹ ಬರದಂತ ಸ್ಥಿತಿಯಲ್ಲಿ ಅಡಿಕೆ ಬೆಳೆಗಾರರಿದ್ದಾರೆ" ಎಂದು ಆತಂಕ ಹೊರ ಹಾಕಿದ್ದಾರೆ.
'ಆಮದು ನಿಲ್ಲಿಸದಿದ್ದರೇ ರೈತರು ಬೀದಿಗಿಳಿದು ಪ್ರತಿಭಟಿಸಬೇಕಾಗುತ್ತದೆ'
"ಸದ್ಯ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಸ್ಥಿರವಾಗಿದ್ದು ಇಂತಹ ಸಂದರ್ಭದಲ್ಲಿ ರೈತರು ಅನಿವಾರ್ಯವಾಗಿ ಅಡಿಕೆ ಬೆಳೆಯನ್ನು ವಿಸ್ತರಣೆ ಮಾಡುತ್ತಿದ್ದಾರೆ. ಆದರೆ ಸರ್ಕಾರ ಏಕಾಏಕಿ ಹಸಿ ಅಡಿಕೆಯನ್ನು ಆಮದು ಮಾಡಿಕೊಳ್ಳುತ್ತಿರುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ರೈತರು ಬೀದಿಗೆ ಬಂದು ಪ್ರತಿಭಟನೆ ಮಾಡಬೇಕಾಗುತ್ತದೆ" ಎಂದು ಸರ್ಕಾರಕ್ಕೆ ಕಸವನಹಳ್ಳಿ ರಮೇಶ್ ಎಚ್ಚರಿಕೆ ನೀಡಿದ್ದಾರೆ.
ದೇಶಿಯ ಅಡಿಕೆ ಮಾರುಕಟ್ಟೆ ಮೇಲೆ ಯಾವುದೇ ಪರಿಣಾಮವಿಲ್ಲ!
ನೆರೆಯ ದೇಶ ಭೂತಾನ್ನಿಂದ ಪ್ರತಿ ವರ್ಷ 17,000 ಟನ್ ಅಡಿಕೆ ಆಮದು ಮಾಡಿ ಕೊಳ್ಳಲು ಕೇಂದ್ರ ಸರ್ಕಾರ ಇತ್ತೀಚೆಗೆ ಅವಕಾಶ ನೀಡಿದೆ. ಇದರಿಂದ ದೇಶಿಯ ಅಡಿಕೆ ಮಾರುಕಟ್ಟೆ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ರಾಜ್ಯದ ಅಡಿಕೆ ಬೆಳೆಗಾರರಿಗೆ ಭರವಸೆ ನೀಡಿದ್ದಾರೆ.
ರಾಜ್ಯದ ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷರೂ ಆಗಿರುವ ಆರಗ ಜ್ಞಾನೇಂದ್ರ , "ಅಡಿಕೆ ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ಕಾಯ್ದಕೊಳ್ಳಲು ಕರ್ನಾಟಕ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಜೊತೆಗೆ ನಿರಂತರ ಸಂಪರ್ಕದಲ್ಲಿದೆ. ಭೂತಾನ್ ಅಡಿಕೆ ಆಮದು ವಿಚಾರವಾಗಿಯೂ ಕೇಂದ್ರದೊಂದಿಗೆ ಮಾತುಕತೆ ನಡೆಸಲಾಗಿದೆ. ಬೆಳೆಗಾರರಿಗೆ, ಯಾವುದೇ ಗೊಂದಲ ಆತಂಕ ಬೇಡ'' ಎಂದಿದ್ದಾರೆ.
ತುಂಬಿದ ವಾಣಿ ವಿಲಾಸ, ದಾಖಲೆ ಪ್ರಮಾಣದ ಅಡಿಕೆ ನಾಟಿ
ಜಿಲ್ಲೆಯ ಏಕೈಕ ಜೀವನಾಡಿಯಾಗಿರುವ ತಾಲ್ಲೂಕಿನ ವಾಣಿ ವಿಲಾಸ ಜಲಾಶಯ 89 ವರ್ಷಗಳ ಬಳಿಕ ದಾಖಲೆ ಮಟ್ಟದಲ್ಲಿ ನೀರು ಸಂಗ್ರಹವಾಗಿದೆ. ಪ್ರಸ್ತುತ ಜಲಾಶಯದ ನೀರಿನ ಮಟ್ಟ 131 ಅಡಿ ನೀರು ಸಂಗ್ರಹವಾಗಿದ್ದು, ರೈತರು ಲಾಭದಾಯಕ ಬೆಳೆಗಳನ್ನು ಬೆಳೆಯಲು ಮುಂದಾಗಿದ್ದಾರೆ. ಅದರಲ್ಲೂ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಅಡಿಕೆ ಸಸಿಗಳನ್ನು ನಾಟಿ ಮಾಡಿದ್ದಾರೆ.
ಜಲಾಶಯ ತುಂಬಿ ಕೋಡಿ ಬಿದ್ದಿ ಹಿನ್ನೆಲೆಯಲ್ಲಿ ಸುಮಾರು 20 ವರ್ಷಗಳ ನೀರಿನ ದಾಹ ದೂರವಾಗಿದೆ. ಈ ನಿಟ್ಟಿನಲ್ಲಿ ಬತ್ತಿಹೋಗಿದ್ದ ಬೋರ್ ವೆಲ್ ಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ. ರೈತರು ತಮ್ಮ ತಮ್ಮ ಜಮೀನುಗಳಲ್ಲಿ ಎರಡರಿಂದ ಐದು ಎಕರೆ ಭೂಮಿಯಲ್ಲಿ ಅಡಿಕೆ ಗಿಡಗಳನ್ನು ನಾಟಿ ಮಾಡಿದ್ದಾರೆ. ಐದಾರು ವರ್ಷಗಳ ಕಾಲ ಉತ್ತಮ ಇಳುವರಿ ಬರುವಂತೆ ಕಾಪಾಡಿಕೊಂಡು ಬಂದರೆ ಉತ್ತಮ ಆದಾಯ ಪಡೆಯಬಹುದು ಎಂಬ ವಿಶ್ವಾಸದಲ್ಲಿ ಜಿಲ್ಲೆಯ ರೈತರಿದ್ದಾರೆ.