ಖುರ್ಚಿ ಮೇಲೆ ಇರುವಷ್ಟು ದಿನ ರೈತರ ಪರವಾಗಿಯೇ ಕೆಲಸ ಮಾಡುತ್ತೇನೆ ಎಂದ ಸಿಎಂ
ಅಧಿಕಾರ ಇರುವವರೆಗೂ ನಾನು ರೈತರ ಪರವಾಗಿ ಕೆಲಸ ಮಾಡುತ್ತೇನೆ ಎನ್ನುವ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಹಿಂದಿರುವ ಉದ್ದೇಶವೇನು ತಿಳಿಯಿರಿ.
ಧಾರವಾಡ, ಜನವರಿ, 31: ಪ್ರಸ್ತುತ ಕೃಷಿಯಲ್ಲಿ ದೊಡ್ಡ ಕ್ರಾಂತಿ ಆಗುತ್ತಿದ್ದು, ಈ ಬಾರಿ ರೈತರಿಗೆ ಮತ್ತು ರೈತರ ಪರವಾಗಿಯೇ ವಿಶೇಷ ಬಜೆಟ್ ಇರಲಿದೆ. ನಾನು ಖುರ್ಚಿ ಮೇಲೆ ಇರುವಷ್ಟು ದಿನ ರೈತರ ಪರವಾಗಿಯೇ ಕೆಲಸ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಧಾರವಾಡದ ಕೃಷಿ ವಿವಿ ಆವರಣದಲ್ಲಿ ಕೃಷಿ ಇಲಾಖೆ, ಜಿಲ್ಲಾಡಳಿತ ಹಾಗೂ ಕೃಷಿ ವಿವಿ ವತಿಯಿಂದ ನೂತನ ಯೋಜನೆಗಳ ಚಾಲನಾ ಕಾರ್ಯಕ್ರಮ ಮತ್ತು ಕೃಷಿ ಪಂಡಿತ, ಕೃಷಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ಎಲ್ಲಿಯವರೆಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಇರುತ್ತೇನೆಯೋ ಅಲ್ಲಿಯವರೆಗೂ ರೈತರ ಪರವಾಗಿಯೇ ಇರುತ್ತೇನೆ. ಪ್ರಸಕ್ತ ವರ್ಷ 33 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗಿದೆ. ಕಳೆದ ವರ್ಷ ಇದು 23 ಲಕ್ಷ ರೈತರಿಗೆ ಮಾತ್ರ ಇತ್ತು. ಕೇವಲ ಒಂದೇ ವರ್ಷದಲ್ಲಿ 10 ಲಕ್ಷ ರೈತರಿಗೆ ಹೆಚ್ಚಳ ಮಾಡಲಾಗಿದೆ. ಕೃಷಿ ಸಾಲ ನೀತಿ ಬದಲಾಗಬೇಕು. ಅದನ್ನು ಸರಿ ಮಾಡುತ್ತೇನೆ. ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸಲು ಚಿಂತನೆ ನಡೆದಿದ್ದು, ಕೃಷಿ ಉತ್ಪನ್ನ ಮತ್ತು ಬೀಜ ಸಂರಕ್ಷಿಸಲು ಚಿಕ್ಕ ಗೋದಾಮುಗಳ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.

ಕೃಷಿ ಕ್ಷೇತ್ರವನ್ನು ಬೆಳೆಸುವ ಚಿಂತನೆ
ಕೃಷಿಗೆ ಪೂರಕವಾಗಿ ಕೆಲಸ ಮಾಡುವ ಕಾಯಕ ವರ್ಗಗಳಿಗೆ ಕಾಯಕ ಯೋಜನೆಯಡಿ 50 ಸಾವಿರ ರೂಪಾಯಿ ಕೊಟ್ಟು ಯಂತ್ರೋಪಕರಣಗಳನ್ನು ಒದಗಿಸಿ ಕೃಷಿಯನ್ನು ಬೆಳೆಸಲು ಯತ್ನಿಸಲಾಗುತ್ತಿದೆ. ಯುವಶಕ್ತಿ ಯೋಜನೆಯಡಿ ಪ್ರತಿ ಗ್ರಾಮದಲ್ಲಿ 2 ಯುವಕ ಸಂಘಗಳಿಗೆ ತಲಾ 5 ಲಕ್ಷ ರೂಪಾಯಿ ಮತ್ತು ಮಹಿಳಾ ಸಂಘಟನೆಗಳಿಗೂ ಇದೇ ಮಾದರಿಯ ಅನುದಾನ ನೀಡುವ ಮೂಲಕ ಗ್ರಾಮೀಣ ಭಾಗದಲ್ಲಿಯೂ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.

ವಿದ್ಯಾಸಿರಿ ಯೋಜನೆ ಆರಂಭಿಸಿದೆ
ರೈತರ ಮಕ್ಕಳು ವಿದ್ಯಾಭ್ಯಾಸ ಮಾಡಲು ವಿದ್ಯಾಸಿರಿ ಯೋಜನೆ ಆರಂಭಿಸಿದೆ. ಅಲ್ಲದೇ ಇಂದು 51 ಲಕ್ಷ ರೈತರ ಖಾತೆಗೆ 390 ಕೋಟಿ ರೂಪಾಯಿಗಳನ್ನು ರೈತ ಶಕ್ತಿ ಯೋಜನೆಯಡಿ ವರ್ಗಾವಣೆ ಮಾಡಿದ್ದು, ಇದಕ್ಕಾಗಿ ಒಟ್ಟು 500 ಕೋಟಿ ರೂಪಾಯಿ ಕಾಯ್ದಿರಿಸಲಾಗಿದೆ. ವಿದ್ಯಾನಿಧಿ ಯೋಜನೆಯಡಿ 11 ಲಕ್ಷ ರೈತರ ಮಕ್ಕಳಿಗೆ 488 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಇನ್ನು ಹೊಸದಾಗಿ ಯಾರು ಶಾಲೆ, ಕಾಲೇಜುಗಳಲ್ಲಿ ಪ್ರವೇಶ ಪಡೆಯುತ್ತಾರೆಯೋ ಅವರಿಗೂ ಇದು ಅನ್ವಯವಾಗಲಿದೆ ಎಂದರು.












Click it and Unblock the Notifications