ಅಪಪ್ರಚಾರಕ್ಕೆ ಕಿವಿಗೊಡಬೇಡಿ, ಸಾಲಮನ್ನಾ ಮಾಡೇ ಮಾಡ್ತೀನಿ: ಸಿಎಂ
Recommended Video

ಮಂಡ್ಯ, ನವೆಂಬರ್ 23: ರೈತರು ಅಪಪ್ರಚಾರಗಳಿಗೆ ಕಿವಿಗೊಡಬೇಡಿ, ಸಾಲಮನ್ನಾ ಮಾಡುವುದು ಖಾಯಂ ಎಂದು ಸಿಎಂ ಕುಮಾರಸ್ವಾಮಿ ಅವರು ಮತ್ತೊಮ್ಮೆ ರೈತರಿಗೆ ಭರವಸೆ ತುಂಬಿದರು.
ಮಂಡ್ಯ ತಾಲೂಕಿನ ಶಿವಳ್ಳಿಯಲ್ಲಿ ಬಸ್ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕೆ ಮಾತನಾಡಿದ ಮುಖ್ಯಮಂತ್ರಿ, ಸಾಲ ಮನ್ನಾ ಬಗ್ಗೆ ರೈತರಿಗೆ ಆತಂಕ ಬೇಡ. 45 ಸಾವಿರ ಕೋಟಿ ಸಾಲ ಮನ್ನಾಕ್ಕೆ ಸಿದ್ಧತೆ ನಡೆದಿದ್ದು, ಈ ತಿಂಗಳು ಸಹಕಾರಿ ಬ್ಯಾಂಕ್ ಮಾಹಿತಿ ಆಧರಿಸಿ ರೂ. 9455 ಕೋಟಿ ಸಾಲ ಮನ್ನ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಮುಂದಿನ ತಿಂಗಳಲ್ಲಿ ಮಂಡ್ಯ ಜಿಲ್ಲಾ ವ್ಯಾಪ್ತಿಯ 550 ಕೋಟಿ ಸಹಕಾರಿ ಬ್ಯಾಂಕುಗಳ ಸಾಲ ಮನ್ನಾ ಆಗುತ್ತಿದೆ. ಮುಂದಿನ ಬಜೆಟ್ನಲ್ಲಿ ಖಾಸಗಿ ಬ್ಯಾಂಕುಗಳಿಗೆ ರೈತರ ಸಾಲಮನ್ನಾದ ಮೊದಲ ಕಂತು 25000 ಕೋಟಿಯನ್ನು ಮೀಸಲಿಡಲಿಡಲಾಗಿದೆ ಯಾವ ರೈತರೂ ಸಹ ಆತಂಕಕ್ಕೆ ಒಳಗಾಗಬಾರದು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯ ಜಿಲ್ಲೆಗೆ ವಿಶೇಷ ಪ್ರೀತಿ
ಮಂಡ್ಯ ಜಿಲ್ಲೆಯ ಜನರ ಬಗ್ಗೆ ವಿಶೇಷ ಪ್ರೀತಿಯನ್ನು ವ್ಯಕ್ತಪಡಿಸಿದ ಕುಮಾರಸ್ವಾಮಿ, ಮಂಡ್ಯ ನನ್ನ ಹೃದಯದಲ್ಲಿದೆ. ನಿಮ್ಮ ಪ್ರೀತಿ ಇದ್ದರೆ ಸಾಕು ಏನು ಬೇಕಾದರೂ ಮಾಡುತ್ತೇನೆ. ನೀವು ಗೆಲ್ಲಿಸಿಕೊಟ್ಟ 7 ಸ್ಥಾನಗಳಿಂದಲೇ ನಮಗೆ ಬಲ ಬಂದಿದ್ದು, ನಾನು ಸಿಎಂ ಆಗಿ ಜನರ ಸೇವೆ ಮಾಡಲು ಸಾಧ್ಯವಾಗಿದ್ದು ಎಂದು ಅವರು ಮಂಡ್ಯ ಜನರಿಗೆ ಕೃತಜ್ಞತೆ ಸಲ್ಲಿಸಿದರು.

ಪಾಂಡವಪುರದಲ್ಲಿ ಸಕ್ಕರೆ ಕಾರ್ಖಾನೆ
ಪಾಂಡವಪುರದಲ್ಲಿ ಸಕ್ಕರೆ ಕಾರ್ಖಾನೆ ನಿರ್ಮಿಸುವ ಒತ್ತಡ ಇದೆ. ಅದರಂತೆ ಸರ್ಕಾರ ಸಹ ಯೋಜನೆ ರೂಪಿಸುತ್ತಿದೆ. ಇಲ್ಲಿನ ಶಾಸಕರು ಸಹ ಸಕ್ಕರೆ ಕಾರ್ಖಾನೆಗಾಗಿ ಒತ್ತಾಯಿಸುತ್ತಿದ್ದಾರೆ. ಜೊತೆಗೆ ನೀರಿನ ಅವಶ್ಯಕತೆಗಳನ್ನೂ ಪೂರೈಸಬೇಕಿದೆ ಎಂದು ಅವರು ಹೇಳಿದರು.

ಜಯಕುಮಾರ್ ನನ್ನ ಬಳಿ ಬಂದಿದ್ದರೆ ಸಹಾಯ ಮಾಡ್ತಿದ್ದೆ
ಮಂಡ್ಯದ ಕನ್ನಹಟ್ಟಿ ಗ್ರಾಮದ ರೈತ ಜಯಕುಮಾರ್ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಆ ವ್ಯಕ್ತಿಗೆ ಕ್ಯಾನ್ಸರ್ ಇತ್ತು, ಇನ್ನು ಮೂರು ತಿಂಗಳಲ್ಲಿ ಸಾಯುತ್ತೀಯೆಂದು ವೈದ್ಯರು ಹೇಳಿದ್ದರು, ಆತ ನನ್ನ ಬಳಿ ಬಂದು ಸಹಾಯ ಕೇಳಿದ್ದರೆ ಖಂಡಿತ ಮಾಡುತ್ತಿದ್ದೇ, ಆದರೆ ನಾನು ಇಂದು ಜಿಲ್ಲೆಗೆ ಬರುತ್ತಿದ್ದೇನೆ ನನ್ನ ಕುಟುಂಬಕ್ಕೆ ಸಿಎಂ ಸಹಾಯ ಮಾಡುತ್ತಾರೆ ಎಂಬ ಆಸೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರೈತರು ಹೀಗೆ ಯೋಚನೆ ಮಾಡುವುದು ಬೇಡ. ಸಮಸ್ಯೆ ಇದ್ದರೆ ನನ್ನ ಬಳಿ ಬನ್ನಿ ಎಂದು ಅವರು ಮನವಿ ಮಾಡಿದರು.

ಯಾರ್ಯಾರು ಇದ್ದರು?
ಈ ವೇಳೆ, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು, ಸಂಸದ ಎಲ್.ಆರ್. ಶಿವರಾಮೇಗೌಡ ಗೌಡ ಸೇರಿದಂತೆ ಜಿಲ್ಲೆಯ ಶಾಸಕರು, ಕಾರ್ಯಕರ್ತರು ಭಾಗಿಯಾಗಿದ್ದರು.












Click it and Unblock the Notifications