ರಾಹುಲ್ ಗಾಂಧಿಯ ಸರ್ಜಿಕಲ್ ಸ್ಟ್ರೈಕ್ ಗೆ ಬೆಚ್ಚಿದ ಕರ್ನಾಟಕ ಬಿಜೆಪಿ
ಬೆಂಗಳೂರು, ಜೂನ್ 22: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಇತ್ತೀಚೆಗೆ ಬೆಂಗಳೂರಿಗೆ ಬಂದು ಹೋಗಿದ್ದು ಬಿಜೆಪಿ ಪಾಲಿಗೆ ಮಾರಕವಾಗುವ ಲಕ್ಷಣಗಳು ಕಂಡು ಬಂದಿದೆ.
ಮುಂದಿನ ಚುನಾವಣೆಗೆ ಭರ್ಜರಿ ತಯಾರಿಯಲ್ಲಿರುವ ಬಿಜೆಪಿಗೆ ಮರ್ಮಾಘಾತವಾಗುವಂಥ ಸುದ್ದಿಯನ್ನು ಸಿಎಂ ಸಿದ್ದರಾಮಯ್ಯ ಅವರು ಬುಧವಾರ ನೀಡಿದ್ದಾರೆ. ರೈತರ ಸಾಲಮನ್ನಾ ಎಂಬ ಮಾಸ್ಟರ್ ಸ್ಟ್ರೋಕ್ ಗೆ ಬಿಜೆಪಿ ಬೆಚ್ಚಿದೆ. ಇದು ರಾಹುಲ್ ಗಾಂಧಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಎಂದು ಕಾಂಗ್ರೆಸ್ ನಾಯಕರು ಹೇಳಿಕೊಂಡಿದ್ದಾರೆ.

ರಾಹುಲ್ ಗಾಂಧಿ ಅವರು ನ್ಯಾಷನಲ್ ಹೆರಾಲ್ಡ್ ಗೆ ಮರು ಜೀವ ನೀಡಲು ಮಾತ್ರ ಬಂದಿದ್ದಲ್ಲ, ಬದಲಿಗೆ ನಿಂತ ನೀರಾಗಿದ್ದ ಕಾಂಗ್ರೆಸ್ ತಂತ್ರಗಾರಿಕೆಗೆ ಚೈತನ್ಯ ತುಂಬಿದರು. ಸಿದ್ದರಾಮಯ್ಯ ಅವರ ಜತೆಗಿನ ಮಾತುಕತೆ ವೇಳೆಯಲ್ಲಿ ರೈತ ಸಮುದಾಯಕ್ಕೆ ಹತ್ತಿರವಾಗುವಂಥ ನಿರ್ಧಾರವನ್ನು ಕೈಗೊಳ್ಳುವಂತೆ ರಾಹುಲ್ ಸೂಚಿಸಿದ್ದಾರೆ.
ಇದೇ ಸಮಯಕ್ಕೆ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಮುಖಂಡರುಗಳು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಘೋಷಿಸಿದರು. ಸಿದ್ದರಾಮಯ್ಯ ಅವರು ಇದನ್ನು ಈಗಲೇ ನಿಜವಾಗಿಸಿದ್ದಾರೆ. ಈ ಮೂಲಕ ಬಿಜೆಪಿ ಮುಖಂಡರು ನಾಲಗೆ ಕಚ್ಚಿಕೊಳ್ಳುವಂತಾಗಿದೆ.
ಸಾಲಮನ್ನಾದಿಂದ ಸರ್ಕಾರದ ಬೊಕ್ಕಸಕ್ಕೆ ಎಷ್ಟು ನಷ್ಟವಾಗಲಿದೆ ಎಂಬ ಲೆಕ್ಕಾಚಾರ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಇಬ್ಬರಿಗೂ ಚೆನ್ನಾಗಿ ಗೊತ್ತಿಲ್ಲ. ಇಬ್ಬರು ದಾಖಲೆ ಸಂಖ್ಯೆಯಲ್ಲಿ ರಾಜ್ಯದ ಬಜೆಟ್ ಮಂಡಿಸಿದ್ದಾರೆ. ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿದ ಯಡಿಯೂರಪ್ಪ ಅವರಿಗೂ ರೈತ ಸಮುದಾಯದ ಬಲದ ಅರಿವಿದೆ.
ಆದರೆ, ಸಿದ್ದರಾಮಯಯ್ಯ ಅವರ ಕೈಲಿ ಈಗ ಅಧಿಕಾರವಿದೆ. ಹಾಗಂತ, ರೈತರ ಪರವಾಗಿ ಸಂಪೂರ್ಣವಾಗಿ ಕಾಂಗ್ರೆಸ್ ಸರ್ಕಾರ ನಿಂತಿದೆ ಎನ್ನುವಂತಿಲ್ಲ. ಈಗ ಘೋಷಣೆಯಾಗಿರುವುದು ಕೂಡಾ ಪಾರ್ಶ್ವವಾಗಿ ಸಾಲ ಮನ್ನಾ ಅಷ್ಟೇ. 50 ಸಾವಿರ ರು ತನಕದ ಸಹಕಾರಿ ಬ್ಯಾಂಕುಗಳಲ್ಲಿ ಪಡೆದಿರುವ ಸಾಲ ಮನ್ನಾ ವಾಗುತ್ತಿದೆ. ಆದರೆ, ಚುನಾವಣೆ ಮುಂದಿಟ್ಟುಕೊಂಡು ಇಂಥ ರೈತಸ್ನೇಹಿ, ಜನಸ್ನೇಹಿ ಘೋಷಣೆಗಳನ್ನು ನೀಡುವ ಮೂಲಕ ಬಿಜೆಪಿಗೆ ಹೊಡೆತ ನೀಡಿ ಎಂದು ರಾಹುಲ್ ಕಿವಿಮಾತು ಹೇಳಿದ್ದಾರೆ.












Click it and Unblock the Notifications