ಹವಾಮಾನ ಬದಲಾವಣೆ; ಮಾವು ಬೆಳೆಯುವ ರೈತರಿಗೆ ಸಲಹೆಗಳು
ಬೆಂಗಳೂರು, ಅಕ್ಟೋಬರ್ 19 : ಹವಾಮಾನ ವೈಪರೀತ್ಯದ ಹಿನ್ನಲೆಯಲ್ಲಿ ಮಾವು ಬೆಳೆಗೆ ಅನೇಕ ಕೀಟ/ರೋಗಗಳು ಕಾಣಿಸಿಕೊಳ್ಳುತ್ತಿವೆ. ತೋಟಗಾರಿಕೆ ಇಲಾಖೆ ರೋಗ ನಿರ್ವಹಣಾ ಕ್ರಮಗಳ ಕುರಿತು ರೈತರಿಗೆ ಮಾಹಿತಿ ನೀಡಿದೆ.
ಹಿಂಗಾರು ಹಂಗಾಮಿನಲ್ಲಿ ಮಾವಿನ ಗಿಡಗಳ ನಿರ್ವಹಣೆ ಬಹುಮುಖ್ಯವಾದದ್ದು. ಉತ್ತಮ ನಿರ್ವಹಣಾ ಕ್ರಮಗಳನ್ನು ಕೈಗೊಂಡರೆ ಉತ್ತಮ ಇಳುವರಿಯನ್ನು ಪಡೆಯಬಹುದು. ರೈತರು ಅಕ್ಟೋಬರ್ ತಿಂಗಳಲ್ಲಿ ಮುಖ್ಯವಾಗಿ ಪೋಷಕಾಂಶಗಳ ನಿರ್ವಹಣೆಗೆ ಗಮನ ಕೊಡಬೇಕು.
ಸತತ ಮಳೆಯಿಂದಾಗಿ ಮಾವಿನಲ್ಲಿ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಇದರಿಂದಾಗಿ ಮುಂದೆ ಇಳುವರಿ ಮೇಲೆ ಪರಿಣಾಮ ಉಂಟಾಗುತ್ತದೆ. 5 ವರ್ಷಕ್ಕೂ ಮೇಲ್ಪಟ್ಟ ಗಿಡಗಳಿಗೆ 300-350 ಗ್ರಾಂ. ಸಾರಜನಕ, 100 ಗ್ರಾಂ. ರಂಜಕ ಮತ್ತು 350 ಗ್ರಾಂ. ಪೊಟ್ಯಾಷ್ ಕೊಡುವುದು ಸೂಕ್ತ.

ಲಘು ಪೋಷಕಾಂಶಗಳ ಕೊರತೆ ಕೂಡ ಗಿಡಗಳಲ್ಲಿ ಕಂಡುಬರುವುದರಿಂದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಬೆಂಗಳೂರು ಅವರ ಮಾವು ಸ್ಪೆಷಲ್ 1 ಲೀ. ನೀರಿಗೆ 5 ಗ್ರಾಂ. ಬೆರೆಸಿ ಸಿಂಪಡಿಸಬೇಕು. 20 ಲೀ. ನೀರಿಗೆ 100 ಗ್ರಾಂ. ಮಾವು ಸ್ಪೆಷಲ್ ಒಂದು ಶಾಂಪೂ (5 ಎಂ.ಎಲ್.) ಜೊತೆಗೆ ಒಂದು ದೊಡ್ಡ ಗ್ರಾತದ ಲಿಂಬೆ ಹಣ್ಣು ಬೆರೆಸಿ ಬೆಳಗಿನ 9 ಗಂಟೆ ಒಳಗೆ ಸಿಂಪಡಿಸಬೇಕು. ಇದೇ ಸಿಂಪರಣೆಯನ್ನು 30 ದಿನಗಳ ಅಂತರದಲ್ಲಿ ಕಾಯಿ ದೊಡ್ಡದಾಗುವವರೆಗೂ 3 ರಿಂದ 4 ಬಾರಿ ಮಾಡಬೇಕು.
ಸತತ ಮಳೆ ಹಾಗೂ ಮೋಡ ಕವಿದ ವಾತಾವರಣದಿಂದಾಗಿ ಚಿಬ್ಬುರೋಗ (ಅಂಗಮಾರಿ ರೋಗ) ಮುಂತಾದ ರೋಗಗಳು ಕಾಣಿಸಿಕೊಳ್ಳಬಹುದು. ಆಗ ಕಾರ್ಬೆಂಡೇಜಿಮ್ 1 ಗ್ರಾಂ ಅಥವಾ ಥಯೋಫಿನೈಟ ಮಿಥೈಲ್ 1_ಗ್ರಾಂ 1 ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು.
ಹವಾಮಾನ ವೈಪರೀತ್ಯದಿಂದಾಗಿ ಗಂಟು ಮಸಕ ಎನ್ನುವ ಕೀಟದ ಹಾವಳಿ ಮಾವು ಬೆಳೆಯಲ್ಲಿ ಜಾಸ್ತಿ ಆಗುತ್ತಿದೆ. ಹೆಚ್ಚಿನ ಆರ್ದ್ರತೆ ಇದ್ದಲ್ಲಿ ಇದರ ಹಾವಳಿ ಜಾಸ್ತಿ. ಇದು ಹೂ ಗೊಂಚಲು ಮೇಲೆ ಹಾಗೂ ಮೊಗ್ಗಿನ ಹಂತದಲ್ಲಿ ದಾಳಿ ಮಾಡಿದರೆ ಶೇ.70 ರಷ್ಟು ನಷ್ಟ ಉಂಟಾಗಬಹುದು.
ಹತೋಟಿಗಾಗಿ ಯಾವುದೇ ಅಂತರ್ವಾಹಿನಿ ಕೀಟ ನಾಶಕಗಳ ಬಳಕೆ ಸೂಕ್ತ. ಉದಾಹರಣೆಗೆ, ಡೈಮೇಥೋಯೇಟ 30 ಇಸಿ ಅಥವಾ ಮೋನೋಕ್ರೋಟೋಪಾಸ್ 36 ಎಸ್.ಎಲ್ 1.5 ಮಿ.ಲೀ ಅಥವಾ ಬೇವಿನ ಎಣ್ಣೆ 3 ಮಿ.ಲೀ ಒಂದು ಲೀಟರ ನೀರಿಗೆ ಬೆರೆಸಿ ಸಿಂಪಡಿಸಬಹುದು.
ಮಾವಿನ ತೋಪಿನಲ್ಲಿ ಗಾಳಿ, ಬೆಳಕು ಆಡುವಂತೆ ಗಿಡ ಸವರಬೇಕು. ಕಸದಿಂದ ತೋಟವನ್ನು ಮುಕ್ತಗೊಳಿಸಬೇಕು. ಪ್ರತಿ ಗಿಡಕ್ಕೆ ಎರಡು ಕಿತ್ತಳೆ ಬಣ್ಣದ ಅಂಟು ಕಾರ್ಡು ಅಳವಡಿಸಬೇಕು.












Click it and Unblock the Notifications