ಸಾಲಮನ್ನಾ ಯೋಜನೆಗಾಗಿ ಅಭಿವೃದ್ಧಿ ಬಲಿ ಕೊಡಲ್ಲ: ಎಚ್ಡಿಕೆ ಅಭಯ
ಬೆಂಗಳೂರು, ಸೆ.29: ಸಾಲಮನ್ನಾ ಯೋಜನೆಗಾಗಿ ರಾಜ್ಯದ ಅಭಿವೃದ್ಧಿಯನ್ನು ಬಲಿಕೊಡುವುದಿಲ್ಲ ಎಂದು ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಉದ್ಯೋಗ ಮೇಲೆ ಉದ್ಘಾಟಿಸಿ ಮಾತನಾಡಿದ ಅವರು, ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಯಾವ ಯೋಜನೆಗಳನ್ನು ಕಡಿತಗೊಳಿಸಿಲ್ಲ, ರಾಜ್ಯದ ಅಭಿವೃದ್ಧಿಯೇ ಬೇರೆ, ರೈತರ ಸಾಲಮನ್ನವೇ ಬೇರೆ ಎಂದು ಹೇಳಿದರು.
ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಸರ್ಕಾರದಿಂದ ಪತ್ರ ಬರೆಯಲಾಗಿದೆ. ಸಾಲದ ಒಟ್ಟು ಪ್ರಮಾಣದ ಕುರಿತು ಮಾಹಿತಿ ಕೇಳಿದ್ದೇವೆ, ಸಾಲ ತೀರಿಸದಿದ್ದರೆ ಮನೆ ಜಪ್ತಿಗಳಂತಹ ನೋಟಿಸ್ ನ್ನು ಬ್ಯಾಂಕ್ ಗಳು ನೀಡುವುದಿಲ್ಲ, ಅಂತಹ ನೋಟಿಸ್ ಬಂದರೆ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು, ಸಲ ಮರುಪಾವತಿಗೆ ಒತ್ತಾಯಿಸುವಂತಹ ಮ್ಯಾನೇಜರ್ ಗಳನ್ನು ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಪೆಟ್ರೋಲ್, ಡೀಸೆಲ್ ಬೆಲೆ ಕರ್ನಾಟಕದಲ್ಲಿಯೇ ಕಡಿಮೆ
ದೇಶದಲ್ಲಿಯೇ ಪೆಟ್ರೋಲ್ ಡೀಸೆಲ್ ತೀರಾ ಕಡಿಮೆ ದರದಲ್ಲಿ ಕರ್ನಾಟಕದಲ್ಲಿ ಮಾತ್ರ ಮಾರಾಟವಾಗುತ್ತಿದೆ, ಇಂಧನಗಳ ಮೇಲೆ ಎರಡು ರೂಪಾಯಿ ಕಡಿಮೆ ಮಾಡಿದ್ದೇವೆ, ಸಾಲಮನ್ನಾದ ಹೊರೆ ಇದ್ದರೂ ಪೆಟ್ರೋಲ್ ಸೆಸ್ ಕಡಿಮೆ ಮಾಡಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ವಿಕಲ ಚೇತನರಿಗೆ ಉದ್ಯೋಗದಲ್ಲಿ ಆದ್ಯತೆ
ಅಂಗಾಂಗಗಳು ಸರಿ ಇದ್ದರೂ ಉದ್ಯೋಗ ಸಿಗದ ಈ ಸಮಯದಲ್ಲಿ ಅಂಗವಿಕಲರು ಏನು ಮಾಡಬೇಕು, ಪ್ರತಿಭೆ ಇದ್ದರೂ ಕೆಲಸ ಮಾಡುವುದು ಕಷ್ಟ, ಆದ್ದರಿಂದ ವಿಕಲಚೇತನರಿಗೆ ಉದ್ಯೋಗ ಕಲ್ಪಿಸಲು ಆದ್ಯತೆ ನೀಡಿದ್ದೇವೆ ಎಂದರು.

ಕಾಟಾಚಾರದ ಉದ್ಯೋಗ ಮೇಳ ಅಲ್ಲ
ಉದ್ಯೋಗ ಮೇಳವು ಕಾಟಾಚಾರಕ್ಕೆ ಆಯೋಜನೆ ಮಾಡಿರುವುದಲ್ಲ, ಉದ್ಯೋಗ ಸಿಗಲಿಲ್ಲ ಎಂದರೆ ಮತ್ತೆ ಪ್ರಯತ್ನ ಮಾಡಬೇಕು, ಸಿಕ್ಕೇ ಸಿಗುತ್ತದೆ ಎನ್ನುವ ವಿಶ್ವಾಸ ಇಟ್ಟುಕೊಳ್ಳಬೇಕು, ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಒಂಬತ್ತು ಕ್ಲಸ್ಟರ್ ಗಳನ್ನು ರಚಿಸಲು ನಿರ್ಧಾರ ಮಾಡಲಾಗಿದೆ. ಇದಕ್ಕಾಗಿ ಮಿಷನ್ ಗ್ರೂಪ್ ರಚನೆ ಮಾಡಲಾಗುತ್ತಿದೆ.

ಒಂದೊಂದು ಜಿಲ್ಲೆಯಲ್ಲಿ ಒಂದು ಲಕ್ಷ ಉದ್ಯೋಗ ಕೊಡುವ ಗುರಿ
ಒಂದೊಂದು ಜಿಲ್ಲೆಯಲ್ಲೂ ಒಂದು ಲಕ್ಷ ಉದ್ಯೋಗ ಕೊಡುವ ಗುರಿ ಹೊಂದಿದ್ದೇವೆ, ಅಭಿವೃದ್ಧಿ ದೃಷ್ಟಿಯಿಂದ ಹಲವು ಯೋಜನೆಗಳನ್ನು ಹಾಕಿಕೊಂಡಿದ್ದೇವೆ ಎಂದು ಹೇಳಿದರು.












Click it and Unblock the Notifications