ಹಣ್ಣು, ತರಕಾರಿ ಬೆಳೆದ ರೈತರು ಪರಿಹಾರ ಪಡೆಯುವುದು ಹೇಗೆ?
ಬೆಂಗಳೂರು, ಜೂನ್ 03 : ಲಾಕ್ ಡೌನ್ ಪರಿಣಾಮ ನಷ್ಟ ಅನುಭವಿಸಿದ ಹಣ್ಣು, ತರಕಾರಿ ಬೆಳೆಗಾರರಿಗೆ ಕರ್ನಾಟಕ ಸರ್ಕಾರ ಪರಿಹಾರವನ್ನು ಘೋಷಣೆ ಮಾಡಿದೆ. 16/6/2020ರೊಳಗೆ ಪರಿಹಾರವನ್ನು ಪಡೆಯಲು ಅರ್ಜಿಗಳನ್ನು ಸಲ್ಲಿಸಬೇಕು ಎಂದು ರೈತರಿಗೆ ಸೂಚನೆ ನೀಡಲಾಗಿದೆ.
Recommended Video
ಕೊರೊನಾ ವೈರಸ್ ಸೋಂಕು ಹರಡದಂತೆ ಲಾಕ್ ಡೌನ್ ಘೋಷಣೆ ಮಾಡಿದ ಪರಿಣಾಮ ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಾಗದೇ ರೈತರು ನಷ್ಟ ಅನುಭವಿಸಿದರು. ಇದನ್ನು ಗಮನಿಸಿದ ಸರ್ಕಾರ ನಷ್ಟ ಅನುಭವಿಸಿದ ರೈತರಿಗೆ ಪರಿಹಾರವನ್ನು ಘೋಷಣೆ ಮಾಡಿದೆ.
ಮುಂದಿನ ದಿನಗಳಲ್ಲಿ ಹಣ್ಣು, ತರಕಾರಿ ಬೆಳೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ನಷ್ಟ ಹೊಂದಿದ ರೈತರಿಗೆ ಪರಿಹಾರ ನೀಡಲಾಗುತ್ತದೆ. ರೈತರಿಗೆ ಪ್ರತಿ ಹೆಕ್ಟೇರ್ಗೆ ರೂ. 15,000 ಪರಿಹಾರವನ್ನು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ.
ರೈತರು ತಮ್ಮ ಸಮೀಪದ ತಾಲೂಕು ತೋಟಗಾರಿಕಾ ಕಚೇರಿಯನ್ನು ಸಂಪರ್ಕಿಸಿ ಅಗತ್ಯ ದಾಖಲೆಗಳನ್ನು ನೀಡಿ, ಸ್ವಯಂ ದೃಢೀಕರಣ ಘೋಷಣಾ ಪತ್ರಗಳನ್ನು ದಿನಾಂಕ 16/6/2020ರೊಳಗೆ ನೀಡಬೇಕು ಎಂದು ಸೂಚಿಸಲಾಗಿದೆ.

ಯಾವ-ಯಾವ ಬೆಳೆ
ಅನಾನಸ್, ಪಪ್ಪಾಯ, ಅಂಜೂರ, ಕಲ್ಲಂಗಡಿ, ಬಾಳೆ, ಖರ್ಬೂಜ ಹಣ್ಣಿನ ಬೆಳೆಗಳು. ಬೂದುಗುಂಬಳ, ಎಲೆಕೋಸು, ಹೂಕೋಸು, ಹಸಿಮೆಣಸು, ಟೊಮ್ಯಾಟೊ ತರಕಾರಿಗಳನ್ನು ಬೆಳದ ರೈತರು ಸಮೀಕ್ಷೆಯಲ್ಲಿ ನಮೂದಾಗಿರುವ ರೈತರುಗಳು ಪರಿಹಾರವನ್ನು ಪಡೆಯಬಹುದಾಗಿದೆ.

ತಾಲೂಕು ತೋಟಗಾರಿಕಾ ಕಚೇರಿಗೆ ಭೇಟಿ
ರೈತರು ತಮ್ಮ ಸಮೀಪದ ತಾಲೂಕು ತೋಟಗಾರಿಕಾ ಇಲಾಖೆ ಕಚೇರಿಗೆ ಭೇಟಿ ನೀಡಿ ಪಹಣಿ, ಆಧಾರ್ ಕಾರ್ಡ್, ರೈತರ ಬ್ಯಾಂಕ್ ಖಾತೆ ಪಾಸ್ ಪುಸ್ತಕದ ಝೆರಾಕ್ಸ್ ಪ್ರತಿ, ಸ್ವಯಂ ದೃಢೀಕೃತ ಘೋಷಣಾ ಪತ್ರಗಳನ್ನು ದಿನಾಂಕ 16/6/2020ರೊಳಗೆ ನೀಡಬೇಕು. ಒಬ್ಬ ಫಲಾನುಭವಿ ಒಂದು ಹೆಕ್ಟೇರ್ವರೆಗೂ ಪರಿಹಾರ ಧನ ಪಡೆಯಲು ಅವಕಾಶವಿದೆ.

ನಾಲಫಲಕದಲ್ಲಿ ಪ್ರದರ್ಶನ
ಹೋಬಳಿವಾರು ಹಾಗೂ ಗ್ರಾಮವಾರು ಬೆಳೆ ಸಮೀಕ್ಷೆಯಲ್ಲಿನ ಹಣ್ಣು ಮತ್ತು ತರಕಾರಿ ಬೆಳೆಗಾರರ ದೃಢೀಕರಿಸಿದ ಪಟ್ಟಿಯನ್ನು ಗ್ರಾಮ ಪಂಚಾಯಿತಿ, ರೈತ ಸಂಪರ್ಕ ಕೇಂದ್ರ ಹಾಗೂ ತಾಲೂಕು ತೋಟಗಾರಿಕಾ ಇಲಾಖೆ ಕಚೇರಿಯ ನಾಮಫಲಕದಲ್ಲಿ ಪ್ರದರ್ಶನ ಮಾಡಲಾಗುತ್ತದೆ. ಈ ಪಟ್ಟಿಗಳಲ್ಲಿ ವ್ಯತ್ಯಾಸಗಳಿದ್ದು, ರೈತರ ಆಕ್ಷೇಪಣೆಗಳು ಇದ್ದರೆ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿಗೆ ಸಲ್ಲಿಕೆ ಮಾಡಬಹುದಾಗಿದೆ.

ಬಾಳೆ ಬೆಳೆಯ ಮಾಹಿತಿ
ಬಾಳೆ ಬೆಳೆಗೆ ಸಂಬಂಧಿಸಿದಂತೆ ಮಾರ್ಚ್ 2ನೇ ವಾರದ ನಂತರದ ಕಟಾವಿಗೆ ಬಂದಿರುವ ಬೆಳೆಗೆ ಮಾತ್ರ ಪರಿಹಾರ ನೀಡಲಾಗುತ್ತದೆ. ಈ ರೀತಿ ಬೆಳೆಯನ್ನು ಪರಿಶೀಲಿಸಲು ಹೋಬಳಿ ಹಾಗೂ ತಾಲೂಕು ಮಟ್ಟದಲ್ಲಿ ಸಮಿತಿಗಳಿದ್ದು, ಸಮಿತಿಗಳು ಪರಿಶೀಲಿಸಿದ ನಂತರ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಸಮಿತಿಯು ಅಂತಿಮವಾಗಿ ತೀರ್ಮಾನಿಸಿ ಪರಿಹಾರ ಧನ ವಿತರಣೆ ಮಾಡಲಾಗುತ್ತದೆ.












Click it and Unblock the Notifications