ಮಾತುಕತೆ ನಾಟಕ ಬಿಡಿ; ಸಮಸ್ಯೆಗೆ ಪರಿಹಾರ ಕೊಡಿ; ಕೇಂದ್ರಕ್ಕೆ ಕಾಂಗ್ರೆಸ್ ತಾಕೀತು
ನವದೆಹಲಿ, ಜನವರಿ 09: ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ದೆಹಲಿಯಲ್ಲಿ ಕೈಗೊಂಡಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿರುವ ಕಾಂಗ್ರೆಸ್, ಜನವರಿ 15ರಂದು ರಾಜ್ಯಪಾಲರ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ.
"ಕೇಂದ್ರ ಜನರೆಡೆಗಿನ ತನ್ನ ಕರ್ತವ್ಯವನ್ನು ಏಕೆ ನಿಭಾಯಿಸುತ್ತಿಲ್ಲ? ಕೆಲವು ಬಂಡವಾಳಶಾಹಿಗಳಿಗಾಗಿ ಸರ್ಕಾರವನ್ನೇ ಮಾರಿಕೊಳ್ಳಲಾಗಿದೆ. ಹೀಗಾಗಿ ರೈತರಿಗೆ ಬೆಂಬಲ ನೀಡುತ್ತಾ, ಜ.15 ಅನ್ನು ಕಾಂಗ್ರೆಸ್ "ಕಿಸಾನ್ ಅಧಿಕಾರ ದಿವಸ" ಎಂದು ಆಚರಿಸಲು ತೀರ್ಮಾನಿಸಿದೆ. ಅದೇ ದಿನದಂದು ರಾಜ್ಯಪಾಲರ ಕಚೇರಿ ಮುಂದೆ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಿದ್ದೇವೆ" ಎಂದು ಕಾಂಗ್ರೆಸ್ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದ್ದಾರೆ.
ಮುರಿದುಬಿತ್ತು ಎಂಟನೇ ಸುತ್ತಿನ ಮಾತುಕತೆ; ಕಾಯ್ದೆ ರದ್ದತಿಗೆ ಸುತಾರಾಂ ಒಪ್ಪದ ಕೇಂದ್ರ
ಜನವರಿ 8ರಂದು ಕೇಂದ್ರ ಸರ್ಕಾರ ಹಾಗೂ ಪ್ರತಿಭಟನಾನಿರತ ರೈತರ ನಡುವೆ ಮಾತುಕತೆ ನಡೆದಿದ್ದು, ಈ ಮಾತುಕತೆಯಲ್ಲೂ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಕಾಯ್ದೆ ಹಿಂಪಡೆಯುವ ಬದಲು ಬೇರೆ ಆಯ್ಕೆ ತಿಳಿಸಿ ಎಂದು ರೈತರಿಗೆ ಹೇಳಿ ಜನವರಿ 15ಕ್ಕೆ ಮಾತುಕತೆ ಮುಂದೂಡಿದೆ.
"ಈ ಕರಾಳ ಕಾಯ್ದೆಗಳನ್ನು ಹಿಂಪಡೆಯುವ ಬದಲು ಸರ್ಕಾರ ಮಾತುಕತೆಯ ನಾಟಕವಾಡುತ್ತಿದೆ. ರೈತರು ಕಳೆದ 45 ದಿನಗಳಿಂದಲೂ ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದುವರೆಗೂ 60 ರೈತರು ಸಾವನ್ನಪ್ಪಿದ್ದಾರೆ. ಆದರೆ ಮೋದಿ ಈವರೆಗೂ ಅವರ ಬಗ್ಗೆ ಒಂದೂ ಮಾತನಾಡಿಲ್ಲ" ಎಂದು ದೂರಿದರು. ರೈತರ ಪರವಾಗಿ ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿಯೂ "ಸ್ಪೀಕ್ ಅಪ್ ಫಾರ್ ಫಾರ್ಮರ್" ಅಭಿಯಾನ ಆರಂಭಿಸಲಿದೆ" ಎಂದು ತಿಳಿಸಿದರು.
ಕೇಂದ್ರ ಪರಿಚಯಿಸಿರುವ ಕೃಷಿ ಮಾರುಕಟ್ಟೆ ಕಾಯ್ದೆ, ಬೆಲೆ ಭರವಸೆಗಳ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ, ಅಗತ್ಯ ಸರಕು (ತಿದ್ದುಪಡಿ) ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ನವೆಂಬರ್ 26ರಿಂದಲೂ ದೆಹಲಿ ಗಡಿಗಳಲ್ಲಿ ಸುಮಾರು 40 ರೈತ ಸಂಘಟನೆಯ ರೈತ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದುವರೆಗೂ ಸರ್ಕಾರ ಹಾಗೂ ರೈತರ ನಡುವೆ ಎಂಟು ಮಾತುಕತೆಗಳು ನಡೆದಿವೆ.