ಖರೀದಿ ಕೇಂದ್ರ ತೆರೆಯದ ಸರ್ಕಾರ: ಧಾರವಾಡ ಜಿಲ್ಲೆಯ ಹತ್ತಿ ಬೆಳೆಗಾರರು ಕಂಗಾಲು
ಧಾರವಾಡ ಜಿಲ್ಲೆಯಲ್ಲಿ ಹತ್ತಿ ಖರೀದಿ ಕೇಂದ್ರ ತೆರೆಯಲು ಸರ್ಕಾರ ಮೀನಾಮೇಷ ತೋರಿಸುತ್ತಿರುವುದೇಕೆ? ಇಲ್ಲಿ ತಿಳಿಯಿರಿ
ಧಾರವಾಡ, ಜನವರಿ, 25: ಕಳೆದ ನಾಲ್ಕು ವರ್ಷಗಳಿಂದ ಜಿಲ್ಲೆಯ ಅನ್ನದಾತ ನಿರಂತರ ಅತಿವೃಷ್ಟಿಯ ಹೊಡೆತಕ್ಕೆ ನಲುಗಿ ಹೋಗಿದ್ದಾನೆ. ಇದೀಗ ಕಷ್ಟಪಟ್ಟು ಹತ್ತಿ ಬೆಳೆದ ರೈತರು ಮಾರಾಟ ಮಾಡಲು ಹೆಣಗಾಡುತ್ತಿದ್ದಾರೆ. ಸರ್ಕಾರ ಮಾತ್ರ ಖರೀದಿ ಕೇಂದ್ರವನ್ನು ತೆರೆಯದೇ ರೈತಾಪಿ ವರ್ಗದವರ ಜೊತೆ ಚೆಲ್ಲಾಟ ಆಡುತ್ತಿದೆ. ಇದರಿಂದಾಗಿ ಅನ್ನದಾತ ದಿಕ್ಕುದೋಚದಂತಾಗಿ ಹತ್ತಿಯನ್ನು ಮಾರಾಟ ಮಾಡದೆ ಮನೆಯಲ್ಲಿಯೇ ಶೇಖರಣೆ ಮಾಡಿಟ್ಟುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ನಿರಂತರ ಮಳೆಗೆ ಕಂಗಾಲಾಗಿದ್ದ ರೈತರು
ಈಗಾಗಲೇ ಉತ್ತರದಲ್ಲಿ ಸುರಿದ ನಿರಂತರ ಮಳೆಯಿಂದ ಅನ್ನದಾತ ಕಂಗೆಟ್ಟಿದ್ದಾನೆ. ಅಳಿದುಳಿದ ಹತ್ತಿ ಬೆಳೆಯನ್ನು ಉಳಿಸಿಕೊಂಡಿದ್ದ ರೈತರು ಇದೀಗ ಮತ್ತೊಂದು ಸಂಕಷ್ಟ ಎದುರಿಸುವಂತಾಗಿದೆ. ಉತ್ತರ ಕರ್ನಾಟಕದಲ್ಲಿ ಅತಿಹೆಚ್ಚು ಹತ್ತಿಯನ್ನು ಬೆಳೆಯಲಾಗುತ್ತದೆ. ಇದೀಗ ಹತ್ತಿ ಬೆಳೆಯನ್ನು ಮಾರಾಟ ಮಾಡಲಾಗದೆ ರೈತರು ಸಂಕಷ್ಟ ಎದುರಿಸುವಂತಾಗಿದೆ. ಸರ್ಕಾರ ಹತ್ತಿ ಖರೀದಿ ಕೇಂದ್ರ ತೆರೆಯದೇ ರೈತರ ಜೊತೆ ಚೆಲ್ಲಾಟವಾಡುತ್ತಿದೆ. ಪ್ರತಿ ವರ್ಷವೂ ಭಾರತೀಯ ಹತ್ತಿ ನಿಗಮದಿಂದ ಹತ್ತಿಯನ್ನ ಸರ್ಕಾರ ಖರೀದಿ ಮಾಡುತ್ತಾ ಇತ್ತು. ಅದರಲ್ಲೂ ಪ್ರತಿ ವರ್ಷವೂ ನವೆಂಬರ್ ಕೊನೆಯ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಕೇಂದ್ರ ಸರ್ಕಾರ ಹತ್ತಿ ಖರೀದಿ ಮಾಡಲು ಆಯಾ ಜಿಲ್ಲಾಧಿಕಾರಿಗಳಿಗೆ ಆದೇಶ ಮಾಡುತ್ತಿತ್ತು. ಆದರೆ ಈ ವರ್ಷ ಜನವರಿ ಮುಗಿಯುತ್ತಾ ಬಂದರೂ ಖರೀದಿ ಕೇಂದ್ರ ತೆರೆಯದೆ ಕೇಂದ್ರ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಹೀಗಾಗಿ ರೈತ ಕಷ್ಟಪಟ್ಟ ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೆ, ದಲ್ಲಾಳಿಗಳಿಗೆ ಮಾರಾಟ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸಂಕಷ್ಟಕ್ಕೊಳಗಾದ ಹತ್ತಿ ಬೆಳೆಗಾರರು
ಧಾರವಾಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಬೆಳೆದಿರುವ ಹತ್ತಿ ಮಾರಾಟ ಮಾಡಲು ರೈತರು ಹೆಣಗಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಹತ್ತಿಯನ್ನು ಬೆಂಬಲ ಬೆಲೆಗಿಂತಲೂ ಕಡಿಮೆ ದರದಲ್ಲಿ ಖರೀದಿಸಲಾಗುತ್ತಿದೆ. ಆದರೆ, ಬೆಂಬಲ ಬೆಲೆಯಲ್ಲಿ ಖರೀದಿಗೆ ಅವಕಾಶಗಳಿವೆ. ಹಾಗಾಗಿ ಹತ್ತಿ ನಿಗಮ ಕೂಡಲೇ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಈ ಭಾಗದ ಹತ್ತಿ ಬೆಳೆಗಾರರು ಮನವಿ ಮಾಡುತ್ತಿದ್ದಾರೆ. ಹತ್ತಿ ಮಾರಾಟ ಮಾಡಲು ಇಚ್ಚಿಸುವ ರೈತರು ಪಹಣಿ, ಆಧಾರ ಕಾರ್ಡ್ ನಕಲು ಪ್ರತಿ, ಬ್ಯಾಂಕ್ ಖಾತೆ ನಕಲು ಪ್ರತಿ ಹಾಗೂ ಬೆಳೆ ದೃಢೀಕರಣ ಪತ್ರ ಪ್ರತಿಗಳನ್ನು ಖರೀದಿ ಕೇಂದ್ರಗಳಿಗೆ ತಂದು ತಮ್ಮ ಹೆಸರು ನೋಂದಾಯಿಸಿಕೊಂಡು ಹತ್ತಿ ಮಾರಾಟ ಮಾಡುತ್ತಾರೆ. ನಿಗಮವು ನೇರವಾಗಿ ರೈತರಿಂದ ಹತ್ತಿ ಖರೀದಿ ಮಾಡಿ ಅದರ ಮೊತ್ತವನ್ನು ನೇರವಾಗಿ ರೈತರ ಖಾತೆಗೆ ವರ್ಗಾವಣೆ ಮಾಡುತ್ತಿತ್ತು. ಆದರೆ ಈ ವರ್ಷ ಮಾತ್ರ ಖರೀದಿ ಕೇಂದ್ರ ತೆರೆಯುವ ಗೋಜಿಗೆ ಕೇಂದ್ರ ಸರ್ಕಾರ ಮುಂದಾಗಿಲ್ಲ. ಹೀಗಾಗಿ ಹತ್ತಿಯನ್ನು ಎಲ್ಲಿ ಮಾರಾಟ ಮಾಡಬೇಕೆನ್ನುವ ಚಿಂತೆ ರೈತನದ್ದಾಗಿದೆ.

ಸರ್ಕಾರಗಳ ನಿರ್ಲಕ್ಷದಿಂದ ಹತ್ತಿ ಮಾರಾಟ ಮಾಡಲು ರೈತರು ಸಂಕಷ್ಟ ಪಡಬೇಕಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಹತ್ತಿ ಖರೀದಿ ಕೇಂದ್ರವನ್ನು ಓಪನ್ ಮಾಡಲು ಮನಸ್ಸು ಮಾಡಬೇಕಿದೆ. ಆದಷ್ಟು ಬೇಗ ಬೆಂಬಲ ಬೆಲೆ ಅಡಿಯಲ್ಲಿ ಹತ್ತಿ ಖರೀದಿ ಮಾಡಿ ಅನ್ನದಾತನ ಕಣ್ಣೀರು ಒರೆಸಬೇಕಿದೆ.












Click it and Unblock the Notifications