ಹೈನು ರೈತರ ಹಿತ ಕಾಯಲು ಅಗತ್ಯ ಕ್ರಮ; ಡಾ. ಕೆ. ಸುಧಾಕರ್
ಹೈನು ರೈತರ ಹಿತ ಕಾಯಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಭರವಸೆ ನೀಡಿದರು.
ಬೆಂಗಳೂರು, ಫೆಬ್ರವರಿ 06; "ತೋಟಗಾರಿಕೆ, ಹೈನುಗಾರಿಕೆ, ರೇಷ್ಮೆಯಿಂದ ರೈತರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಇದಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ" ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ದೇವನಹಳ್ಳಿಯಲ್ಲಿ ನಡೆದ ಬಹು ಹಾಲು ಒಕ್ಕೂಟಗಳ ವತಿಯಿಂದ ಹಾಲು ಉತ್ಪಾದಕ ಸಂಘಗಳ ಸದಸ್ಯರು ಮತ್ತು ಸಿಬ್ಬಂದಿಯ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದರು.
"ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ ರಾಜ್ಯದ ಹೈನು ರೈತರ ಹಿತ ಕಾಯಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಾಗುವುದು. ಹೈನು ರೈತರಿಗೆ ಪ್ರೋತ್ಸಾಹಧನ ನೀಡುತ್ತಿರುವುದು ಇಡೀ ದೇಶದಲ್ಲಿಯೇ ರಾಜ್ಯ ಮಾತ್ರ" ಎಂದು ಡಾ. ಕೆ. ಸುಧಾಕರ್ ತಿಳಿಸಿದರು.
"ಮುಖ್ಯಮಂತ್ರಿಯಾಗಿದ್ದ ಬಿ. ಎಸ್. ಯಡಿಯೂರಪ್ಪ ಅವರು ಹೈನು ರೈತರಿಗೆ ಪ್ರೋತ್ಸಾಹ ಧನ ನೀಡುವುದನ್ನು ಆರಂಭಿಸಿದರು. ನಂತರದ ಸರ್ಕಾರಗಳು ಹೆಚ್ಚಿಸಿದವು. ಈಗ ಸರ್ಕಾರ ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ನೀಡುತ್ತಿದೆ" ಎಂದು ಸಚಿವರು ವಿವರಣೆ ನೀಡಿದರು.

ರೈತರ ಶ್ರಮ ಅಭಿನಂದನೀಯ
ಸಚಿವ ಡಾ. ಕೆ. ಸುಧಾಕರ್ ಮಾತನಾಡಿ, "ಹೈನುಗಾರಿಕೆಯಿಂದ ಈ ಭಾಗದಲ್ಲಿ ರೈತರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಹಾಲು ಶೇಖರಣೆ ಮಾಡುತ್ತಿರುವುದು ಬಮೂಲ್ ಸಂಸ್ಥೆಯಾಗಿದ್ದು, ಈ ಖ್ಯಾತಿಗೆ ಪಾತ್ರರಾದ ಎಲ್ಲಾ ಹೈನು ರೈತರ ಶ್ರಮ ಅಭಿನಂದನೀಯ" ಎಂದರು.
"ದೇವನಹಳ್ಳಿ ತಾಲೂಕಿನಲ್ಲಿ ದಿನಕ್ಕೆ 1.4 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, 163 ಕಾರ್ಯನಿರತ ಹಾಲು ಉತ್ಪಾದಕ ಸಂಘಳಿವೆ. ಈ ಎಲ್ಲಾ ಸಂಘಗಳಿಂದ ಒಟ್ಟು 13,320 ರೈತರು ಹೈನುಗಾರಿಕೆ ಎಂಬ ಉಪ ಕಸುಬಿನಲ್ಲಿ ತೊಡಗಿದ್ದಾರೆ" ಎಂದು ಸಚಿವರು ವಿವರಿಸಿದರು.

ಹಾಲಿನ ಉತ್ಪಾದನೆ ಕಡಿಮೆಯಾಗಿದೆ
"ಹಾಲಿನ ಬೆಲೆ ಇತರೆ ರಾಜ್ಯಗಳಿಗೆ ಹೋಲಿಸಿದರೆ ಮಾರಾಟ ಮಾಡುತ್ತಿರುವುದು ಕಡಿಮೆ ಬೆಲೆಗೆ. ಕೋವಿಡ್ ಸಂದರ್ಭದಲ್ಲಿ ಹಾಲಿನ ಬೆಲೆ ಹೆಚ್ಚಿಸಲು ಸಾಧ್ಯವಾಗಲಿಲ್ಲ. ನಾಲ್ಕು ವರ್ಷದಿಂದ ಹಾಲಿನ ಬೆಲೆ ಹೆಚ್ಚಿಸದೇ ಒಂದೇ ಸಲ 5 ರೂಪಾಯಿ ಹೆಚ್ಚಿಸಿದರೆ ಹೊರೆಯಾಗಲಿದೆ ಎಂಬ ಕಾರಣಕ್ಕೆ ಮುಖ್ಯಮಂತ್ರಿಗಳು ಕಡಿಮೆ ಬೆಲೆ ಏರಿಕೆ ಮಾಡಿದ್ದಾರೆ. ಖರೀದಿ ಬೆಲೆಯಿಂದಾಗಿ ರೈತರಿಗೆ ಅದಾಯ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಹಾಲಿನ ಉತ್ಪಾದನೆ ಕಡಿಮೆಯಾಗಿದೆ" ಎಂದು ಸಚಿವರು ಹೇಳಿದರು.
"ಹೈನುಗಾರಿಕೆ ಸುಲಭದ ಮಾತಲ್ಲ, ಆ ಕಷ್ಟಕ್ಕೆ ಸಿಗಬೇಕಾದ ಲಾಭ ದೊರೆಯದ ಕಾರಣ ಹೈನು ರೈತರು ವೃತ್ತಿಯಿಂದ ದೂರವಾಗುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ, ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಹಾಲು ಒಕ್ಕೂಟ ಈಗಾಗಲೇ ಮಾಡಲಾಗಿದೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ, ರೈತರ ಪರ ನಿಲುವು ತೆಗೆದುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ" ಸಚಿವರು ತಿಳಿಸಿದರು.

ಇಸ್ರೇಲ್ ಮಾದರಿ ಸ್ಪೂರ್ತಿಯಾಗಲಿ
"ಭೂಮಿಗೆ ಮತ್ತು ಕೃಷಿಗೆ ಇರುವ ಶಕ್ತಿ ಮುಂದಿನ ದಿನಗಳಲ್ಲಿ ಕಾಣುತ್ತೇವೆ, ಸ್ವಾತಂತ್ರೃದ ಆರಂಭದಲ್ಲಿ ಆಹಾರ ಪದಾರ್ಥ ಆಮದು ಮಾಡಿಕೊಳ್ಳುವ ಸ್ಥಿತಿ ಇತ್ತು. ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ, ದೇಶದಲ್ಲಿಯೇ ಹೆಚ್ಚಿನ ಆಹಾರ ಧಾನ್ಯ ಉತ್ಪಾದಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮತ್ತು ರಾಜ್ಯ ಸರ್ಕಾರ ಸೇರಿ ರೈತರಿಗೆ ಪ್ರತಿ ವರ್ಷ 10 ಸಾವಿರ ನೀಡುತ್ತಿದ್ದಾರೆ" ಎಂದು ಸುಧಾಕರ್ ಹೇಳಿದರು.
"ಶಿಕ್ಷಣದಿಂದ ಎಲ್ಲವೂ ಸಾಧ್ಯ, ಹಾಗಾಗಿ ರೈತರ ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಕೃಷಿಯಲ್ಲಿ ಆಧುನಿಕ ಪದ್ಧತಿಗಳು ಬಂದಿವೆ, ತೋಟಗಾರಿಕಾ ಬೆಳೆಗಳಲ್ಲಿ ಆಧುನಿಕ ಪದ್ಧತಿ ಅನುಸರಿಸುವ ಶಿಕ್ಷಣ ಪಡೆಯಬೇಕು, ಇಸ್ರೇಲ್ ಚಿಕ್ಕ ದೇಶವಾಗಿದ್ದರೂ, ಕಡಿಮೆ ಪ್ರಮಾಣದ ಮಳೆಯಾಗುತ್ತಿದ್ದರೂ ಅಲ್ಲಿ ಕೃಷಿ ಮತ್ತು ತೋಟಗಾರಿಕೆ ಇಡೀ ವಿಶ್ವಕ್ಕೇ ಮಾದರಿಯಾಗಿದೆ" ಎಂದರು.

ವಿದ್ಯಾನಿಧಿ ಯೋಜನೆ
"ಮುಖ್ಯಮಂತ್ರಿ ಬಸವರಾಜ ಬೊಮ್ಯಾಯಿ ರೈತ ವಿದ್ಯಾನಿಧಿ ಯೋಜನೆ ಜಾರಿಗೆ ತಂದು ರೈತರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ ನೀಡುತ್ತಿದ್ದಾರೆ. ರೈತ ವಿದ್ಯಾನಿಧಿ ಯೋಜನೆಯಡಿ ರಾಜ್ಯದ ಒಟ್ಟು 10.5 ಲಕ್ಷ ವಿದ್ಯಾರ್ಥಿಗಳು ಫಲಾನುಭವಿಗಳಾಗಿದ್ದಾರೆ. ರೈತರಿಗೆ ನೀಡಬೇಕಾದ ಎಲ್ಲ ಕಾರ್ಯಕ್ರಮ ಸರ್ಕಾರ ನೀಡುತ್ತಿದೆ. ಹೈನುಗಾರಿಕೆಯಲ್ಲಿ ತೊಡಗಿರುವ ರೈತರಿಗೆ ಲಾಭ ತಂದುಕೊಡುವ ಕ್ರಮಗಳತ್ತ ಸರ್ಕಾರ ನಿರಂತರವಾಗಿ ಗಮನ ಹರಿಸುತ್ತಿದೆ" ಎಂದು ಸಚಿವ ಸುಧಾಕರ್ ಹೇಳಿದರು.
"ರೈತರ ಮಕ್ಕಳು ಆತ್ಮವಿಶ್ವಾಸ ಬೆಳೆಸಿಕೊಳ್ಳಿ, ವಿಶೇಷ ಪ್ರತಿಭೆಯಿಂದ ಬೆಳೆಯಬೇಕು, ಕೀಳರಿಮೆ ಬೆಳೆಸಿಕೊಳ್ಳದೇ ಮುಂದುವರಿಯಬೇಕು. ಹಳ್ಳಿಯ ರೈತರ ಮಕ್ಕಳಿಗೆ ಆದರ್ಶ ಸರ್. ಎಂ. ವಿಶ್ವೇಶ್ವರಯ್ಯ. ಅವರು ಬಡತನದಲ್ಲಿ ಜನಿಸಿ, ದಾರಿ ದೀಪದ ಬೆಳಕಿನಲ್ಲಿ ಓದಿ, ವಿಶ್ವ ವಿಖ್ಯಾತರಾಗಿದ್ದಾರೆ. ಅವರು ಭಾರತ ರತ್ನ ಗಳಿಸಿ, ಮೈಸೂರು, ಮಂಡ್ಯ ಜಿಲ್ಲೆಗಳ ಅಭ್ಯುದಯಕ್ಕೆ ಕಾರಣರಾಗಿದ್ದಾರೆ" ಎಂದು ಬಣ್ಣಿಸಿದರು.












Click it and Unblock the Notifications