ಶಿವಮೊಗ್ಗದಲ್ಲಿ ಕೃಷಿ ವಿವಿ ಖಾಸಗೀಕರಣ ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಶಿವಮೊಗ್ಗ, ಜೂನ್.22: ಕಳೆದ ಏಳು ದಿನಗಳಿಂದ ರಾಜ್ಯದಲ್ಲಿ ಕೃಷಿ ವಿವಿ ಖಾಸಗೀಕರಣ ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಇಂದು ಸರ್ಕಾರಿ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ವೇಳೆ ಮಾತನಾಡಿದ ಕೃಷಿ ವಿದ್ಯಾರ್ಥಿ ಗಜಾನನ, ರಾಜ್ಯದಲ್ಲಿ ಖಾಸಗಿ ಕೃಷಿ ವಿವಿ ಪ್ರಾರಂಭವಾದರೆ ಪ್ರಾಮಾಣಿಕವಾಗಿ ಓದುವ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ನಾವು ಕಷ್ಟಪಟ್ಟು ಓದಿ ಸಿಇಟಿ ಮೂಲಕ ಆಯ್ಕೆಯಾಗಿ ಬರುತ್ತೇವೆ. ಆದರೆ ಹಣವಿರುವ ವಿದ್ಯಾರ್ಥಿಗಳು ಖಾಸಗಿ ವಿವಿಯಿಂದ ಲಕ್ಷಾಂತರ ಹಣ ಕೊಟ್ಟು ಪದವಿ ಪಡೆಯುತ್ತಾರೆ.
ಖಾಸಗಿ ಕೃಷಿ ವಿವಿಗೆ ಯಾವುದೇ ಮಾನದಂಡವಿಲ್ಲದೆ ಸರ್ಕಾರ ಅನುಮತಿ ನೀಡಿದ್ದು, ಇದರಿಂದ ಸರಿಯಾದ ವಿದ್ಯಾಭ್ಯಾಸ ದೊರೆಯದೇ, ಹಣದಿಂದ ಖಾಸಗಿ ವಿದ್ಯಾರ್ಥಿಗಳು ಪದವಿ ಪಡೆಯುವುದರಿಂದ ನಾಡಿನ ರೈತರಿಗೂ ಸಮಸ್ಯೆಯಾಗುವುದು ಖಂಡಿತ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದ ಸರ್ಕಾರಿ ವಿವಿಗಳಲ್ಲಿ ವರ್ಷಕ್ಕೆ 60-80 ವಿದ್ಯಾರ್ಥಿಗಳು ಒಂದು ವಿವಿಯಲ್ಲಿ ಪ್ರವೇಶವನ್ನು ಪಡೆಯುತ್ತಾರೆ. ಆದರೆ ಖಾಸಗಿ ವಿವಿಯಲ್ಲಿ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗುತ್ತಾರೆ. ಅಲ್ಲಿ ಕನಿಷ್ಠ ಅಂಕ ಪಡೆದ ವಿದ್ಯಾರ್ಥಿಗಳೇ ಹೆಚ್ಚಿರುತ್ತಾರೆ.
ಆದ್ದರಿಂದ ಖಾಸಗಿ ವಿವಿಯನ್ನು ರದ್ದು ಮಾಡಿ. ರಾಜ್ಯ ಸರ್ಕಾರ ಈ ಕೂಡಲೇ ಗಮನ ಹರಿಸಿ ಖಾಸಗಿ ವಿವಿಯನ್ನು ರದ್ದುಗೊಳಿಸಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.












Click it and Unblock the Notifications