ಕೃಷಿ ಮೇಳದಲ್ಲಿ ಮುದ್ದೆ, ಕಾಳು ಸಾರಿಗೆ ಮುಗಿಬಿದ್ದ ಜನ
ಬೆಂಗಳೂರು, ನವೆಂಬರ್ 16 : ಇಂದು (ನವೆಂಬರ್ 16)ರಂದು ಉದ್ಘಾಟನೆಗೊಂಡ ಕೃಷಿ ಮೇಳದಲ್ಲಿ ಕೃಷಿ ಬಗೆಗಿನ ಮಾಹಿತಿ, ಕೃಷಿ ಚಟುವಟಿಕೆಗಳ ಸಂಬಂಧಿತ ವಿಷಯಗಳಿಗೆ ಮೊದಲ ಆದ್ಯತೆ ನೀಡಲಾಗಿದೆ ಜೊತೆಗೆ ಇದರಷ್ಟೇ ಆದ್ಯತೆಯನ್ನು ಆಹಾರಕ್ಕೂ ನೀಡಲಾಗಿದೆ.
In Pics: ಜಿಕೆವಿಕೆಯಲ್ಲಿ ಕೃಷಿ ಮೇಳದಲ್ಲಿ ಹಳ್ಳಿ ಸೊಗಡು, ಸೊಬಗು
ಹೌದು ಆಹಾರಕ್ಕೂ ಆದ್ಯತೆ ನೀಡಿರುವ ಆಯೋಜಕರು ಊಟದ ವ್ಯವಸ್ಥೆ ಅಚ್ಚುಕಟ್ಟಾಗಿರುವಂತೆ ನೋಡಿಕೊಂಡಿದ್ದಾರೆ. ಉಚಿತ ಆಹಾರ ವಿತರಣೆ ಇಲ್ಲವಾದರೂ ಕಡಿಮೆ ದರದಲ್ಲಿ ಹೊಟ್ಟೆ ತುಂಬುವ ಶುಚಿ, ರುಚಿಯಾದ ಮತ್ತು ಕರ್ನಾಟಕದ ವಿವಿಧ ಜಿಲ್ಲೆಗಳ ವೈವಿದ್ಯಮಯ ಊಟ ಬಡಿಸುವವರಿಗಷ್ಟೆ ಕೃಷಿ ಮೇಳದಲ್ಲಿ ಮಳಿಗೆ ಹಾಕಲು ಸ್ಥಳಾವಕಾಶ ನೀಡಲಾಗಿದೆ.
ಸಾಲು ಸಾಲು ಕೃಷಿ ವಸ್ತು ಪ್ರದರ್ಶನ ಮಳಿಗೆಗಳ ಪಕ್ಕದಲ್ಲಿ ಆಹಾರದ ಮಳಿಗೆಗಳಿಗೆ ವಿಶಾಲವಾದ ಜಾಗ ನೀಡಲಾಗಿದೆ. ಜೊತೆಗೆ ಮಧ್ಯದ ಖಾಲಿ ಜಾಗದಲ್ಲಿ ಪೆಂಡಾಲ್ ಹಾಕಿ ಊಟಮಾಡುವವರಿಗೆ ನೆರಳು ಕಲ್ಪಿಸಿಕೊಡಲಾಗಿದೆ.
ಸಸ್ಯಹಾರಿ, ಮಾಂಸಾಹಾರಿ ಎರಡಕ್ಕೂ ಸಮಾನ ಆದ್ಯತೆ ನೀಡಲಾಗಿದ್ದು, ವಿವಿಧ ಜಿಲ್ಲೆಗಳ ಆಹಾರ ತಯಾರಿಸುವವರಿಗೆ ಮಳಿಗೆ ಹಾಕಲು ಅನುಮತಿ ನೀಡಿ ಊಟದಲ್ಲಿ ವೈವಿದ್ಯತೆ ಇರುವಂತೆ ನೋಡಿಕೊಂಡಿದ್ದಾರೆ ಆಯೋಜಕರು.
ಆದರೆ ಎಲ್ಲಕ್ಕಿಂತಲೂ ಹೆಚ್ಚು ಜನರನ್ನು ಸೆಳೆಯುತ್ತಿರುವುದು ಮಾತ್ರ ಮುದ್ದೆ, ಕಾಳು ಸಾರು ಊಟ.

800 ಜನ ಅಡುಗೆ ಸಿಬ್ಬಂದಿ
ಕೃಷಿ ಮೇಳದಲ್ಲಿ ವೈವಿದ್ಯಮಯ ಆಹಾರ ಲಭ್ಯವಿದ್ದರೂ ಕೂಡ ಹೆಚ್ಚು ಜನ ಉಂಡಿದ್ದು ಮುದ್ದೆ, ಕಾಳು ಸಾರನ್ನೆ. 50 ರೂಪಾಯಿಗೆ ಬಿಸಿ ಮುದ್ದೆ, ಕಾಳು ಸಾರು, ಅನ್ನ, ನುಗ್ಗೆ ಕಾಯಿ ಸಾರು, ಮೊಸರನ್ನ, ಒಂದು ಪಲ್ಯ, ಒಂದು ಸಿಹಿ ಲಡ್ಡು ಜೊತೆಗೆ ಉಪ್ಪಿನಕಾಯಿಯ ಹೊಟ್ಟೆ ತುಂಬುವ ಸುಗ್ರಾಸ ಭೊಜನಕ್ಕೆ ಜನ ಕ್ಯೂ ನಿಂತಿದ್ದರು.
ಕೃಷಿ ವಿಶ್ಯವಿದ್ಯಾಲಯವೇ ಆಯೋಜಿಸಿದ್ದ ಈ ಮಳಿಗೆಯಲ್ಲಿ ಅಡುಗೆ ಮಾಡುವವರು, ಬಡಿಸುವವರು, ಶುಚಿ ಗೊಳಿಸುವವರು, ಟಿಕೆಟ್ ನೀಡುವವರು, ಮೇಲುಸ್ತುವಾರಿ ನೋಡುವವರು ಎಲ್ಲ ಸೇರಿ ಸುಮಾರು 800 ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದರು.
ದೊಡ್ಡ ಮದುವೆ ಊಟದ ಹಾಲ್ ನಂತೆ ಭಾಸವಾಗುತ್ತಿದ್ದ ಮುದ್ದೆ ಊಟದ ಮಳಿಗೆ, ಮೊದಲನೇ ದಿನವೇ ಸಾವಿರಾರು ಜನರಿಗೆ ಮುದ್ದೆ ರುಚಿ ತೋರಿಸಿತು.

ರೊಟ್ಟಿ ಜಗಿದು ಖುಷಿ ಪಟ್ಟ ರೈತರು
ಮುದ್ದೆ, ಕಾಳು ಸಾರಿನ ನಂತರ ಹೆಚ್ಚು ಜನರನ್ನು ಸೆಳೆದಿದ್ದು ಉತ್ತರ ಕರ್ನಾಟಕದ ರೊಟ್ಟಿ, ಎಣ್ಣೆಗಾಯಿ ಪಲ್ಯ. ಮೇಳದಲ್ಲಿ ಖಡಕ್ ರೊಟ್ಟಿ ಮಾರುತ್ತಿದ್ದ ಎರಡು ಮಳಿಗೆಗಳ ಮುಂದೆಯೂ ಜನ ಗಿಜಿಗುಡುತ್ತಿದ್ದರು. 'ಅಕ್ಕ ಖಡಕ್ ರೊಟ್ಟಿ ಕೊಡ್ರಿ, ಉಚ್ಚೆಳ್ ಚಟ್ನಿ ಹಚ್ರಿ, ಎಣ್ಣಿಗಾಯ್ ಹಾಕ್ರಿ' ಮಾತುಗಳು ಅಲ್ಲಿ ಸಾಮಾನ್ಯವಾಗಿದ್ದವು.
ಉತ್ತರ ಕರ್ನಾಟಕದ ಊಟದ ಸ್ವಾದಕ್ಕೆ ವಿವಿಯ ಕಾಲೇಜು ಹುಡುಗರೂ ಮನಸೋತಿದ್ದರು. ಭಾರಿ ಸಂಖ್ಯೆಯಲ್ಲಿ ಕಾಲೇಜು ಹುಡುಗರು ರೊಟ್ಟಿ ಖಡಿದು ಖುಷಿ ಪಟ್ಟರು.

ಬೆಣ್ಣೆ ಹಾಕಿ ಅಣ್ಣ
ಮೇಳದಲ್ಲಿ ದಾವಣಗೆರೆ ಬೆಣ್ಣೆ ದೋಸೆಗೆ ಮೂರನೇ ಸ್ಥಾನ. ಬಿಸಿ-ಬಿಸಿ ದಾವಣಗೆರೆ ದೋಸೆಗಳು ತಟ್ಟೆಗೆ ಹಾಕುತ್ತಲೆ ಖಾಲಿಯಾಗುತ್ತಿದ್ದವು. ದೋಸೆ ಚಟ್ನಿ ಆಲೂಗಡ್ಡೆ ಪಲ್ಯೆ ಜೊತೆಗೆ ಮೇಲೆ ಧಾರಾಳವಾಗಿ ಹಾಕುವ ಬೆಣ್ಣೆ, ತಿನ್ನುವವರ ಹೊಟ್ಟೆ ಸೇರಿ ಸಂತೃಪ್ತಗೊಳಿಸುತ್ತಿತ್ತು. ಬೆಣ್ಣೆ ದೋಸೆ ಮಳಿಗೆಯ ಸುತ್ತಲೂ ಘಮ್ ಎಂಬ ಸುವಾಸನೆ ಹರಡಲೂ ಈ ಬೆಣ್ಣೆಯೇ ಕಾರಣ.

ಬಿರಿಯಾನಿಯದ್ದೇ ಕಾರುಬಾರು
ಮೇಳದಲ್ಲಿ ಸಸ್ಯಹಾರ ಮತ್ತು ಮಾಂಸಾಹಾರಕ್ಕೆ ಸಮಾನ ಅವಕಾಶ ನೀಡಲಾಗಿತ್ತು. ಸಸ್ಯಹಾರ ಮಳಿಗೆಗಳಿದ್ದಷ್ಟೆ ಮಾಂಸಾಹಾರದ ಮಳಿಗೆಗಳೂ ಇದ್ದವು. ಬಹುತೇಕ ಮಾಂಸಾಹಾರ ಮಳಿಗೆಗಳಲ್ಲಿ ಬಿರಿಯಾನಿಯೇ ಪ್ರಮುಖ ಖಾದ್ಯ. ಅದರ ಜೊತೆಗೆ ಕಬಾಬ್, ಲೆಗ್ ಬೀಸ್ ಗಳು ಬೋನಸ್.
ಚಿಂತಾಮಣಿ ಕಬಾಬ್, ಚಿಕ್ಕಬಳ್ಳಾಪುರ ಭಗವಾನ್ ಬಿರಿಯಾನಿ ಮಳಿಗೆ, ಪ್ರತಿಷ್ಟಿತ ಹೈದರಾಬಾದಿ ಬಾವರ್ಚಿ, ರಾಜ್ ಕುಮಾರ್ ಬಿರಿಯಾನಿ, ಹಟ್ಟಿಮನೆ ವಿಧ ವಿಧ ಹೆಸರಿನ ಮಾಂಸಾಹಾರ ಮಳಿಗೆಗಳು ಮಾಂಸಪ್ರಿಯರನ್ನು ಕೂಗಿ ಕರೆಯುತ್ತಿದ್ದವು. ಇದರ ಜೊತೆಗೆ ಪಾಶ್ಚಾತ್ಯ ಶೈಲಿಯ ಫೈವ್ ಸ್ಟಾರ್ಸ್ ಚಿಕನ್ ಕೂಡ ಇದೆ.

ಮೀನು ತಿಂದು ತೇಗಿದ ಜನರು
ಸಮುದ್ರ ಸಸ್ಯ ಎಂದು ಕರೆಯಲಾಗುವ ಮೀನಿನ ಮಳಿಗೆಗಳು ಮಾಂಸಾಹಾರ ಮಳಿಗೆಗಳ ಮಧ್ಯದಲ್ಲಿದ್ದವು. ಮತ್ಸ್ಯ ಲೋಕ, ಮಂಗಳೂರು ಮೀನು ಅಂಗಡಿ ಹೆಸರಿನ ಇವುಗಳಲ್ಲಿಯೂ ಜನರ ದಂಡು ಸೇರಿತ್ತು. ಬಂಗುಡೆ, ಪಾಂಪ್ಲೆಟ್ ಮೀನು, ಏಂಜಲ್ ಮೀನು ಹೀಗೆ ವಿವಿಧ ಮೀನುಗಳು ಆಹಾರಪ್ರಿಯರು ನಾಲಗೆ ತಣಿಸಿದವು.

ಪ್ರೂಟ್ಸ್ ಕೂಡ ಇದೆ
ಮೇಳದಲ್ಲಿ ಚಾಟ್ಸ್ ಗೆ ಕೂಡ ಅವಕಾಶ ಕಲ್ಪಿಸಲಾಗಿತ್ತು ಇಲ್ಲಿ. ಬಂಗಾರಪೇಟೆ ಚಾಟ್ಸ್, ಚಿಂತಾನಣಿ ಚಾಟ್ಸ್ ನ ದೊಡ್ಡ ಮಳಿಗೆಗಳು ಯುವಕ-ಯುವತಿಯರನ್ನು ಹೆಚ್ಚಿಗೆ ತನ್ನತ್ತ ಸೆಳೆದಿತ್ತು. ಇದರ ಜೊತೆಗೆ ಪಾಪ್ ಕಾರ್ನ್ ಮಳಿಗೆ ಕೂಡ ಇಲ್ಲಿದೆ.
ಇಷ್ಟೆಲ್ಲಾ ಇದ್ದ ಮೇಲೆ ಪ್ರೂಟ್ಸ್ ಇಲ್ಲದೆ ಇದ್ದರೆ ಹೇಗೆ ಹಾಗಾಗಿ ಅದಕ್ಕೂ ಜಾಗ ನೀಡಲಾಗಿದೆ. ಪ್ರೂಟ್ ಸಲಾಡ್ ಅಂಗಡಿ, ಜ್ಯೂಸ್ ಅಂಗಡಿಗಳೂ ಗ್ರಾಹಕರನ್ನು ಸೆಳೆಯುತ್ತಿವೆ.











Click it and Unblock the Notifications