ಮುಗಿದ ಛಕ್ಕಾ ಜಾಮ್; ಕೇಂದ್ರಕ್ಕೆ ಅಕ್ಟೋಬರ್ 2ರವರೆಗೂ ಗಡುವು ನೀಡಿದ ರೈತರು
ನವದೆಹಲಿ, ಫೆಬ್ರುವರಿ 06: ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಗಡುವು ನೀಡಿರುವ ರೈತ ಸಂಘಗಳು, ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಪುನರುಚ್ಚರಿಸಿವೆ.
ಶನಿವಾರ ತಮ್ಮ ಪ್ರತಿಭಟನೆ ಭಾಗವಾಗಿ ಛಕ್ಕಾ ಜಾಮ್ ಹಮ್ಮಿಕೊಂಡಿದ್ದ ರೈತ ಸಂಘಗಳು, ಮಧ್ಯಾಹ್ನ 12 ರಿಂದ 3ಗಂಟೆವರೆಗೂ ಹೆದ್ದಾರಿ ತಡೆ ನಡೆಸಿದ್ದಾರೆ. ಆನಂತರ ಮಾತನಾಡಿದ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್, "ಕೇಂದ್ರ ಸರ್ಕಾರಕ್ಕೆ ಈ ಕಾಯ್ದೆಗಳನ್ನು ಹಿಂಪಡೆದು ಈ ಬಿಕ್ಕಟ್ಟನ್ನು ಕೊನೆಗೊಳಿಸಲು ಅಕ್ಟೋಬರ್ 2ರವರೆಗೂ ಗಡುವು ನೀಡಿದ್ದೇವೆ. ಆವರೆಗೂ ನಾವು ನಮ್ಮ ಬೇಡಿಕೆಗಳಿಂದ ಹಿಂದೆ ಸರಿಯುವುದಿಲ್ಲ" ಎಂದು ಹೇಳಿದ್ದಾರೆ. ಮುಂದೆ ಓದಿ...
ರೈತರ ಛಕ್ಕಾ ಜಾಮ್; ದೆಹಲಿ ಗಡಿಗಳಲ್ಲಿ ಡ್ರೋಣ್ ಹದ್ದಿನ ಕಣ್ಣು
ಅಕ್ಟೋಬರ್ 2ರವರೆಗೂ ಗಡುವು
ಘಾಜಿಪುರ ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿದ ರಾಕೇಶ್ ಟಿಕಾಯತ್, ಅಕ್ಟೋಬರ್ 2ರವರೆಗೂ ನಾವು ಕೇಂದ್ರ ಸರ್ಕಾರಕ್ಕೆ ಗಡುವು ನೀಡಿದ್ದೇವೆ. ಆಗಲೂ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಸರ್ಕಾರ ಮಣಿಯಲಿಲ್ಲ ಎಂದರೆ ಮತ್ತೊಂದು ಯೋಜನೆ ರೂಪಿಸುತ್ತೇವೆ. ಆದರೆ ಈ ಅವಧಿಯಲ್ಲಿ ಸರ್ಕಾರದೊಂದಿಗೆ ಯಾವುದೇ ಚರ್ಚೆ, ಮಾತುಕತೆ ನಡೆಸುವುದಿಲ್ಲ ಎಂದು ಹೇಳಿದ್ದಾರೆ. ಇದೇ ಸಂದರ್ಭ ಬೆಳೆ ಸಂಗ್ರಹಣೆಗೆ ಕನಿಷ್ಠ ಬೆಂಬಲ ಬೆಲೆ ಕಾನೂನನ್ನು ದೃಢಪಡಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಟಿಕ್ರಿ ಗಡಿಯಲ್ಲಿ ಡ್ರೋಣ್ ಕಣ್ಗಾವಲು
ಶನಿವಾರ ರೈತರು ಛಕ್ಕಾ ಜಾಮ್ ಹಮ್ಮಿಕೊಂಡಿದ್ದ ಸಲುವಾಗಿ ದೆಹಲಿಯ ಮೂರು ಗಡಿಗಳಾದ ಸಿಂಘು, ಟಿಕ್ರಿ ಹಾಗೂ ಘಾಜಿಪುರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ದೆಹಲಿ-ಎಎನ್ ಸಿಆರ್ ಹಾಗೂ ದೆಹಲಿ ರಾಜಸ್ಥಾನದ ಗಡಿಯಾದ ಶಹಜಹಾನ್ ಪುರದಲ್ಲಿ ಅತ್ಯಧಿಕ ಮಟ್ಟದಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ದೆಹಲಿ ಪೊಲೀಸರು, ಪ್ಯಾರಾ ಮಿಲಿಟರಿ ಹಾಗು ಮೀಸಲು ಪಡೆಯ ಸುಮಾರು 50,000 ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಮುಂಜಾಗ್ರತಾ ಕ್ರಮವಾಗಿ ಮೆಟ್ರೋ ಸ್ಟೇಷನ್ ಗಳನ್ನು ಬಂದ್ ಮಾಡಲಾಗಿತ್ತು. ಕೆಂಪು ಕೋಟೆ ಸುತ್ತಮುತ್ತ ಪೊಲೀಸ್ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು. ಟಿಕ್ರಿ ಗಡಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಡ್ರೋಣ್ ಕ್ಯಾಮೆರಾಗಳನ್ನು ನಿಯೋಜಿಸಲಾಗಿತ್ತು.
ಗರಿಷ್ಠ ಸಂಯಮ ಕಾಪಾಡಿ: ವಿಶ್ವಸಂಸ್ಥೆ ಮಾನವಹಕ್ಕುಗಳ ಆಯೋಗ ಮನವಿ
ರೈತರಿಗೆ ದೇಶಾದ್ಯಂತ ವ್ಯಕ್ತವಾದ ಬೆಂಬಲ
ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ಹೋರಾಟ ಮುಂದುವರೆಸಿರುವ ರೈತರಿಗೆ ದೇಶಾದ್ಯಂತ ಬೆಂಬಲ ವ್ಯಕ್ತವಾಗಿದೆ. ರೈತರು ನೀಡಿದ್ದ ಕರೆಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತಗೊಂಡಿದೆ. ದೇಶದ ಹಲವು ರಾಜ್ಯಗಳಲ್ಲಿ ರೈತರು ಪ್ರತಿಭಟನೆಗೆ ತಮ್ಮ ಬೆಂಬಲ ವ್ಯಕ್ತಪಡಿಸಿ ತಮ್ಮ ರಾಜ್ಯಗಳಲ್ಲಿಯೂ ಹೆದ್ದಾರಿ ತಡೆ ನಡೆಸಿದರು. ಎಲ್ಲೆಡೆ ಶಾಂತಿಯುತವಾಗಿ ಪ್ರತಿಭಟನೆಯನ್ನು ನಡೆಸಲಾಗಿದೆ. ದೇಶವ್ಯಾಪಿ ಹಮ್ಮಿಕೊಂಡಿರುವ ರೈತ ಹೋರಾಟಕ್ಕೆ ಕರ್ನಾಟಕದಲ್ಲಿಯೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರೈತರ ಹೆದ್ದಾರಿ ಬಂದ್ ಮಾಡಿ ಕೃಷಿ ಕಾಯ್ದೆ ಹಾಗೂ ಕೇಂದ್ರ ಸರ್ಕಾರದ ಘೋಷಣೆ ಕೂಗಿದರು.
ನವೆಂಬರ್ 26ರಿಂದಲೂ ನಿಲ್ಲದ ಹೋರಾಟ
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ರೈತರು ನವೆಂಬರ್ 26ರಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ಹನ್ನೊಂದು ಮಾತುಕತೆಗಳು ನಡೆದಿದ್ದು, ಯಾವುದೇ ಒಪ್ಪಂದಕ್ಕೆ ಬರಲಾಗಿಲ್ಲ. ಜೊತೆಗೆ ಗಣರಾಜ್ಯೋತ್ಸವ ದಿನದಂದು ರೈತರ ಟ್ರ್ಯಾಕ್ಟರ್ ಜಾಥಾ ಸಂದರ್ಭ ದೊಡ್ಡ ಮಟ್ಟದಲ್ಲಿ ಗಲಭೆ ಏರ್ಪಟ್ಟಿತ್ತು. ಇದಾದ ನಂತರ ತಮ್ಮ ಪ್ರತಿಭಟನೆ ಭಾಗವಾಗಿ ಶನಿವಾರ ರೈತರು ಛಕ್ಕಾ ಜಾಮ್ ಹಮ್ಮಿಕೊಂಡಿದ್ದರು.