ಇದು ಘಾಜಿಪುರವೇ? ಭಾರತ-ಪಾಕ್ ಗಡಿಯೇ? ವಿಪಕ್ಷಗಳಿಂದ ತೀವ್ರ ಖಂಡನೆ
ನವದೆಹಲಿ, ಫೆಬ್ರುವರಿ 05: "ದೆಹಲಿಯ ಘಾಜಪುರ ಗಡಿ ಭಾರತ-ಪಾಕ್ ಗಡಿಯಂತೆ ಗೋಚರಿಸುತ್ತಿದೆ. ರೈತರು ಜೈಲಿನಲ್ಲಿ ಬಂಧಿಯಾದವರಂತೆ ಕಾಣುತ್ತಿದ್ದಾರೆ. ರೈತರ ಈ ಹೋರಾಟದ ಕುರಿತು ಸಂಸತ್ತಿನಲ್ಲಿ ಪ್ರತ್ಯೇಕವಾಗಿ ಚರ್ಚಿಸಲು ಅವಕಾಶ ನೀಡಬೇಕು" ಎಂದು ಸುಮಾರು ಹತ್ತು ವಿರೋಧ ಪಕ್ಷಗಳ ಹನ್ನೆರಡು ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.
ಹಾಗೆಯೇ, ಚುನಾಯಿತ ಪ್ರತಿನಿಧಿಗಳಾದ ನಮ್ಮ ಹಕ್ಕನ್ನು ರಕ್ಷಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಪೀಕರ್ ಗೆ ಮನವಿ ಮಾಡಿದ್ದಾರೆ. ಡಿಎಂಕೆ ಪಕ್ಷದ ಕನಿಮೊಳಿ, ತಿರುಚಿ ಸಿವಾ, ತೃಣಮೂಲ ಕಾಂಗ್ರೆಸ್ ಸುಗತಾ ರಾಯ್, ಎನ್ ಸಿಪಿಯ ಸುಪ್ರಿಯಾ ಸುಲೆ, ಶಿರೋಮಣಿ ಅಕಾಲಿ ದಳದ ಹರಸಿಮ್ರತ್ ಕೌರ್ ಬಾದಲ್, ಆರ್ ಎಸ್ ಪಿ ಎನ್ ಕೆ ಪ್ರೇಮಚಂದ್ರನ್, ಸಿಪಿಐ ಎಂ ಸೆಲ್ವರಾಜ್, ನ್ಯಾಷನಲ್ ಕಾನ್ಫರೆನ್ಸ್ ಹಸ್ನೇನ್ ಮಸೂದಿ, ವಿಸಿಕೆ ತೋಲ್ ತಿರುಮವಲವನ್ ಹಾಗೂ ರವಿ ಕುಮಾರ್, ಸಿಪಿಐ ಎಎಂ ಆರಿಫ್ ಹಾಗೂ ವೆಂಕಟೇಶನ್ ಅವರು ಸಹಿ ಮಾಡಿ ಪತ್ರ ಬರೆದಿದ್ದಾರೆ. ಮುಂದೆ ಓದಿ...

ರೈತರ ಭೇಟಿಗೂ ಪೊಲೀಸರ ಅಡ್ಡಗಾಲು
ಗುರುವಾರ ದೆಹಲಿ ಗಡಿಗಳಲ್ಲಿ ಪ್ರತಿಭಟನಾ ನಿರತ ರೈತರನ್ನು ಭೇಟಿ ಮಾಡಲು ತೆರಳಿದ್ದ ಸಂಸದರನ್ನು ದೆಹಲಿ ಪೊಲೀಸರು ತಡೆಹಿಡಿದಿದ್ದರು. ಎಷ್ಟೇ ಹೊತ್ತು ಕಾದರೂ ರೈತರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಸಂಸದರು, ಸಂಸತ್ತಿನ ಚುನಾಯಿತ ಸದಸ್ಯರ ಹಕ್ಕುಗಳನ್ನು ರಕ್ಷಿಸಲು ನಿಮಗೆ ಸೂಕ್ತವೆನಿಸುವ ಕ್ರಮ ತೆಗೆದುಕೊಳ್ಳಿ ಹಾಗೂ ರೈತರ ವಿವಾದದ ಕುರಿತು ಪ್ರತ್ಯೇಕ ಚರ್ಚೆ ಏರ್ಪಡಿಸಿ ಎಂದು ಸ್ಪೀಕರ್ ಗೆ ಕೇಳಿಕೊಂಡಿದ್ದಾರೆ.

"ಸರ್ಕಾರದ್ದು ದಮನಕಾರಿ ಮನೋಭಾವ"
ಪಂಜಾಬ್, ಹರಿಯಾಣ ಹಾಗೂ ಉತ್ತರ ಪ್ರದೇಶದ ಸಾವಿರಾರು ರೈತರು ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಎರಡು ತಿಂಗಳಿನಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರಿಗೆ ನೀರು, ವಿದ್ಯುತ್ ಸರಬರಾಜನ್ನು ಸರ್ಕಾರ ನಿಲ್ಲಿಸಿದೆ. ಇಂಟರ್ ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಶೌಚಾಲಯವನ್ನೂ ತೆರವುಗೊಳಿಸಲಾಗಿದೆ. ರೈತರ ವಿರುದ್ಧ ಈ ರೀತಿ ದಮನಕಾರಿ ಮನೋಭಾವವನ್ನು ಸರ್ಕಾರ ಪ್ರದರ್ಶಿಸುತ್ತಿದೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.

ರೈತರ ಕುರಿತು ವಿಶೇಷ ಚರ್ಚೆಗೆ ಮನವಿ
ಸಂಸತ್ತಿನಲ್ಲಿ ರೈತರ ವಿಚಾರವನ್ನು ವಿಶೇಷವಾಗಿ ಚರ್ಚೆ ಮಾಡಬೇಕಿದೆ. ರೈತರು ಅಲ್ಲಿ ಕೈದಿಗಳಂತೆ ಇದ್ದಾರೆ. ರೈತರ ದಯನೀಯ ಸ್ಥಿತಿ ಕುರಿತು ಪತ್ರಗಳು ಬರುತ್ತಲೇ ಇವೆ. ಮಹಿಳೆ, ಮಕ್ಕಳು ಅಲ್ಲಿದ್ದಾರೆ ಎಂಬುದನ್ನು ಸರ್ಕಾರ ಮರೆಯಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

"ರೈತರು ಬಂಧಿಗಳಂತೆ ಇದ್ದಾರೆ"
"ನಾವೆಲ್ಲಾ ಗುರುವಾರ ಘಾಜಿಪುರಕ್ಕೆ ರೈತರನ್ನು ಭೇಟಿ ಮಾಡಲು ತೆರಳಿದ್ದೆವು. ಪೊಲೀಸರು ಅತಿ ದಾರ್ಷ್ಟ್ಯದಿಂದ ನಡೆದುಕೊಂಡರು. ಕೆಲ ಕಾಲ ಅಲ್ಲೇ ಇದ್ದೆವು. ಗಂಟೆಗಟ್ಟಲೆ ಕಾದೆವು. ಆನಂತರ ವಾಪಸ್ ಬಂದೆವು. ದೆಹಲಿ ಘಾಜಿಪುರ ಗಡಿ ಪ್ರದೇಶ ನಮಗೆಲ್ಲಾ ಇಂಡಿಯಾ- ಪಾಕಿಸ್ತಾನ್ ನಡುವಿನ ಗಡಿಯಂತೆ ಕಂಡಿತು. ರೈತರು ಜೈಲಿನಲ್ಲಿ ಬಂಧಿಯಾದವರಂತೆ ಕಾಣುತ್ತಿದ್ದಾರೆ" ಎಂದು ದೂರಿದರು.
ಚುನಾಯಿತ ಪ್ರತಿನಿಧಿಗಳು ರೈತರನ್ನು ಭೇಟಿ ಮಾಡಲು ಸಾಧ್ಯವಾಗದ ಪರಿಸ್ಥಿತಿ ನಮ್ಮ ದೇಶದಲ್ಲಿದೆ. ದೆಹಲಿ ಪೊಲೀಸರ ಈ ಕ್ರಮವನ್ನು ನಾವು ಖಂಡಿಸುತ್ತೇವೆ ಎಂದು ಸಂಸದರು ವಿರೋಧ ವ್ಯಕ್ತಪಡಿಸಿದ್ದಾರೆ.












Click it and Unblock the Notifications