ಗದಗ; ವಿವಿಧ ಬೆಳೆಗೆ ಹಳದಿ ನಂಜಾಣು ರೋಗ, ರೈತರು ಹೈರಾಣ
ಗದಗ, ಜುಲೈ, 25: ಗದಗ, ಹರ್ಲಾಪೂರ, ಲಕ್ಕುಂಡಿ, ತಿಮ್ಮಾಪೂರ, ಕಣಗಿನಹಾಳ ಮತ್ತು ಹಾತಲಗೇರಿ ಗ್ರಾಮಗಳ ಭಾಗದಲ್ಲಿ ಹೆಸರು, ಶೇಂಗಾ ಬೆಳೆಗಳಿಗೆ ಹಳದಿ ರೋಗ ಬಿದ್ದು ರೈತರು ಕಂಗಾಲಾಗಿದ್ದಾರೆ. ರೈತರು ಬೆಳೆದ ಬೆಳೆಗಳು ನಾಶಾವಾಗುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ.
ಮುಂಗಾರಿನ ಸಮಯದಲ್ಲಿ ಬಿತ್ತನೆ ಮಾಡಿದ ಶೇಂಗಾ, ಹೆಸರು ಬೆಳೆಗಳಿಗೆ ಹಳದಿ ನಂಜಾಣು ರೋಗ ಅಂಟಿಕೊಂಡಿದ್ದು, ರೈತ ಸಮೂಹ ಸಂಕಷ್ಟಕ್ಕೆ ಸಿಲುಕಿದೆ. ಈ ವರ್ಷ ವಾಡಿಕೆಗಿಂತ ಹೆಚ್ಚಾಗಿ ಮುಂಗಾರು ಮಳೆಯಾಗಿದ್ದು, ಹೆಸರು, ಶೇಂಗಾ ಉಷ್ಣಾಂಶದ ಕೊರತೆ ಉಂಟಾಗಿದ್ದ ಕಾರಣ ಹಳದಿ ನಂಜಾಣು ರೋಗ ಅಧಿಕವಾಗಿ ಬೆಳೆಗಳು ನೆಲಕಚ್ಚುತ್ತಿವೆ.
ರೈತರು ಸಾಲ ಮಾಡಿ ಬಿತ್ತನೆ ಬೀಜಗಳನ್ನು ಕೊಂಡು ತಂದಿದ್ದಾರೆ. ಇದೀಗ ಬೆಳೆಗಳು ಅಳಿವಿನಂಚಿಗೆ ತಲುಪಿದ ಕಾರಣ ಮೇಲೆ ಕೆಳಗೆ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ನಿರಂತರವಾಗಿ ಮೋಡ ಕವಿದ ವಾತಾವರಣವಿರುವುದರಿಂದ ಬೆಳೆಯ ಎಲೆಗಳು ಹಳದಿಯಾಗಿ ನಂಜಾಣು ರೋಗ ತಗುಲಿ ಬೆಳೆ ಕಮರುತ್ತಿದೆ.

ಕೊರಕ ಹುಳು ಹಾಗೂ ಕಿಡಿಗಳು ಉತ್ಪತ್ತಿಯಾಗಿ ಹೂವು, ಕಾಯಿ ಬಿಡುವ ಮುನ್ನ ಕಾಂಡ ಮತ್ತು ಎಲೆಗಳನ್ನು ತಿಂದು ಲಕ್ಷಾಂತರ ಮೊಟ್ಟೆಯಿಡುತ್ತಿವೆ. ಆದ ಕಾರಣ ಆಗ ತಾನೇ ಚಿಗುರಿದ ಎಲೆಗಳು ರಂಧ್ರ ಬಿಳುತ್ತಿವೆ. ಆ ಹುಳುಗಳು ಹಂತಹಂತವಾಗಿ ಬೆಳೆಯನ್ನು ನಾಶಪಡಿಸುತ್ತಾ ಬರುತ್ತಿವೆ ಎಂದು ರೈತಾಪಿ ವರ್ಗದವರು ಅಳಲು ತೋಡಿಕೊಂಡಿದ್ದಾರೆ.
ಉತ್ತಮ ಫಸಲು ಬರುತ್ತಿತ್ತು; ಹೆಸರು ಹಾಗೂ ಶೇಂಗಾ ಬೆಳೆಗಳು ಪ್ರತಿವರ್ಷ ಯಾವುದೇ ಕೀಟನಾಶಕ ಸಿಂಪಡಣೆ ಮಾಡದೇ ಉತ್ತಮ ಫಸಲನ್ನು ಕೊಡುತ್ತಿದ್ದವು. ಆದರೆ ಈ ವರ್ಷ ಗಾಯದ ಮೇಲೆ ಬರೆ ಎಳೆದಂತೆ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಔಷಧಿಗಳನ್ನು ಸಿಂಪಡನೆ ಮಾಡಿದರು ಕೂಡ ರೋಗ ಹತೋಟಿಗೆ ಬರುತ್ತಿಲ್ಲ. ಆದುದರಿಂದ ಸಂಬಂಧಪಟ್ಟ ಕೃಷಿ ಅಧಿಕಾರಿಗಳು ರೈತರ ಜಮೀನಿಗೆ ಭೇಟಿ ನೀಡಿ ರೋಗದ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕೆಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ರೈತರಿಗೆ ಮಾಹಿತಿ ನೀಡಿ ಬೆಳೆ ಹಾನಿಯ ಬಗ್ಗೆ ಸರ್ಕಾರಕ್ಕೆ ವರದಿ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿ.ಆರ್ ನಾರಾಯಣರೆಡ್ಡಿ ಬಣದ ಗದಗ ಜಿಲ್ಲಾ ರೈತ ಸಂಘದ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಹೆಚ್. ಬಾಬರಿ ಹಾಗೂ ಹುಚ್ಚೀರಪ್ಪ ಜೋಗಿನ ಶರಣಪ್ಪ ಜೋಗಿನ ಶೇಖಪ್ಪ ಘಂಟಿ ಹಾಗೂ ಲಕ್ಕುಂಡಿ ರೈತರಾದ ಹನುಮಪ್ಪ ಕರಿ ಉಮೇಶ್ ಗೌಡ್ರು, ಕಣಗಿನಹಾಳ ರೈತರಾದ ಬಾಲರಾಜ್ ಹೂಲಗೋಳ, ಸಿದ್ದಪ್ಪ ಪಾಟೀಲ್, ರಾಮಣ್ಣ ಖಂಡ್ರಿ ಬಾಳಪ್ಪ ಗಂಗರಾತ್ರಿ ಅಂದಪ್ಪ ಕೂಳೂರು ಸೇರಿದಂತೆ ಇನ್ನೂ ಮುಂತಾದ ರೈತರು ಒತ್ತಾಯಿಸಿದ್ದಾರೆ.
ಹೀಗೆ ಶೇಂಗಾ, ಹೆಸರು ಬೆಳೆಗಳು ನಾಶವಾಗುತ್ತಿದ್ದು ಇದಕ್ಕೆ ಪರಿಹಾರ ಕಲ್ಪಿಸುವಂತೆ ಅಲ್ಲಿನ ರೈತರು ಒತ್ತಾಯಿಸುತ್ತಿದ್ದಾರೆ. ಯಾವುದೇ ಕೀಟನಾಶಕ ಸಿಂಪಡನೆ ಮಾಡಿದರೂ ಕೂಡ ರೋಗದ ಹಾವಳಿಯಂತೂ ಹರಡುತ್ತಲೇ ಇದೆ.












Click it and Unblock the Notifications