ಮಂಡ್ಯಕ್ಕೆ ಭೇಟಿ ನೀಡಿದ ಮಾಜಿ ಸಂಸದೆ ರಮ್ಯಾ ಹೇಳಿದ್ದೇನು?
ಮಂಡ್ಯ, ಜುಲೈ 29 : ಮಂಗಳವಾರ ಮಂಡ್ಯಕ್ಕೆ ಭೇಟಿ ನೀಡಿದ ನಟಿ, ಮಾಜಿ ಸಂಸದೆ ರಮ್ಯಾ ಅವರು ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. 'ರೈತರು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ನಾನು ಯಾವಾಗಲೂ ರೈತರ ಜತೆಗಿದ್ದೇನೆ' ಎಂದು ತಿಳಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಮುಖಂಡರಿಗೂ ಮಾಹಿತಿ ನೀಡದೆ ಬೆಂಗಳೂರಿನಿಂದ ಮಂಡ್ಯಕ್ಕೆ ಮಂಗಳವಾರ ಬೆಳಗ್ಗೆ ಆಗಮಿಸಿದ ರಮ್ಯಾ ಅವರು, ಮದ್ದೂರು ತಾಲೂಕು ಸಾದೊಳಲು ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾದ ಶಿವಣ್ಣ, ಪಾಂಡವಪುರದಲ್ಲಿ ಆತ್ಮಹತ್ಯೆಗೆ ಶರಣಾದ ನಿಂಗೇಗೌಡರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು. 50 ಸಾವಿರ ರೂ. ಪರಿಹಾರ ನೀಡಿದರು. [ಮಾಜಿ ಸಂಸದೆ ರಮ್ಯಾ ಮಂಡ್ಯದಲ್ಲಿ ಪ್ರತ್ಯಕ್ಷ]
ಮಾಧ್ಯಮಗಳೊಂದಿಗೆ ಮಾತನಾಡಿದ ರಮ್ಯಾ ಅವರು, '15 ದಿನಗಳ ಹಿಂದೆ ಗಾಜಿನ ಚೂರು ಎಡಗಾಲಿಗೆ ಚುಚ್ಚಿ ಗಾಯವಾಗಿದೆ. ಆದ್ದರಿಂದ ವಿಶ್ರಾಂತಿ ಪಡೆಯುತ್ತಿದ್ದೇನೆ. ಸರಿಯಾಗಿ ನಡೆಯಲು ಸಾಧ್ಯವಾಗುತ್ತಿಲ್ಲ. ಕೆಲವು ದಿನಗಳ ಬಳಿಕ ಮತ್ತೊಮ್ಮೆ ರೈತರ ಮನೆಗಳಿಗೆ ಭೇಟಿ ನೀಡುತ್ತೇನೆ' ಎಂದರು.
ಅಂದಹಾಗೆ ರಮ್ಯಾ ವಿರುದ್ಧ ಜಿಲ್ಲಾ ಕಾಂಗ್ರೆಸ್ ಮುಖಂಡರು ಹೈಕಮಾಂಡ್ಗೆ ಕೆಲವು ದಿನಗಳ ಹಿಂದೆ ದೂರು ನೀಡಿದ್ದರು. ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಮಂಡ್ಯಕ್ಕೆ ಭೇಟಿ ನೀಡದ ರಮ್ಯಾ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು. ರಮ್ಯಾ ಮಂಡ್ಯದಲ್ಲಿ ಹೇಳಿದ್ದೇನು? ನೋಡೋಣ ಬನ್ನಿ

ರೈತರಿಗೆ ಸಾಂತ್ವನ ಹೇಳಿದ ರಮ್ಯಾ
ಮಂಗಳವಾರ ಮಾಜಿ ಸಂಸದೆ ರಮ್ಯಾ ಅವರು ಮದ್ದೂರು ತಾಲೂಕು ಸಾದೊಳಲು ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾದ ಶಿವಣ್ಣ, ಪಾಂಡವಪುರದಲ್ಲಿ ಆತ್ಮಹತ್ಯೆಗೆ ಶರಣಾದ ನಿಂಗೇಗೌಡರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು. 50 ಸಾವಿರ ರೂ. ಪರಿಹಾರ ನೀಡಿದರು.

ರೈತರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇನೆ
'ಕರ್ನಾಟಕದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿಚಾರವನ್ನು ಪಕ್ಷದ ಹೈಕಮಾಂಡ್ ಗಮನಕ್ಕೆ ತಂದಿದ್ದೇನೆ. ಈ ಕುರಿತು ಮುಖ್ಯಮಂತ್ರಿಗಳ ಜತೆಗೂ ಮಾತನಾಡಿ ರೈತರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ' ಎಂದು ರಮ್ಯಾ ಅವರು ಹೇಳಿದರು.

'ನಾನು ರೈತರ ಜೊತೆಗಿದ್ದೇನೆ'
'ರೈತರು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದ ರಮ್ಯಾ ಅವರು, ಸರ್ಕಾರ ಆತ್ಮಹತ್ಯೆ ತಡೆಗಟ್ಟಲು ಹಲವಾರು ಕ್ರಮಗಳನ್ನು ಕೈಗೊಂಡಿದೆ, ನಾನು ಯಾವಾಗಲೂ ರೈತರ ಜತೆಗಿದ್ದೇನೆ' ಎಂದು ಹೇಳಿದರು.

ಬಿಬಿಎಂಪಿ ಚುನಾವಣೆ ಬಳಿಕ ರಾಹುಲ್ ರಾಜ್ಯಕ್ಕೆ
'ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಕರ್ನಾಟಕಕ್ಕೆ ಆಗಮಿಸಲಿದ್ದು, ರೈತರ ಸಮಸ್ಯೆಯನ್ನು ಆಲಿಸಲಿದ್ದಾರೆ' ಎಂದು ರಮ್ಯಾ ತಿಳಿಸಿದರು.

'ವಿದ್ಯಾಭ್ಯಾಸಕ್ಕಾಗಿ ಲಂಡನ್ನಲ್ಲಿ ನೆಲೆಸಿದ್ದೆ'
'ಮಂಡ್ಯ, ಮದ್ದೂರು ಮುಂತಾದ ತಾಲೂಕಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿದ್ದೇನೆ. ನಾನು ವಿದ್ಯಾಭ್ಯಾಸಕ್ಕಾಗಿ ಹಲವು ತಿಂಗಳ ಕಾಲ ಲಂಡನ್ನಲ್ಲಿ ನೆಲೆಸಿದ್ದೆ' ಎಂದು ರಮ್ಯಾ ಹೇಳಿದರು.

15 ದಿನಗಳ ಬಳಿಕ ಪುನಃ ಭೇಟಿ ನೀಡುವೆ
'15 ದಿನಗಳ ಬಳಿಕ ಪುನಃ ರೈತರ ಮನೆಗಳಿಗೆ ಭೇಟಿ ನೀಡುವೆ' ಎಂದು ರಮ್ಯಾ ಹೇಳಿದರು. 'ಗಾಜಿನ ಚೂರು ಚುಚ್ಚಿ ಎಡಗಾಲಿಗೆ ಗಾಯವಾಗಿದೆ. ಆದ್ದರಿಂದ ವಿಶ್ರಾಂತಿ ಪಡೆಯುತ್ತಿದ್ದೆನೆ. ಸರಿಯಾಗಿ ನಡೆಯಲು ಆಗುತ್ತಿಲ್ಲ. ಕೆಲವು ದಿನ ವಿಶ್ರಾಂತಿ ಪಡೆದು ನಂತರ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಮನೆಗಳಿಗೆ ಭೇಟಿ ನೀಡುತ್ತೇನೆ' ಎಂದರು.












Click it and Unblock the Notifications