ಕೇರಳದಲ್ಲಿ ಕಾಫಿ ಬೆಳೆಗಾರರ ಪ್ರಥಮ ಅಖಿಲ ಭಾರತ ಸಮ್ಮೇಳನ
ಬೆಂಗಳೂರು, ಅಕ್ಟೋಬರ್ 25: ಸಂಕಷ್ಟದಲ್ಲಿರುವ ಭಾರತದ ಕಾಫಿ ಬೆಳೆಗಾರರು ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಡಲು ಇದೇ ಮೊದಲ ಬಾರಿಗೆ 'ಕಾಫಿ ಬೆಳೆಗಾರರ ಪ್ರಥಮ ಅಖಿಲ ಭಾರತ ಸಮ್ಮೇಳನ'ವನ್ನು ಕೇರಳದ ವೈನಾಡಿನ ವೆಲ್ಲಮುಂಡಾದಲ್ಲಿ ಅಕ್ಟೋಬರ್ 26 ಮತ್ತು 27ರಂದು ಹಮ್ಮಿಕೊಂಡಿದ್ದಾರೆ.
ಕಾಫಿ ಕುಡಿಯದೇ ಬಹುತೇಕರಿಗೆ ದಿನ ಆರಂಭವಾಗುವುದೇ ಇಲ್ಲ. ಈ ಮಟ್ಟಿಗೆ ನಾವು ಕಾಫಿಗೆ ಅವಲಂಬಿತವಾಗಿದ್ದೇವೆ. ನಿತ್ಯದ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸಿರುವ ಕಾಫಿ, ಅದರ ಬೆಳೆಗಾರರು ಮಾತ್ರ ಸಾಕಷ್ಟು ಸಮಸ್ಯೆ, ಸವಾಲುಗಳನ್ನು ಎದುರಿಸುತ್ತಿದ್ದಾರೆ.
ಈ ಸಮಸ್ಯೆಗಳ ಪರಿಹಾರಾರ್ಥವಾಗಿ ಇದೇ ಮೊದಲ ಭಾರಿಗೆ ಭಾರತದಲ್ಲಿ 'ಕಾಫಿ ಬೆಳೆಗಾರರ ಪ್ರಥಮ ಅಖಿಲ ಭಾರತ ಸಮ್ಮೇಳನ' ನಡೆಯಲಿದೆ. ಈ ಸಮ್ಮೇಳನ 'ಕಾಫಿ ಫಾಮರ್ಸ್ ಫೆಡರೇಷನ್ ಆಫ್ ಇಂಡಿಯಾ' ಸಂಸ್ಥೆ ನೇತೃತ್ವದಲ್ಲಿ ನಡೆಯಲಿದೆ. ವಿವಿಧ ರಾಜ್ಯಗಳ ಕಾಫಿ ಬೆಳೆಗಾರರು, ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸಮ್ಮೇಳನವನ್ನು ಕೇರಳದ ಮಾಜಿ ಹಣಕಾಸು ಸಚಿವರಾದ ಡಾ.ಥಾಮಸ್ ಐಸಾಕ್ ಉಧ್ಘಾಟಿಸಲಿದ್ದಾರೆ. ಬಹಿರಂಗ ಸಭೆಯನ್ನು ಎಂ.ಎಂ.ಮಣಿ ಚಾಲನೆ ನೀಡಲಿದ್ದು, ಮತ್ತಿತರರು ಪಾಲ್ಗೊಳ್ಳಲಿದ್ದಾರೆ.
'ಬೆಟ್ಟದಿಂದ ಬಟ್ಟಲಿಗೆ' ಬರುವ ಕಾಫಿ ಹಿಂದೆ ಅನೇಕರ ಶ್ರಮ
'ಬೆಟ್ಟದಿಂದ ಬಟ್ಟಲಿಗೆ' ಎಂಬಂತೆ ನಿತ್ಯ ಬೆಳಗ್ಗೆ ಕಾಫಿ ನಮ್ಮೆಲ್ಲರ ಕೈಗೆ ಬರುವುದರ ಹಿಂದೆ ಅನೇಕ ಕಾಫಿ ಬೆಳೆಗಾರರು ಮತ್ತು ತೋಟಗಳಲ್ಲಿ ಕೆಲಸ ಮಾಡುವ ಸಾಕಷ್ಟು ಕಾರ್ಮಿಕರ ಶ್ರಮವಿದೆ. ಆದರೆ ಇವರಲ್ಲಿ ಯಾರು ಅಷ್ಟಾಗಿ ಶ್ರೀಮಂತರಲ್ಲ. ದೇಶದ ರಫ್ತಿನ ಮುಖ್ಯ ವಾಣಿಜ್ಯ ಬೆಳೆಯಾಗಿರುವ ಕಾಫಿಯನ್ನು ಬೆಳೆಯುವವರು ಸಮಾಜದ ಇತರೆ ವರ್ಗದ ಜನರೊಂದಿಗೆ ಅಷ್ಟಾಗಿ ಬೆರೆಯುವುದಿಲ್ಲ ಎಂದೆಲ್ಲ ವಿಷಯಗಳು ಪ್ರಚಲಿತದಲ್ಲಿವೆ.
ಕಾಫಿ ಬೆಳೆಗಾರರು ಸಣ್ಣ ಬೆಳೆಗಾರರು
ಭಾರತದಲ್ಲಿ ಶೇ.99 ರಷ್ಟು ಕಾಫಿ ಬೆಳೆಗಾರರು 10 ಎಕೆರೆಗಿಂತಲೂ ಕಡಿಮೆ ಜಮೀನು ಹೊಂದಿರುವ ಸಣ್ಣ ಪ್ರಮಾಣದ ಬೆಳೆಗಾರರಾಗಿದ್ದಾರೆ. ಭಾರತದ ಒಟ್ಟು ಕಾಫಿ ಉತ್ಪಾದನೆಯಲ್ಲಿ ಶೇ.75 ರಷ್ಟು ಕೊಡುಗೆ ನೀಡುವಲ್ಲಿ ಅವರ ಪಾಲು ಹೆಚ್ಚಿದೆ. ಆದರೆ ಇವರಿಗೆ ಬೆಳೆದ ಕಾಫಿ ಮಾರಾಟಕ್ಕೆ ಸಮರ್ಪಕ ಮಾರುಕಟ್ಟೆ ಇಲ್ಲ. ನ್ಯಾಯಯುತವಾದ ಬೆಲೆಯನ್ನು ನೀಡುವ ವ್ಯವಸ್ಥೆ ನಿರ್ಮಾಣವಾಗಿಲ್ಲ. ಹೀಗಾಗಿ ಅವರು ಆರ್ಥಿಕ ಹಾಗೂ ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ನಿರೀಕ್ಷಿತ ಆದಾಯ ದೊರೆಯದೇ ತತ್ತರಿಸುವಂತಾಗಿದೆ.
ಮಧ್ಯವರ್ತಿಗಳು, ದೊಡ್ಡ ಕಂಪನಿಗಳ ಹಾವಳಿ
ಮುಖ್ಯವಾಗಿ ಸಣ್ಣ ಬೆಳೆಗಾರರು ಮಧ್ಯವರ್ತಿಗಳು ಹಾಗೂ ದೊಡ್ಡ ದೊಡ್ಡ ಕಂಪನಿಗಳ ಹಾಳಿಯಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧೆ ಮಾಡಲಾಗದ ಸ್ಥಿತಿ ತಲುಪಿದ್ದಾರೆ. ಅಲ್ಲದೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿಯ ಬೆಲೆಗಳು ಕ್ರಮೇಣ ಇಳಿಕೆ ಆಗುತ್ತಲೇ ಇದೆ. ಹೀಗಾಗಿ ಕಾಫಿ ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ.
ಈ ಎಲ್ಲ ಸಮಸ್ಯೆಗಳನ್ನು ಸಮ್ಮೇಳನ ಮೂಲಕ ವಿನಿಯಮ ಮಾಡಿಕೊಳ್ಳಲು ಹಾಗೂ ಪರಿಹಾರ ವಿಚಾರವಾಗಿ ಸರ್ಕಾರದ ಗಮನ ಸೆಳೆಯಲು ಬೃಹತ್ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಈ ವೇಳೆ ದೊಡ್ಡ ಪ್ರಮಾಣದಲ್ಲಿರುವ ಸಣ್ಣ ಕಾಫಿ ಬೆಳೆಗಾರರು ಬುಧವಾರ ಮತ್ತು ಗುರುವಾರ ಒಂದೆಡೆ ಸಂಘಟಿತರಾಗಲಿದ್ದಾರೆ ಎನ್ನಲಾಗಿದೆ.
ಕರ್ನಾಟಕ ಸೇರಿ 3 ರಾಜ್ಯದಲ್ಲಿ ಅಧಿಕ ಕಾಫಿ ಉತ್ಪಾದನೆ
ದೇಶದ ಪ್ರಮುಖ ಮೂರು ರಾಜ್ಯಗಳಾದ ಕರ್ನಾಟಕ (ಶೇ.53), ಕೇರಳ (ಶೇ.28) ಮತ್ತು ತಮಿಳುನಾಡು (ಶೇ.11)ಗಳಲ್ಲೇ ಶೇ. 92 ರಷ್ಟು ಕಾಫಿ ಉತ್ಪಾದನೆ ಆಗುತ್ತದೆ. ಜೊತೆಗೆ ಅಂಧ್ರ ಪ್ರದೇಶ, ಒರಿಸ್ಸಾ, ತ್ರಿಪುರ ಮತ್ತು ಅಸ್ಸಾಂಗಳಲ್ಲೂ ತಕ್ಕಮಟ್ಟಿಗೆ ಕಾಫಿ ಬೆಳೆಯಲಾಗುತ್ತದೆ.
ಕಾರ್ಪೋರೇಟೀಕರಣವನ್ನು ವಿರೊಧಿಸಿ ದೇಶದ ಕಾಫಿ ಬೆಳೆಗೆ ಲಾಭದಾಯಕ ಬೆಲೆ ಖಾತ್ರಿಪಡಿಸಲು ರೈತರು ಆಗ್ರಹಿಸಿದ್ದಾರೆ. ರೈತರ ಉತ್ಪನ್ನಗಳ ಸಹಕಾರಿ ಸಂಘಗಳಿಗೆ ಅಗತ್ಯ ಸರ್ಕಾರಿ ನೆರವು ನೀಡುವಂತೆ ಅವರು ಒತ್ತಾಯಿಸಿದ್ದಾರೆ. ಕಾಫಿ ಬೆಳೆಯುವ ರಾಜ್ಯಗಳ ಬೆಳಗಾರರು, ಸಂಘಟನೆಗಳ ಸದಸ್ಯರು ಈ ಕುರಿತು ಸಮ್ಮೇಳನದಲ್ಲಿ ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳಲಿದ್ದಾರೆ.