ಮೈಸೂರಿನಲ್ಲಿ ಮಳೆಯಿಲ್ಲದೆ ನೆಲಕಚ್ಚಿದ ಬೆಳೆ: ಕಣ್ಣೀರಾದ ರೈತ
ಮೈಸೂರು, ಜುಲೈ 25: ಈ ಬಾರಿ ರಾಜ್ಯದಲ್ಲಿ ಕೆಲವೇ ಕೆಲವು ಜಿಲ್ಲೆಗಳನ್ನು ಹೊರತುಪಡಿಸಿದರೆ ಹೆಚ್ಚಿನ ಭಾಗಗಳಲ್ಲಿ ಮಳೆಯೇ ಆಗಿಲ್ಲ. ಈ ನಡುವೆ ಮುಂಗಾರು ಪೂರ್ವ ಮಳೆ ಕೆಲವೆಡೆ ಸುರಿದ ಹಿನ್ನೆಲೆಯಲ್ಲಿ ಮುಂದೆ ಮುಂಗಾರು ಮಳೆ ಚೆನ್ನಾಗಿ ಸುರಿಯಬಹುದೆಂಬ ನಿರೀಕ್ಷೆಯಲ್ಲಿ ಬೆಳೆ ಬೆಳೆದ ರೈತರು ಇದೀಗ ಕಂಗಾಲಾಗಿದ್ದಾರೆ.
ಮೈಸೂರಿನಲ್ಲಿ ಕಡಿಮೆ ಮಳೆ: ರೈತರಲ್ಲಿ ಆತಂಕದ ಛಾಯೆ
ಕಷ್ಟಪಟ್ಟು ಬೆಳೆದ ಬೆಳೆಗಳು ಹುಲುಸಾಗಿ ಬಂದಿತ್ತಾದರೂ ಇದೀಗ ನೀರಿಲ್ಲದೆ ಒಣಗುತ್ತಿರುವುದನ್ನು ನೋಡುತ್ತಾ ರೈತರು ಸಂಕಟ ಪಡುತ್ತಿದ್ದಾರೆ. ಅತ್ತ ನಮ್ಮ ಜನಪ್ರತಿನಿಧಿಗಳು ಅಧಿಕಾರಕ್ಕಾಗಿ ಹೆಣಗಾಡುತ್ತಿದ್ದರೆ ಇತ್ತ ರೈತರು ಸಾಲ ಮಾಡಿ ಬೆಳೆದ ಬೆಳೆ ಕಣ್ಣ ಮುಂದೆಯೇ ನೆಲಕಚ್ಚುತ್ತಿದೆಯಲ್ಲ ಎಂದು ತಲೆ ಮೇಲೆ ಕೈಹೊತ್ತು ಕೂತಿದ್ದಾರೆ.
ಮಡಿಕೇರಿಯಲ್ಲಿ ಆಶಾಭಾವ ಮೂಡಿಸಿದೆ ಮುಂಗಾರು ಮಳೆ
ಹಾಗೆ ನೋಡಿದರೆ ಮುಂಗಾರು ಪೂರ್ವ ಮಳೆ ಸ್ವಲ್ಪ ಮಟ್ಟಿಗೆ ಸುರಿದಿತ್ತು. ಅದನ್ನೇ ನಂಬಿ ಕೆಲವರು ಕೃಷಿ ಮಾಡುವ ಧೈರ್ಯ ಮಾಡಿದ್ದರು. ಕಳೆದ ವರ್ಷ ಉತ್ತಮ ಮುಂಗಾರು ಮಳೆ ಸುರಿದಿತ್ತು. ಈ ಬಾರಿಯೂ ಅದೇ ರೀತಿ ಮಳೆ ಸುರಿದರೆ ಉತ್ತಮ ಫಸಲನ್ನು ಪಡೆಯಬಹುದು ಎಂಬ ನಂಬಿಕೆಯಿಂದ ಜೋಳ, ನೆಲಗಡಲೆ ಸೇರಿದಂತೆ ಹಲವು ಬೆಳೆಗಳನ್ನು ಬೆಳೆದಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಮಳೆಯ ಸುಳಿವೇ ಇಲ್ಲ. ಹೀಗಾಗಿ ಮಳೆಯನ್ನು ನಂಬಿ ಕೃಷಿ ಮಾಡಿದ ರೈತನ ಪರಿಸ್ಥಿತಿ ಹೇಳತೀರದ್ದಾಗಿದೆ. ನೀರು ಹಾಯಿಸಲು ಅನುಕೂಲ ಇರುವ ರೈತರು ಕೊಳವೆ ಬಾವಿಯಿಂದ ನೀರು ಹಾಯಿಸಿ ಬೆಳೆಯನ್ನು ರಕ್ಷಿಸಿಕೊಂಡಿದ್ದಾರೆ. ಆದರೆ ನೀರಿನ ಆಸರೆಯಿಲ್ಲದೆ ಮಳೆಯನ್ನು ನಂಬಿ ಕೃಷಿ ಮಾಡಿದ ರೈತನ ಸ್ಥಿತಿ ಇದೀಗ ಮೂರಾಬಟ್ಟೆಯಾಗಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿತ್ತು. ಹೀಗಾಗಿ ರೈತರು ಖುಷಿಯಿಂದ ಜೋಳ, ಸೂರ್ಯಕಾಂತಿ, ನೆಲಗಡಲೆ ಮೊದಲಾದ ಬೆಳೆಗಳನ್ನು ಬೆಳೆದಿದ್ದರು. ಈಗ ಅದು ಬಿಸಿಲಿಗೆ ಒಣಗಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಸಿದ್ದಾಪುರದಲ್ಲಿ ಮಳೆಯಿಂದ ಮರ ಬಿದ್ದು ಅರಣ್ಯಪಾಲಕ ಸಾವು
ರೈತರ ಪರಿಸ್ಥಿತಿಯನ್ನರಿತ ಚಾಮರಾಜನಗರ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಕೃಷಿ ಇಲಾಖೆಯ ಉಪ ನಿರ್ದೇಶಕ ಡಾ.ಮುತ್ತುರಾಜ್, ಸಹಾಯಕ ನಿರ್ದೇಶಕ ವೆಂಕಟೇಶ್, ತಹಶೀಲ್ದಾರ್ ನಂಜುಂಡಯ್ಯ, ಬೇಗೂರು ನಾಡಕಚೇರಿಯ ಭೈರಯ್ಯ, ಕಂದಾಯಾಧಿಕಾರಿ ಮಹದೇವಪ್ಪ ಅವರನ್ನೊಳಗೊಂಡ ತಂಡ ರೈತರ ಜಮೀನಿಗೆ ತೆರಳಿ ಪರಿಶೀಲನೆ ನಡೆಸಿದೆ. ಪ್ರತಿ ರೈತರ ಜಮೀನುಗಳಿಗೆ ತೆರಳಿ ಬೆಳೆನಾಶ ಪರಿಶೀಲಿಸಿ ದಾಖಲಿಸಿ ಸಮಗ್ರವಾಗಿ ವರದಿ ತಯಾರಿಸಲಾಗುತ್ತಿದೆ. ಆ ಮೂಲಕ ರೈತರಿಗೆ ಬೆಳೆ ನಷ್ಟಕ್ಕೆ ಪರಿಹಾರ ನೀಡುವ ಭರವಸೆ ಸಿಕ್ಕಿದೆ. ಅದು ಏನೇ ಇರಲಿ, ಕಷ್ಟಪಟ್ಟು ಬೆಳೆದ ಬೆಳೆ ಕಣ್ಣಮುಂದೆಯೇ ನಾಶವಾಗುತ್ತಿರುವುದರಿಂದ ರೈತ ಕಣ್ಣೀರಿಡುವಂತಾಗಿದೆ.