"ಸೋತು ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು"
ಮಡಿಕೇರಿ, ಡಿಸೆಂಬರ್ 03: "ಸಾಲದ ಹೊರೆ, ಬೆಳೆ ನಷ್ಟ ಇಂಥ ಕಾರಣಗಳಿಗಾಗಿ ತನ್ನನ್ನು ನಂಬಿದ ಕುಟುಂಬವನ್ನೆಲ್ಲಾ ಬಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು" ಎಂದು ಹೇಳಿದ್ದಾರೆ ಕೃಷಿ ಸಚಿವ ಬಿ.ಸಿ.ಪಾಟೀಲ್.
ಗುರುವಾರ ಮಡಿಕೇರಿಯ ಪೊನ್ನಂಪೇಟೆ ಸಮೀಪದ ಕೃಷಿ ಕಾಲೇಜಿನಲ್ಲಿ "ಬಿದಿರು ಸಂಸ್ಕರಣೆ ಹಾಗೂ ಬಿದಿರು ಮೌಲ್ಯವರ್ಧನಾ ಘಟಕ"ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೃಷಿಯಿಂದ ಒಳ್ಳೆಯ ಬದುಕು ಕಟ್ಟಿಕೊಂಡವರು, ಯಶಸ್ಸು ಪಡೆದ ಹಲವು ಜನರು ನಮ್ಮ ಕಣ್ಣ ಮುಂದೆ ಇದ್ದಾರೆ. ಆದರೆ ಆತ್ಮಹತ್ಯೆ ಮಾಡಿಕೊಳ್ಳುವವರು ಹೇಡಿಗಳು" ಎಂದು ಹೇಳಿದ್ದಾರೆ.

"ಬದುಕಿ ಸಾಧಿಸಬೇಕು"
ಕಷ್ಟ ಬಂತೆಂದು ತಮ್ಮ ಪತ್ನಿ, ಮಕ್ಕಳನ್ನು ತೊರೆದು ಆತ್ಮಹತ್ಯೆಗೆ ಶರಣಾಗುವವರು ಹೇಡಿಯಂತೆ. ನಮ್ಮಲ್ಲಿ ಬದುಕಿ, ಸಮಸ್ಯೆಯಿಂದ ಹೊರಬಂದು ಸಾಧಿಸುವ ಗುಣವಿರಬೇಕು ಎಂದು ಸಲಹೆ ನೀಡಿದರು.

"ಅಭಿವೃದ್ಧಿಗೆ ಇಸ್ರೇಲ್ ಮಾದರಿ ಬೇಕಿಲ್ಲ"
ಇದೇ ಸಂದರ್ಭ ಕೃಷಿ ಪದ್ಧತಿಯ ಕುರಿತು ಮಾತನಾಡಿ, ಅರಣ್ಯ ಇದ್ದರೆ ಮಳೆ, ಮಳೆ ಬಂದಲ್ಲಿ ಸಮೃದ್ಧ ಬೆಳೆ, ಬೆಳೆ ಬೆಳೆದಲ್ಲಿ ಉತ್ತಮ ಬದುಕು ಎಂದು ವರ್ಣಿಸಿದರು. ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣುವ ನಿಟ್ಟಿನಲ್ಲಿ ಇಸ್ರೇಲ್ ಮಾದರಿ ಬೇಕಿಲ್ಲ, ಕೋಲಾರ ಜಿಲ್ಲೆಯ ಮಾದರಿ ಅಳವಡಿಸಿಕೊಂಡರೆ ರೈತರ ಆತ್ಮಹತ್ಯೆ ತಡೆಯಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮಿಶ್ರ ಕೃಷಿ ಕೈಗೊಳ್ಳಲು ರೈತರಿಗೆ ಸಲಹೆ
ಮಂಡ್ಯ ಜಿಲ್ಲೆಯಲ್ಲಿ ಭತ್ತ ಮತ್ತು ಕಬ್ಬನ್ನು ಪ್ರಧಾನ ಹಾಗೂ ವಾರ್ಷಿಕ ಕೃಷಿಯಾಗಿ ಬೆಳೆಯುತ್ತಾರೆ. ಆದರೆ ಕೋಲಾರ ಜಿಲ್ಲೆಯಲ್ಲಿ ಮಿಶ್ರ ಬೆಳೆ ಬೆಳೆಯುತ್ತಾರೆ. ಆದ್ದರಿಂದ ಕೃಷಿ ಜತೆಗೆ ಹೈನುಗಾರಿಕೆ, ಮೀನುಗಾರಿಕೆ, ತರಕಾರಿ ಹೀಗೆ ಮಿಶ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಸಚಿವ ಬಿ.ಸಿ.ಪಾಟೀಲ್ ಸಲಹೆ ನೀಡಿದರು.

ಕೃಷಿ ಸಚಿವರಿಗೆ ಸನ್ಮಾನ
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ವತಿಯಿಂದ ಕೃಷಿ ಸಚಿವ ಬಿ.ಸಿ.ಪಾಟೀಲರಿಗೆ ಕೊಡಗು ಜಿಲ್ಲೆಯ ಸಾಂಪ್ರದಾಯಿಕ ಉಡಿಕತ್ತಿ ನೀಡಿ ಸನ್ಮಾನಿಸಲಾಯಿತು. ಅರಣ್ಯ ಸಚಿವ ಆನಂದ್ ಸಿಂಗ್ ಮತ್ತು ಬಿ.ಸಿ.ಪಾಟೀಲ್ ಅವರು ಇದೇ ಸಂದರ್ಭ ಬಿದಿರು ಸಸ್ಯ ಕ್ಷೇತ್ರ ಉದ್ಘಾಟಿಸಿದರು. ಶಾಸಕರಾದ ಕೆ.ಜಿ.ಬೋಪಯ್ಯ ಹಾಗೂ ಇತರ ಪ್ರಮುಖರು ಇದ್ದರು.












Click it and Unblock the Notifications