ಮಳೆ ಕೊರತೆ ಜೊತೆ ಅಂತರ್ಜಲ ಸಮಸ್ಯೆ; ಬೆಳೆಗೆ ಟ್ಯಾಂಕರ್ ನೀರು ಹಾಯಿಸಿದ ರೈತ
ಚಾಮರಾಜನಗರ, ಸೆಪ್ಟೆಂಬರ್ 9: ನೀರಾವರಿ ಜಮೀನಿಲ್ಲದ ರೈತರು ಸಾಮಾನ್ಯವಾಗಿ ಮಳೆಯನ್ನು ನಂಬಿ ಬೆಳೆ ಬೆಳೆಯುವ ಪ್ರಯತ್ನ ಮಾಡುತ್ತಾರೆ. ಅದರಂತೆ ಈ ಬಾರಿ ಚಾಮರಾಜನಗರದ ಕೆಲವು ರೈತರು ಮಳೆಯನ್ನು ನಂಬಿ ಕೊತ್ತಂಬರಿ ಸೊಪ್ಪು ಸೇರಿದಂತೆ ಕೆಲವು ಬೆಳೆಯನ್ನು ಬೆಳೆದಿದ್ದರು.
Recommended Video
ಆದರೆ ಇದೀಗ ಮಳೆ ಬಾರದ ಕಾರಣ ಬೆಳೆಯನ್ನು ಉಳಿಸಿಕೊಳ್ಳುವುದೇ ರೈತರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಚಾಮರಾಜನಗರ ತಾಲೂಕಿನ ರಾಮಸಮುದ್ರ ವ್ಯಾಪ್ತಿಯಲ್ಲಿ ಅಂತರ್ಜಲದ ಸಮಸ್ಯೆ ಎದುರಾಗಿದೆ. ಈ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸದ ಕಾರಣ ಅಂತರ್ಜಲ ಮಟ್ಟ ತೀರಾ ಕುಸಿದಿದೆ. ಹೀಗಾಗಿ ಇಲ್ಲಿ ಕೊಳವೆ ಬಾವಿಯಿದ್ದರೂ ಸಾಕಷ್ಟು ನೀರು ಸಿಗುತ್ತಿಲ್ಲ. ಇದರಿಂದ ಬೆಳೆ ಬೆಳೆಯುವುದೇ ರೈತರಿಗೆ ಕಷ್ಟವಾಗುತ್ತಿದೆ.

ಬೆಳೆಗೆ ಟ್ಯಾಂಕರ್ ನೀರು ಹಾಯಿಸಿದ ರೈತ
ಇದೆಲ್ಲದರ ನಡುವೆ ಮಳೆ ಸಕಾಲದಲ್ಲಿ ಸುರಿಯಬಹುದೆಂಬ ನಂಬಿಕೆಯಿಂದ ರಾಮಸಮುದ್ರದ ಚಂದ್ರು ಎಂಬುವರು ಕೊತ್ತಂಬರಿ ಸೊಪ್ಪನ್ನು ಬೆಳೆದಿದ್ದರು. ಆದರೆ ಇದೀಗ ಮಳೆ ಕೈಕೊಟ್ಟಿರುವ ಕಾರಣ ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಯನ್ನು ರಕ್ಷಿಸಿಕೊಳ್ಳುವ ಸಲುವಾಗಿ ಟ್ಯಾಂಕರ್ ಮೂಲಕ ನೀರನ್ನು ತರಿಸಿ ಜಮೀನಿಗೆ ಹಾಯಿಸಿ ಬೆಳೆಯನ್ನು ರಕ್ಷಿಸುವ ಪ್ರಯತ್ನ ಮಾಡಿದ್ದರು.

ಮೂರು ಎಕರೆಯಲ್ಲಿ ಬೆಳೆದಿದ್ದ ಕೊತ್ತಂಬರಿ ಸೊಪ್ಪು
ರೈತ ಚಂದ್ರು ಅವರು ಮಳೆಯನ್ನು ನಂಬಿ ಕಳೆದ ಇಪ್ಪತ್ತು ದಿನದ ಹಿಂದೆ ಮೂರು ಎಕರೆಯಲ್ಲಿ ಕೊತ್ತಂಬರಿ ಸೊಪ್ಪು ಬೆಳೆದಿದ್ದರು. ಬೆಳೆ ಚೆನ್ನಾಗಿಯೇ ಬಂದಿತ್ತು, ಆದರೆ ಮಳೆ ಕೈ ಕೊಟ್ಟ ಕಾರಣ ಈಗ ಅದನ್ನು ಉಳಿಸಿಕೊಳ್ಳುವುದೇ ಸವಾಲಾಗಿದೆ. ಆದರೆ ಹೇಗಾದರೂ ಮಾಡಿ ರಕ್ಷಿಸಲೇಬೇಕೆಂಬ ಹಟಕ್ಕೆ ಬಿದ್ದ ಅವರು, ಟ್ಯಾಂಕರ್ ಮೂಲಕ ಬೆಳೆಗೆ ನೀರುಣಿಸುತ್ತಿದ್ದಾರೆ. ಇದರಿಂದ ಅವರಿಗೆ ಖರ್ಚು ದುಪ್ಪಟ್ಟಾಗುತ್ತಿದೆ. ಆದರೆ ಬೆಳೆ ತನ್ನ ಕಣ್ಣೆದುರೇ ಒಣಗಿ ನಾಶವಾಗದಿರಲಿ ಎಂಬ ಕಾರಣಕ್ಕೆ ಅದನ್ನು ಉಳಿಸಿಕೊಳ್ಳಲು ಹತ್ತು ಹಲವು ಯತ್ನಗಳನ್ನು ಮಾಡುತ್ತಲೇ ಇದ್ದಾರೆ.

ಕೆರೆಗಳಿಗೆ ನೀರು ತುಂಬಿಸದ ಸರ್ಕಾರ
ಹಾಗೆ ನೋಡಿದರೆ ರಾಮಸಮುದ್ರ ಸುತ್ತಮುತ್ತ ಸಾವಿರ ಅಡಿ ಆಳ ಕೊರೆಸಿದರೂ ಕೊಳವೆ ಬಾವಿಯಲ್ಲಿ ರೈತರಿಗೆ ನೀರು ಸಿಗುತ್ತಿಲ್ಲ. ಇಲ್ಲಿನ ಕೆರೆಗೆ ನೀರು ತುಂಬಿಸಿದರೆ ಅಂತರ್ಜಲ ಹೆಚ್ಚಾಗಬಹುದೆಂಬ ನಿರೀಕ್ಷೆಯಲ್ಲಿ ಕಳೆದ ಮೂರು ವರ್ಷದಿಂದಲೂ ಇಲ್ಲಿನ ರೈತರು ಛಾತಕ ಪಕ್ಷಿಯಂತೆ ಕಾಯುತ್ತಾ ಕುಳಿತಿದ್ದಾರೆ. ಆದರೆ ಕೆರೆಗೆ ನೀರು ತುಂಬುವ ಲಕ್ಷಣ ಮಾತ್ರ ಕಾಣಿಸುತ್ತಿಲ್ಲ.

ನೀರಿಲ್ಲದೇ ಪರಿತಪಿಸುತ್ತಿರುವ ರೈತರು
ಹಾಗಾಗಿ ನೀರಿಲ್ಲದೆ ಪರಿತಪಿಸುತ್ತಿರುವ ಇಲ್ಲಿನ ರೈತರು ಮಳೆಯನ್ನೇ ನಂಬಿ ಬೆಳೆ ಬೆಳೆಯುವ ಅನಿವಾರ್ಯ ಸ್ಥಿತಿಗೆ ಬಂದಿದ್ದಾರೆ. ಇದೀಗ ಮಳೆಯನ್ನು ನಂಬಿ ಬೆಳೆ ಬೆಳೆಯಲು ಮುಂದಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಈ ನಡುವೆ ರೈತರು ಟ್ಯಾಂಕರ್ ಮೂಲಕ ನೀರನ್ನು ಹೊರಗಿನಿಂದ ತಂದು ಬೆಳೆಗೆ ಹಾಯಿಸುತ್ತಿದ್ದರೆ. ಈಚೆಗೆ ಸ್ವಲ್ಪ ಮಳೆಯಾಗಿದ್ದು, ರೈತರಲ್ಲಿ ಒಂದಿಷ್ಟು ಆಶಾ ಭಾವನೆ ತಂದಿದೆ.












Click it and Unblock the Notifications