ಕೃಷಿ ಕಾಯ್ದೆಗಳ ತಿದ್ದುಪಡಿಗೆ ಕೇಂದ್ರ ಸರ್ಕಾರ ಪ್ರಸ್ತಾವ: ರೈತರಿಂದ ತಿರಸ್ಕಾರ
ನವದೆಹಲಿ, ಡಿಸೆಂಬರ್ 5: ನೂತನ ಕೃಷಿ ಕಾಯ್ದೆಗಳಿಗೆ ಕೆಲವು ತಿದ್ದುಪಡಿಗಳನ್ನು ಮಾಡಲು ಸಿದ್ಧ ಇರುವುದಾಗಿ ಕೇಂದ್ರ ಸರ್ಕಾರ ಮುಂದಿರಿಸಿದ ರಾಜಿ ಸಂಧಾನದ ಆಫರ್ ಅನ್ನು ರೈತ ಮುಖಂಡರು ತಿರಸ್ಕರಿಸಿದ್ದಾರೆ. ಪ್ರತಿಭಟನೆ ಶುರುವಾದ ಹತ್ತು ದಿನಗಳಲ್ಲಿ ಮೂರನೇ ಬಾರಿ ನಡೆಯುತ್ತಿರುವ ಸಭೆಯಲ್ಲಿ ಕೇಂದ್ರದ ಮೂವರು ಸಚಿವರೊಂದಿಗೆ ನಡೆದ ಮಾತುಕತೆಯಲ್ಲಿ ರೈತರು, ಮೂರೂ ಕಾಯ್ದೆಗಳನ್ನು ಸಂಪೂರ್ಣವಾಗಿ ಹಿಂದಕ್ಕೆ ಪಡೆದುಕೊಳ್ಳುವಂತೆ ತಮ್ಮ ಬೇಡಿಕೆಗೆ ಪಟ್ಟು ಹಿಡಿದರು.
ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ನಿರ್ಣಾಯಕ ಸಂಧಾನ ಸಭೆಯಿಂದ ಹೊರನಡೆಯುವುದಾಗಿ 40 ರೈತ ಸಂಘಟನೆಗಳ ಪ್ರತಿನಿಧಿಗಳು ಎಚ್ಚರಿಕೆ ನೀಡಿದರು. ಶನಿವಾರ ಮಧ್ಯಾಹ್ನ ನಡೆದ ಸಭೆಯಲ್ಲಿ ಮೂರು ಕಾಯ್ದೆಗಳಿಗೆ ತಿದ್ದುಪಡಿ ತರುವ ಸಂಬಂಧ ಕೇಂದ್ರ ಸರ್ಕಾರ ಲಿಖಿತ ಪ್ರಸ್ತಾವ ಸಲ್ಲಿಸಿತು.
ಕೃಷಿ ಮಸೂದೆ ವಿರೋಧಿಸಿ ಡಿ.8 ರಂದು ಭಾರತ ಬಂದ್: ಎಡ ಪಕ್ಷಗಳ ಬೆಂಬಲ
ಕಾಯ್ದೆಗಳನ್ನು ರದ್ದುಪಡಿಸಬೇಕೆಂಬ ರೈತರ ಬೇಡಿಕೆಗಳನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರ, ಬೇಕಿದ್ದರೆ ಕಾಯ್ದೆಗಳಿಗೆ ತಿದ್ದುಪಡಿ ಮಾಡುವುದಾಗಿ ಹೇಳಿತು. ಇದಕ್ಕೆ ಜಗ್ಗದ ರೈತರು, ಕೃಷಿ ಕಾಯ್ದೆಗಳನ್ನು ರದ್ದುಗೊಳಿಸದೆ ಬೇರೆ ಯಾವ ದಾರಿಯೂ ಇಲ್ಲ ಎಂದು ಮತ್ತೆ ಪ್ರತಿಪಾದಿಸಿದರು.
ಈ ಬಾರಿ ಸಭೆಯ ವೇಳೆಯೂ ರೈತರು ಕೇಂದ್ರ ಸರ್ಕಾರದ ಆತಿಥ್ಯವನ್ನು ನಿರಾಕರಿಸಿದರು. ತಾವೇ ತಂದಿದ್ದ ಟೀ, ತಿನಿಸುಗಳನ್ನು ಸೇವಿಸಿದರು.
#WATCH Delhi: Farmer leaders, present at the fifth round of talks with Central Government, have food that they had carried to the venue.
— ANI (@ANI) December 5, 2020
A Kar Sewa vehicle that carried food for them arrived here earlier today. They'd got their own food even during 4th round of talks on Dec 3. https://t.co/hDP8cwzSGJ pic.twitter.com/XSR6m2lljS
ರೈತ ಸಂಘಟನೆಗಳು ದೇಶವ್ಯಾಪಿ ಕರೆ ನೀಡಿರುವ ಡಿಸೆಂಬರ್ 8ರ ಭಾರತ್ ಬಂದ್ಗೆ ಹತ್ತು ಕೇಂದ್ರ ವ್ಯಾಪಾರ ಒಕ್ಕೂಟಗಳು ಬೆಂಬಲ ಘೋಷಿಸಿವೆ. ಇನ್ನೊಂದೆಡೆ ಗ್ರೇಟರ್ ನೋಯ್ಡಾದ ಯಮುನಾ ಎಕ್ಸ್ಪ್ರೆಸ್ವೇನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಗುಂಪೊಂದನ್ನು ಪೊಲೀಸರು ಬಂಧಿಸಿದ್ದಾರೆ. ದೆಹಲಿಯತ್ತ ತೆರಳುತ್ತಿದ್ದ ರೈತರು ಬ್ಯಾರಿಕೇಡ್ಗಳನ್ನು ಮುರಿಯುವ ಪ್ರಯತ್ನದಲ್ಲಿದ್ದಾಗ ಈ ಬಂಧನ ನಡೆದಿದೆ.