ಶುಕ್ರವಾರ ಬೆಂಗಳೂರಲ್ಲಿ ರೈತರ ಬೃಹತ್ ಸಮಾವೇಶ
ಬೆಂಗಳೂರು, ಮೇ 26 : ಬೆಂಗಳೂರು ಮತ್ತೊಮ್ಮೆ ರೈತರ ಬೃಹತ್ ಹೋರಾಟಕ್ಕೆ ಸಾಕ್ಷಿಯಾಗಲಿದೆ. ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಮೇ 26ರಂದು ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಆಯೋಜಿಸಿದೆ.
ಮೇ 27ರ ಶುಕ್ರವಾರ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೆಳಗ್ಗೆ 11.30ಕ್ಕೆ ಬೃಹತ್ ರೈತ ಸಮಾವೇಶ ನಡೆಯಲಿದೆ. ಮಹಾತ್ಮ ಗಾಂಧಿ ಅವರ ಮೊಮ್ಮಗಳಾದ ತಾರಾಗಾಂಧಿ ಅವರು ಈ ಬೃಹತ್ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. [ತೋಟಗಳಿಗೆ ನೀರಿಲ್ಲ, ಅಡಿಕೆ ಬೆಳೆಗಾರರು ಕಂಗಾಲು]

ರೈತರು ಮತ್ತು ಹಳ್ಳಿಯವರನ್ನು ಕಡೆಗಣಿಸಿ ನಿದ್ದೆ ಮಾಡುತ್ತಿರುವ ಸರ್ಕಾರಗಳನ್ನು ಬಡಿದೆಬ್ಬಿಸಲು ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧ ಜಿಲ್ಲೆ ಮತ್ತು ಬೇರೆ ರಾಜ್ಯಗಳಿಂದ ಆಗಮಿಸುವ ಸಾವಿರಾರು ರೈತರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. [ರೈತರ ಮೇಲಿನ ಲಾಠಿ ಚಾರ್ಜ್ ಖಂಡಿಸಿದ ಒಕ್ಕಲಿಗರ ಸಂಘ]
ಬೃಹತ್ ಸಮಾವೇಶದಿಂದಾಗಿ ಶುಕ್ರವಾರ ಬಸವನಗುಡಿ ಸುತ್ತ-ಮುತ್ತ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ["ನೀರು ಕೇಳಿದವರ ರಕ್ತ ಬಸಿದ ನಿಮಗೆ ನಾಚಿಕೆಯಾಗಲ್ವಾ"?]
ರೈತರ ಹಕ್ಕೊತ್ತಾಯಗಳು
* ರೈತರ ಎಲ್ಲಾ ಸಾಲಗಳನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು, ಹೊಸ ಸಾಲ ನೀಡಬೇಕು
* ಬರಗಾಲವನ್ನು ತಡೆಗಟ್ಟುವ ನೀರಾವರಿ ಯೋಜನೆಗಳನ್ನು ಜಾರಿಗೆ ತರಬೇಕು
* ಕನಿಷ್ಠ ಬೆಂಬಲ ಬೆಲೆ ರದ್ದು ಮಾಡಿ, ಯೋಗ್ಯ ಬೆಲೆಯನ್ನು ನಿಗದಿ ಮಾಡಬೇಕು
* ರೈತರ ಸಾಲ, ಕಂದಾಯ, ವಿದ್ಯುಚ್ಛಕ್ತಿ ಬಿಲ್ ರದ್ದಾಗಬೇಕು
* ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಕೃಷಿ ಕುಟುಂಬಕ್ಕೆ ವಿಸ್ತರಣೆ ಮಾಡಬೇಕು
* ಹಾಲು, ರೇಷ್ಮೆ, ತೆಂಗು, ತಾಳೆಗೆ ಪರಿಷ್ಕೃತ ಬೆಲೆ ಘೋಷಣೆಯಾಗಬೇಕು
* ಗ್ರಾಮೀಣ ಪ್ರದೇಶದಲ್ಲಿ ಕಡ್ಡಾಯವಾಗಿ ಶೌಚಾಲಯ ನಿರ್ಮಿಸುವ ಕಾನೂನು ಜಾರಿಗೆ ಬರಬೇಕು
* ಕೃಷಿ ಮಾರುಕಟ್ಟೆ ಇ ಟ್ರೇಡಿಂಗ್ ವಿಫಲಗೊಂಡಿದ್ದು ತಕ್ಷಣ ಸುಧಾರಿತ ನೀತಿ ಜಾರಿಗೆ ತರಬೇಕು
* ಕಬ್ಬಿನ ಬಾಕಿ ನೀಡಬೇಕು
ಮಾರ್ಚ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ರೈತರ ಬೃಹತ್ ಹೋರಾಟ ನಡೆದಿತ್ತು. ಬಯಲುಸೀಮೆಯ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಶಾಶ್ವತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸಿದ್ದರು. ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದ ರೈತರ ಮೇಲೆ ಲಾಠಿ ಪ್ರಹಾರ ನಡೆದಿತ್ತು. [ಅನ್ನದಾತನ ಮೇಲೆ ಲಾಠಿ ಪ್ರಹಾರ: ಎಎಪಿಯಿಂದ ಖಂಡನೆ]












Click it and Unblock the Notifications