ವಿವಿಧ ರೈತಾಪಿ ಸಂಘಟನೆಗಳಿಂದ ಭಾರತ್ ಬಂದ್ ಗೆ ಕರೆ
ನವದೆಹಲಿ, ಜೂ 2 (ಎಎನ್ಐ) : ರಾಷ್ಟ್ರೀಯ ಕಿಸಾನ್ ಮಜ್ದೂರ್ ಮಹಾಸಂಘ ಮತ್ತು 130ಕ್ಕೂ ಹೆಚ್ಚು ರೈತಾಪಿ ಸಂಘಟನೆಗಳು ಆರಂಭಿಸಿರುವ ಹತ್ತುದಿನಗಳ ಮುಷ್ಕರದ ಕೊನೆಯ ದಿನ, ' ಭಾರತ್ ಬಂದ್' ಕರೆನೀಡಲು ನಿರ್ಧರಿಸಿವೆ.
ಈ ಸಂಬಂಧ ಭೋಪಾಲ್ ನಲ್ಲಿ ಮಾತನಾಡುತ್ತಿದ್ದ ಕಿಸಾನ್ ಮಜ್ದೂರ್ ಮಹಾಸಂಘದ ಅಧ್ಯಕ್ಷ ಶಿವಕುಮಾರ್ ಶರ್ಮಾ, ಜೂನ್ 10ರ ಭಾನುವಾರದಂದು ದೇಶಾದ್ಯಂತ್ ಬಂದ್ ಗೆ ಕರೆನೀಡಲಾಗಿದೆ. ಅಂದು ಎಲ್ಲಾ ವ್ಯಾಪಾರಸ್ಥರು ಬೆಳಗ್ಗೆಯಿಂದ ಮಧ್ಯಾಹ್ನ ಎರಡು ಗಂಟೆಯವರೆಗೆ ಬಂದ್ ಗೆ ಸಹಕರಿಸುವ ಮೂಲಕ, ನಮ್ಮ ಹೋರಾಟಕ್ಕೆ ಬಲತುಂಬಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಕರ್ನಾಟಕ ಸೇರಿದಂತೆ 22ರಾಜ್ಯಗಳಲ್ಲಿ ಹತ್ತುದಿನಗಳ ಮುಷ್ಕರವನ್ನು ರೈತ ಸಂಘಟನೆಗಳು ಜೂನ್ ಒಂದರಂದು ಆರಂಭಿಸಿವೆ. ಈ ಅವಧಿಯಲ್ಲಿ ಹಳ್ಳಿಗಳಿಂದ ನಗರಕ್ಕೆ ತರಕಾರಿ, ಹಾಲು, ದಿನಸಿ ಉತ್ಪನ್ನಗಳ ಪೂರೈಕೆ ನಿಲ್ಲಿಸುವಂತೆ ಸೂಚಿಸಲಾಗಿದೆ ಎಂದು ಶರ್ಮಾ ಹೇಳಿದ್ದಾರೆ.

ಸ್ವಾಮಿನಾಥನ್ ಆಯೋಗದ ಅನುಷ್ಟಾನಕ್ಕೆ ಒತ್ತಾಯಿಸಿ ಪಂಜಾಬ್ ನಲ್ಲಿ ರೈತರು ಹಾಲು, ತರಕಾರಿಗಳನ್ನು ರಸ್ತೆಗೆ ಸುರಿದು ಶುಕ್ರವಾರ ಪ್ರತಿಭಟನೆ ನಡೆಸಿದ್ದಾರೆ. ದೇಶಾದ್ಯಂತ ಆರಂಭವಾಗಿರುವ ರೈತರ ಪ್ರತಿಭಟನೆಯ ಕಾವು ಹೆಚ್ಚುತ್ತಿದ್ದು, ದೈನಂದಿನ ಪೂರೈಕೆಗಳಲ್ಲಿ ವ್ಯತ್ಯಯದ ಆತಂಕ ಆರಂಭವಾಗಿದೆ.
ಹತ್ತು ದಿನದ ಮುಷ್ಕರದ ವೇಳೆ ಮಂಡಿ, ಸಗಟು ಮತ್ತು ಎಪಿಎಂಸಿ ಮಾರುಕಟ್ಟೆಯನ್ನೂ ಬಂದ್ ಮಾಡುವಂತೆ ಒತ್ತಡ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ, ಮುಂದಿನ ಏಳೆಂಟು ದಿನ ಪದಾರ್ಥಗಳ ಬೆಲೆ ಗಗನಕ್ಕೇರುವ ಸಾಧ್ಯತೆಯಿದೆ.
ಸಂಪೂರ್ಣ ಸಾಲ ಮನ್ನಾ, ಉತ್ಪನ್ನಗಳಿಗೆ ಅಧಿಕ ಬೆಂಬಲ ಬೆಲೆ ನಿಗದಿ, ರೈತರ ಉತ್ಪನ್ನಗಳಿಗೆ ಹೆಚ್ಚು ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು, ರೈತಾಪಿ ಸಂಘಟನೆಗಳು ಮುಷ್ಕರ ನಡೆಸುತ್ತಿವೆ.












Click it and Unblock the Notifications