ನರೇಂದ್ರ ಮೋದಿ ತುಮಕೂರು ಭೇಟಿ ವಿರೋಧಿಸಿದ ರೈತರು
ತುಮಕೂರು, ಜನವರಿ 01: ಪ್ರಧಾನಿ ನರೇಂದ್ರ ಮೋದಿ ತುಮಕೂರು ಭೇಟಿಯನ್ನು ರೈತರು ವಿರೋಧಿಸಿದ್ದಾರೆ. ಗುರುವಾರ ಮೋದಿ ಕರ್ನಾಟಕಕ್ಕೆ ಆಗಮಿಸಲಿದ್ದು, ಜನವರಿ 2 ಮತ್ತು 3ರಂದು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ನರೇಂದ್ರ ಮೋದಿ ತುಮಕೂರಿಗೆ ಜನವರಿ 2ರಂದು ಭೇಟಿ ನೀಡಲಿದ್ದಾರೆ. ಕಿಸಾನ್ ಸಮ್ಮನ್ ಯೋಜನೆ ಅನುಷ್ಠಾನ ಹಾಗೂ ಕೃಷಿ ಕರ್ಮಣ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಬಳಿಕ ರೈತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ರೈತರು ಪ್ರಧಾನಿ ನರೇಂದ್ರ ಮೋದಿ ಭೇಟಿಯನ್ನು ವಿರೋಧಿಸಿದ್ದಾರೆ. ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಕಪ್ಪುಬಟ್ಟೆ ಧರಿಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಮೋದಿ ಭೇಟಿಯ ಹಿನ್ನಲೆಯಲ್ಲಿ ತುಮಕೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
"ಡಾ. ಸ್ವಾಮಿನಾಥನ್ ವರದಿ ಅನುಷ್ಠಾನಕ್ಕೆ ವಿಳಂಬ ನೀತಿ ಅನುಸರಿಸುತ್ತಿರುವ ಮೋದಿ ಸರ್ಕಾರದ ನಡೆ ಖಂಡಿಸಿ ಪ್ರಧಾನಿ ಕಾರ್ಯಕ್ರಮದ ವೇಳೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಗುತ್ತದೆ" ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
"ಪ್ರಧಾನಿ ಮೋದಿ ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ರೈತ ಪರ ಕಾರ್ಯಕ್ರಮ ಮಾಡಿಲ್ಲ. ಕಾರ್ಪೋರೇಟ್ ಕುಳಗಳ ಪರ ಮಿಡಿಯುವ ಮೋದಿ ಮನಸ್ಸು ರೈತರಿಗಾಗಿ ಎಂದೂ ಮಿಡಿದಿಲ್ಲ. ಬೆಳೆದ ಬೆಳೆಗೆ ಸೂಕ್ತ ಬೆಲೆ ನೀಡುವ ಭರವಸೆಯೂ ಅನುಷ್ಠಾನವಾಗಿಲ್ಲ" ಎಂದು ದೂರಿದರು.
ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ನಾವು ಧಿಕ್ಕಾರವನ್ನು ಕೂಗುವುದಿಲ್ಲ. ಜಿಲ್ಲಾಧಿಕಾರಿ ಕಚೇರಿಯಿಂದ ಕಾರ್ಯಕ್ರಮ ನಡೆಯುವ ವೇದಿಕೆ ತನಕ ಜಾಥಾ ನಡೆಸಿ ಪ್ರಧಾನಿಗೆ ಮನವಿ ಸಲ್ಲಿಸಲಿದ್ದೇವೆ ಎಂದು ರೈತರು ಹೇಳಿದ್ದಾರೆ.












Click it and Unblock the Notifications