ಜ.12 ರಿಂದ ಮಡಿಕೇರಿಯಲ್ಲಿ ರೈತಸಂತೆ: ಉಳುವ ಯೋಗಿಗೆ ವೇದಿಕೆ
ಮಡಿಕೇರಿ, ಜನವರಿ 06: ಕೊಡಗಿನ ಕೃಷಿಕರ ಅನುಕೂಲಕ್ಕಾಗಿ ಮೊದಲ ಬಾರಿಗೆ ಮಡಿಕೇರಿ ನಗರದ ಮಡಿಕೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ರೈತ ಸಂತೆಯನ್ನು ಜ.12ರಿಂದ ಆರಂಭಿಸಲಾಗುತ್ತಿದೆ.
ಜಿಲ್ಲೆಯಲ್ಲಿ ವಾಣಿಜ್ಯ ಬೆಳೆಗಳನ್ನೇ ಬೆಳೆಯುತ್ತಿರುವ ರೈತರು ತರಕಾರಿ ಸೇರಿದಂತೆ ಆಹಾರ ಬೆಳೆಗಳನ್ನು ಬೆಳೆಯುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಕಾರಣ ಮಾರುಕಟ್ಟೆಯ ಕೊರತೆ ಎಂದರೆ ತಪ್ಪಾಗಲಾರದು. ಇದೀಗ ರೈತ ಸಂತೆಯನ್ನು ಆರಂಭಿಸಿದ್ದೇ ಆದರೆ ಜಿಲ್ಲೆಯ ರೈತರು ಮಧ್ಯವರ್ತಿಗಳ ಹಾವಳಿಯಿಲ್ಲದೆ ತಾವು ಬೆಳೆದ ತರಕಾರಿ ಸೇರಿದಂತೆ ಎಲ್ಲ ರೀತಿಯ ಉತ್ಪನ್ನಗಳನ್ನು ಮಾರಾಟ ಮಾಡಲು ಸಾಧ್ಯವಾಗಲಿದೆ.
ಮಡಿಕೇರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ನಗರದ ಮೈಸೂರು ರಸ್ತೆಯ ಕೆಎಸ್ ಆರ್ಟಿಸಿ ಡಿಪೋ ಮುಂಭಾಗದಲ್ಲಿರುವ ಮಡಿಕೇರಿ ಎಪಿಎಂಸಿಯ ಆವರಣದಲ್ಲಿ ರೈತ ಸಂತೆ ನಡೆಸಲು ಅವಕಾಶ ಮಾಡಿಕೊಟ್ಟಿದ್ದು, ಜ.12ರಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್. ಸೀತಾರಾಂ ಅವರು ಚಾಲನೆಯನ್ನು ನೀಡಲಿದ್ದಾರೆ. ಈ ಸಂತೆಯಲ್ಲಿ ಜಿಲ್ಲೆಯ ಎಪಿಎಂಸಿಯಲ್ಲಿ ಸದಸ್ಯರಾಗಿರುವ ರೈತರಿಗೆ ಮಾತ್ರ ಅವಕಾಶ ನೀಡಲಾಗಿದೆ. ಜಿಲ್ಲೆಯಲ್ಲಿ ಸುಮಾರು 20 ಸಾವಿರ ಸದಸ್ಯರಿದ್ದು, ಅವರು ಇದರ ಅನುಕೂಲವನ್ನು ಬಳಸಿಕೊಳ್ಳಬಹುದಾಗಿದೆ.

ಜ.12ರ ಬಳಿಕ ಪ್ರತಿ ಶುಕ್ರವಾರ ಇಲ್ಲಿ ಸಂತೆ ನಡೆಯಲಿದೆ. ಈಗಾಗಲೇ ರೈತರಿಗೆ ತಮ್ಮ ಉತ್ಪನ್ನ ಮಾರಾಟ ಮಾಡಲು ಅನುಕೂಲವಾಗುವಂತೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಲಾಗಿದೆ. ಈ ಹಿಂದೆಯೇ ಇಲ್ಲಿ ಸುಸಜ್ಜಿತವಾದ ಕಟ್ಟಡವನ್ನು ನಿರ್ಮಿಸಲಾಗಿದ್ದು, 3.50 ಲಕ್ಷ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ 5ಲಕ್ಷ ರೂ ವೆಚ್ಚದಲ್ಲಿ ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕ ಶೌಚಾಲಯವನ್ನು ನಿರ್ಮಿಸಲಾಗಿದೆ. ಇದಲ್ಲದೆ ರೈತ ಸಂತೆಗೆ ಹಿಂದಿನ ದಿನವೇ ಬರುವ ರೈತರಿಗೆ ಅನುಕೂಲವಾಗುವಂತೆ ವಾಸ್ತವ್ಯದ ವ್ಯವಸ್ಥೆಯನ್ನು ಕೂಡ ಮಾಡಲಾಗುತ್ತಿದೆ.
ಶುಕ್ರವಾರದ ರೈತ ಸಂತೆಯಲ್ಲಿ ಜಿಲ್ಲೆಯ ರೈತರು ತಾವು ಬೆಳೆದ ತರಕಾರಿ ಸೇರಿದಂತೆ ಯಾವುದೇ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶವಿದ್ದು, ಸದ್ಯ ಇಲ್ಲಿನ ಮಾರುಕಟ್ಟೆಯಲ್ಲಿ ಅಂದಾಜು 30 ರಿಂದ 40 ರೈತರು ತಾವು ಬೆಳೆದ ಕೃಷಿ ಉತ್ಪನ್ನವನ್ನು ಮಾರಾಟ ಮಾಡಬಹುದಾಗಿದೆ.
ಮಡಿಕೇರಿಯಲ್ಲಿ ಈಗಾಗಲೇ ಪ್ರತಿ ಶುಕ್ರವಾರ ಸಂತೆ ನಡೆಯುತ್ತಿದ್ದು, ಇಲ್ಲಿ ಕೊಡಗಿನವರಿಗಿಂತ ಹೊರಗಿನಿಂದ ಬಂದು ವ್ಯಾಪಾರ ಮಾಡುವವರೇ ಹೆಚ್ಚಾಗಿದ್ದು, ಜಿಲ್ಲೆಯ ರೈತರು ರಸ್ತೆ ಬದಿಯಲ್ಲೋ, ಮರದ ಕೆಳಗೋ ವ್ಯಾಪಾರ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ರೈತ ಸಂತೆ ಆರಂಭವಾಗಿದ್ದೇ ಆದರೆ ಜಿಲ್ಲೆಯ ನೈಜ ರೈತರು ನೆಮ್ಮದಿಯಾಗಿ ತಾವು ಬೆಳೆದ ಬೆಳೆಯನ್ನು ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರವಾಗಿ ಗ್ರಾಹಕರಿಗೆ ತಲುಪಿಸಬಹುದಾಗಿದೆ. ಜತೆಗೆ ಜನರಿಗೆ ತಾಜಾ ತರಕಾರಿಗಳು ದೊರೆಯಲಿವೆ.
ಹಿಂದೆ ಕಾಫಿ, ಏಲಕ್ಕಿ, ಭತ್ತ ಮಾತ್ರವಲ್ಲದೆ, ತರಕಾರಿಯನ್ನು ಹೆಚ್ಚಿನ ರೈತರು ತಮ್ಮ ಸಾಮಥ್ರ್ಯಕ್ಕೆ ತಕ್ಕಂತೆ ಬೆಳೆಯುತ್ತಿದ್ದರು. ಹೀಗೆ ಬೆಳೆಯುತ್ತಿದ್ದ ತರಕಾರಿಯನ್ನು ಮಾರಾಟ ಮಾಡಲು ಸೂಕ್ತ ಸ್ಥಳವಿಲ್ಲದೆ ಹಾಗೂ ಮಧ್ಯವರ್ತಿಗಳ ಹಾವಳಿಯಿಂದ ಅಷ್ಟೋ ಇಷ್ಟೋ ಬೆಲೆಗೆ ನೀಡಿ ಸಪ್ಪೆ ಮೋರೆ ಮಾಡಿಕೊಂಡು ಹೋಗುತ್ತಿದ್ದರು. ತಮಗೆ ನಷ್ಟವಾಗುತ್ತಿದ್ದರಿಂದ ಅದರ ಉಸಾಬರಿಯೇ ಬೇಡವೆಂದು ಹೆಚ್ಚಿನವರು ತರಕಾರಿ ಬೆಳೆಯುವುದನ್ನೇ ಬಿಟ್ಟು ಬಿಟ್ಟಿದ್ದರು. ಇದೀಗ ಎಪಿಎಂಸಿಯಿಂದಲೇ ರೈತ ಸಂತೆ ಆರಂಭಿಸುತ್ತಿದ್ದು, ರೈತರು ಯಾವ ರೀತಿಯಲ್ಲಿ ಇದನ್ನು ಸದುಪಯೋಗಿಸಿಕೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.












Click it and Unblock the Notifications