ಸೌರ ವಿದ್ಯುತ್ ತಯಾರಿಸಿ, ಸರ್ಕಾರಕ್ಕೆ ಮಾರಿ!
ಬೆಂಗಳೂರು, ಸೆ.8 : ಕರ್ನಾಟಕದಲ್ಲಿ ರೈತರು ಇನ್ನು ಮುಂದೆ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಿ, ಅದನ್ನು ಸರ್ಕಾರಕ್ಕೆ ಮಾರಾಟ ಮಾಡಬಹುದು. ಸರ್ಕಾರ ಜಾರಿಗೆ ತರಲು ಹೊರಟಿರುವ ಸೂರ್ಯ ರೈತ ಯೋಜನೆಯಡಿ ಇದಕ್ಕೆ ಅವಕಾಶ ಕಲ್ಪಿಸಲಾಗಿದೆ. ರಾಜ್ಯದಲ್ಲಿ ಸೌರಶಕ್ತಿ ಬಳಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸರ್ಕಾರ ಸೂರ್ಯ ರೈತ ಯೋಜನೆಯನ್ನು ಜಾರಿಗೊಳಿಸುತ್ತಿದೆ.
ಸೂರ್ಯ ರೈತ ಯೋಜನೆ ಜಾರಿಗೆ ತರುವ ಬಗ್ಗೆ ಈಗಾಗಲೇ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಈ ಯೋಜನೆಯಡಿ ರೈತರು ಐದು ಎಚ್ಪಿ ಸೋಲಾರ್ ಪಂಪ್ಸೆಟ್ ಆಳವಡಿಸಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಆದರಿಂದ ಉತ್ಪಾದನೆಯಾಗುವ ವಿದ್ಯುತ್ನಲ್ಲಿ ತಮ್ಮ ಕೃಷಿ ಚಟುವಟಿಕೆಗೆ ಅಗತ್ಯವಾದಷ್ಟು ಬಳಕೆ ಮಾಡಿಕೊಂಡು ಹೆಚ್ಚುವರಿ ವಿದ್ಯುತ್ತನ್ನು ಪ್ರತಿ ಯೂನಿಟ್ಗೆ 9.56 ರೂ. ದರದಲ್ಲಿ ರೈತರು ಸರ್ಕಾರಕ್ಕೆ ಮಾರಾಟ ಮಾಡಬಹುದಾಗಿದೆ.
ಇತರರಿಗೂ ಅವಕಾಶ : ಸರ್ಕಾರ ಕೇವಲ ರೈತರಿಗೆ ಮಾತ್ರ ಅವಕಾಶ ನೀಡುವುದಿಲ್ಲ. ಸರ್ಕಾರಿ ಹಾಗೂ ಖಾಸಗಿ ಶಾಲೆ, ಆಸ್ಪತ್ರೆ, ವಾಣಿಜ್ಯ ಸಂಕೀರ್ಣ ಮತ್ತು ಮನೆಗಳ ಮೇಲೆ 'ರೂಫ್ ಟಾಪ್ ಸೋಲಾರ್' ವಿದ್ಯುತ್ ಘಟಕ ಅಳವಡಿಸಲು ಈ ಯೋಜನೆಯಡಿ ಅನುಮತಿ ನೀಡಲಿದೆ. ಕೃಷಿ ಪಂಪ್ಸೆಟ್ ರೀತಿಯಲ್ಲಿ ಕಟ್ಟಡದ ಮಾಲಿಕರು ಅಲ್ಲಿ ಉತ್ಪಾದಿಸುವ ವಿದ್ಯುತ್ನಲ್ಲಿ ತಮಗೆ ಬೇಕಾದಷ್ಟು ಬಳಸಿ ಉಳಿದದ್ದು ವಿದ್ಯುತ್ ಮಾರಾಟ ಮಾಡಬಹುದು.

3 ಸಾವಿರ ಪಂಪ್ ಸೆಟ್ ಗುರಿ : ರಾಜ್ಯದಲ್ಲಿ ಈ ವರ್ಷ ಸೂರ್ಯರೈತ ಯೋಜನೆಯಡಿ ಮೂರು ಸಾವಿರ ಸೋಲಾರ್ ಪಂಪ್ ಸೆಟ್ ಆಳವಡಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ. ಪಂಪ್ ಸೆಟ್ ಅಳವಡಿಕೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಿಂದ ಶೇ 90 ರಷ್ಟು ಸಬ್ಸಿಡಿ ದೊರೆಯುತ್ತದೆ. ರೈತರು 1 ಲಕ್ಷ ರೂ. ಹಣವನ್ನು ವ್ಯಯಿಸಬೇಕಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಉಚಿತವಾಗಿ ಸಂಪರ್ಕ ಕಲ್ಪಿಸಲಾಗುತ್ತದೆ. [ಕರ್ನಾಟಕದಲ್ಲಿ ಹರ್ಭಜನ್ 'ಸೌರಘಟಕ' ಸ್ಥಾಪನೆ]
ಕೇಂದ್ರ ಸರ್ಕಾರವೂ ಟಾರ್ಗೆಟ್ ನೀಡಿದೆ : ಸೌರಶಕ್ತಿ ಬಳಕೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರದ ಸಹಕಾರದಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಕೇಂದ್ರ ಸರ್ಕಾರ ದೇಶದಲ್ಲಿ ಈ ವರ್ಷ 1 ಲಕ್ಷ ಸೋಲಾರ್ ಪಂಪ್ ಸೆಟ್ ಅಳವಡಿಸುವ ಗುರಿಯನ್ನು ಹಾಕಿಕೊಂಡಿದೆ. ಇದರಲ್ಲಿ ರಾಜ್ಯಕ್ಕೆ 10 ಸಾವಿರ ಗುರಿ ನಿಗದಿ ಪಡಿಸಲಾಗಿದ್ದು, ರಾಜ್ಯ ಸರ್ಕಾರ 3 ಸಾವಿರ ಪಂಪ್ ಸೆಟ್ ಅಳವಡಿಕೆ ಗುರಿಯನ್ನು ಹೊಂದಿದೆ.[ರೈತರಿಗೆ ಸರ್ಕಾರದ ಕೊಡುಗೆ ಕೃಷಿಭಾಗ್ಯ]
ವಿದ್ಯುತ್ ಉಳಿತಾಯವಾಗುತ್ತದೆ : ಕರ್ನಾಟಕ ರಾಜ್ಯದಲ್ಲಿ ಸುಮಾರು 21.5 ಲಕ್ಷ ಕೃಷಿ ಪಂಪ್ ಸೆಟ್ಗಳಿವೆ ಎಂದು ಅಂದಾಜಿಸಲಾಗಿದ್ದು ಸರ್ಕಾರ ಇವುಗಳಿಗೆ 10 ಎಚ್ಪಿ ವರೆಗೆ ಉಚಿತ ವಿದ್ಯುತ್ ನೀಡುತ್ತಿದೆ. ಇದರಿಂದ ವಿದ್ಯುತ್ ಬೇಡಿಕೆಯು ಹೆಚ್ಚಾಗುತ್ತಿದೆ. ಸದ್ಯ ಸೋಲಾರ್ ಪಂಪ್ ಸೆಟ್ ಅಳವಡಿಕೆ ಮಾಡಿಕೊಂಡರೆ, ಸರ್ಕಾರಕ್ಕೆ ಶೇ 39ರಷ್ಟು ವಿದ್ಯುತ್ ಉಳಿತಾಯವಾಗಬಹುದು ಎಂದು ಅಂದಾಜಿಸಲಾಗಿದೆ.
200 ದಿನ ವಿದ್ಯುತ್ ಉತ್ಪಾದನೆ ಮಾಡಬಹುದು : ಸೋಲಾರ್ ಪಂಪ್ ಸೆಟ್ ಅಳವಡಿಕೆ ಮಾಡಿಕೊಂಡ ರೈತರು 200 ದಿನ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ. ಇವುಗಳಲ್ಲಿ ರೈತರು ಅಗತ್ಯವಿರುಷ್ಟು ವಿದ್ಯುತ್ಅನ್ನು ಬಳಸಿಕೊಂಡು ಉಳಿದದ್ದನ್ನು ಮಾರಾಟ ಮಾಡಬಹುದು. ಹೆಚ್ಚುವರಿ ವಿದ್ಯುತ್ ಮಾರಾಟದಿಂದ ರೈತರು ವಾರ್ಷಿಕವಾಗಿ 50 ಸಾವಿರ ರೂ. ಹಣವನ್ನು ಗಳಿಸಬಹುದಾಗಿದೆ.
ಬ್ಯಾಂಕ್ ಖಾತೆಗೆ ನೇರವಾಗಿ ಹಣ : ರೈತರು ಉತ್ಪಾದನೆ ಮಾಡಿದ ವಿದ್ಯುತ್ ಅನ್ನು ಮಾರಾಟ ಮಾಡಲು ಪ್ರತ್ಯೇಕ ಮಾರ್ಗ ನಿರ್ಮಾಣ ಮಾಡುವುದಿಲ್ಲ. ಸೂರ್ಯ ರೈತ ಯೋಜನೆ ಅನ್ವಯ ಹಾಲಿ ಇರುವ ಮಾರ್ಗದ ಮೂಲಕವೇ ವಿದ್ಯುತ್ ಖರೀದಿ ಮಾಡಲಾಗುತ್ತದೆ. ಖರೀದಿ ಬಗ್ಗೆ ತಿಳಿಯಲು ಒಂದು ಮೀಟರ್ ಅಳವಡಿಸಲಾಗುತ್ತದೆ. ಅದರ ಮೂಲಕ ರೈತರು ನೀಡಿದ ವಿದ್ಯುತ್ ಬಗ್ಗೆ ಲೆಕ್ಕಾಚಾರ ಮಾಡಿ 6 ತಿಂಗಳಿಗೊಮ್ಮೆ ಅವರ ಖಾತೆಗೆ ಹಣ ಜಮಾ ಮಾಡಲಾಗುತ್ತದೆ.












Click it and Unblock the Notifications