ರೈತರ ಮಾರಣಹೋಮ; ನ್ಯಾಯ ಸಿಗುವವರೆಗೆ ವಿರಮಿಸುವುದಿಲ್ಲ: ಸಂಯುಕ್ತ ಕಿಸಾನ್ ಮೋರ್ಚಾ
ಮೊನ್ನೆಯಷ್ಟೇ ಉತ್ತರಪ್ರದೇಶದ ಲಖೀಂಪುರ್ ಖೇರಿಯಲ್ಲಿ ಶಾಂತಿಯುತ ಚಳುವಳಿಯಲ್ಲಿ ತೊಡಗಿದ್ದ ಸತ್ಯಾಗ್ರಹಿಗಳ ಮೇಲೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ತೇನಿ ಬೆಂಗಾವಲು ಪಡೆಯ ಕಾರು ಹತ್ತಿಸಿ ನಾಲ್ವರನ್ನು ಕೊಂದ ಘಟನೆಯು ಸಚಿವರ ಅಪರಾಧ ಹಿನ್ನೆಲೆಯನ್ನೂ ಜಗಜ್ಜಾಹೀರು ಮಾಡಿದೆ.
ಆದಾಗ್ಯೂ ಇನ್ನೂ ಅವರನ್ನು ಸಚಿವ ಸ್ಥಾನದಲ್ಲಿ ಮುಂದುವರೆಸುತ್ತಿರುವ ನರೇಂದ್ರ ಮೋದಿ ಸರ್ಕಾರದ ನಡವಳಿಕೆ ಖಂಡನಾರ್ಹ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಪ್ರಕಟಣೆಯಲ್ಲಿ ತಿಳಿಸಿದೆ. ಸೆಪ್ಟೆಂಬರ್ 25ರಂದು ಈ ಸಚಿವರು ಚಳವಳಿನಿರತ ರೈತರ ಬಗ್ಗೆ ಹಗುರವಾಗಿ ಮಾತನಾಡಿದಾಗ ಸಂಯುಕ್ತ ಕಿಸಾನ್ ಮೋರ್ಚಾ ಅವರ ವಿರುದ್ಧ ಕೆಂಪು ಬಾವುಟ ಪ್ರದರ್ಶಿಸಿ ಪ್ರತಿಭಟನೆಯೊಡ್ಡಿತ್ತು.
ಅಜಯ್ ಮಿಶ್ರಾ ಹಾಗೂ ಆಶಿಶ್ ಮಿಶ್ರಾ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ. ಅಜಯ್ ಮಿಶ್ರಾ ಬೇಲ್ ಮೇಲೆ ಹೊರಗಿದ್ದಾರೆ. ಇಂಥವರನ್ನು ಮೋದಿ ಸರ್ಕಾರ ಸಚಿವ ಸ್ಥಾನ ಕೊಟ್ಟು ಪೋಷಿಸುತ್ತಿದೆ. ಈ ಕೂಡಲೇ ಸಚಿವರ ಮೇಲೆ ಕ್ರಮ ಜರುಗಿಸಬೇಕು ಇಲ್ಲವಾದರೆ ತೀವ್ರತರವಾದ ಹೋರಾಟ ಎದುರಿಸಬೇಕಾಗುತ್ತದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಮೋದಿ ಸರ್ಕಾರಕ್ಕೆ ಎಚ್ಚರಿಸಿದೆ. ಮಂಗಳವಾರ ಪ್ರಧಾನಿ ಮೋದಿ ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದಾಗ್ಯೂ ಲಖೀಂಪುರ್ ಖೇರಿಯ ಘಟನೆಯ ಬಗ್ಗೆ ಸೊಲ್ಲೆತ್ತದೆ ಇರುವುದನ್ನು ಸಂಯುಕ್ತ ಕಿಸಾನ್ ಮೋರ್ಚಾ ತೀವ್ರವಾಗಿ ಖಂಡಿಸಿದೆ.

ಉತ್ತರ ಪ್ರದೇಶದ ಪೊಲೀಸರು ಅಜಯ್ ಮಿಶ್ರಾ ಮಗ ಆಶಿಶ್ ಮಿಶ್ರಾರನ್ನು ಇನ್ನೂ ಬಂಧಿಸಿಲ್ಲ. ಕಳೆದ ಭಾನುವಾರವೇ ಆತನನ್ನು ಬಂಧಿಸಬೇಕಿದ್ದ ಪೊಲೀಸರು ಮಾರಣಹೋಮ ನಡೆದ ಜಾಗದಿಂದ ಅವನನ್ನು ತಪ್ಪಿಸಿಕೊಳ್ಳಲು ಸಹಕರಿಸಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ ನ್ಯಾಯಕ್ಕಾಗಿ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ದಾಳಿಗೊಳಗಾದ ರೈತ ನಾಯಕ ಜಜಿಂದರ್ ಸಿಂಗ್ ಮೇಲೆಯೇ ಕೇಸ್ ದಾಖಲಿಸಿರುವ ಪೊಲೀಸರ ಕ್ರಮವನ್ನು ಎಸ್. ಕೆ. ಎಂ ಖಂಡಿಸುತ್ತದೆ. ವಿಜಯ್ ಮಿಶ್ರಾ ದಾಖಲಿಸಿರುವ ಕೇಸನ್ನು ಈ ಕೂಡಲೇ ಹಿಂಪಡೆಯಬೇಕು. ತಜೀಂದರ್ ಮಿಶ್ರಾ ಶಾಂತಿಯುತವಾಗಿ ನಡೆದು ಹೋಗುತ್ತಿದ್ದಾಗ ಅವರ ಮೇಲೆ "ಥಾರ್" ಜೀಪು ಹತ್ತಿಸಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ.

ಅದರಿಂದ ಗಾಯಗೊಂಡು ನೆಲದ ಮೇಲೆ ಬಿದ್ದು ಒದ್ದಾಡುತ್ತಿರುವ ಮುಖಂಡನ ನೆರವಿಗೆ ರೈತರು ಧಾವಿಸಿದ್ದಾರೆ. ಹಾಗೆ ಪೆಟ್ಟು ತಿಂದ ಘಾಸಿಕೊಂಡವರ ಮೇಲೆಯೇ ಕೇಸ್ ದಾಖಲಿಸುವುದೆಂದರೆ ಅದೊಂದು ಅತ್ಯಂತ ಅಮಾನುಷ ಕೃತ್ಯವಾಗುತ್ತದೆ. ಹಾಗಾಗಿ ಈ ಕೂಡಲೇ ಅವರ ವಿರುದ್ಧ ಹಾಕಿರುವ ಕೇಸು ಹಿಂಪಡೆಯಬೇಕು.
ಆಶಿಶ್ ಮಿಶ್ರಾ ಬೆಂಗಾವಲು ಪಡೆಯ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡ ಪತ್ರಕರ್ತ ರಾಮನ್ ಕಷ್ಯಪ್ರನ್ನು ಕೂಡಲೇ ಚಿಕಿತ್ಸೆಗೆ ಕರೆದೊಯ್ಯದೆ ಉದಾಸೀನ ಮಾಡಿ ನೇರ ಶವಾಗಾರದ ವರೆಗೆ ತೆಗೆದುಕೊಂಡ ಪೊಲೀಸರ ನಡೆಯ ಬಗ್ಗೆಯೂ ತನಿಖೆಯಾಗಬೇಕು. ರಾಮನ್ ಕಷ್ಯಪ್ನ ಜೀವ ಉಳಿಸಲಾಗಲಿಲ್ಲವೆಂದು ವರದಿಯಾಗಿದೆ. ಇಂದು ಅವರ ಅಂತ್ಯಸಂಸ್ಕಾರ ಕೂಡಾ ಆಯಿತು.

ಮೃತ ಪತ್ರಕರ್ತನ ತಂದೆ ನೀಡಿರುವ ದೂರಿನನ್ವಯ ಇನ್ನೂ ಯುಪಿ ಪೊಲೀಸರು ಎಫ್ಐಆರ್ ಹಾಕಿಲ್ಲ. ಕೂಡಲೇ ಎಫ್ಐಆರ್ ದಾಖಲಿಸಬೇಕೆಂದು ಎಸ್.ಕೆ.ಎಂ ಒತ್ತಾಯಿಸುತ್ತದೆ.
ಲಖೀಂಪುರ್ ಖೇರಿಯಲ್ಲಿ ಹತ್ಯೆಗೀಡಾದ ಎಲ್ಲಾ ನಾಲ್ಕು ರೈತ ಹುತಾತ್ಮರ ಅಂತ್ಯಸಂಸ್ಕಾರ ನೆರವೇರಿದೆ. ಕಡೆಯದಾಗಿ ಗುರ್ವಿಂದರ್ ಸಿಂಗ್ ಎರಡನೆಯ ಪೋಸ್ಟ್ ಮಾರ್ಟಂ (ಬೇರೆ ವೈದ್ಯರ ತಂಡದಿಂದ ಮಾಡಿಸಿದ ಮೇಲೆ) ಆದ ಮೇಲೆ ಅಂತ್ಯಕ್ರಿಯೆ ಮಾಡಲಾಯಿತು. ಎರಡನೆಯ ಪೋಸ್ಟ್ ಮಾರ್ಟಂ ರಿಪೋರ್ಟ್ನಲ್ಲಿ ಕೂಡಾ ಗುಂಡು ತಗುಲಿರುವ ಬಗ್ಗೆ ಪತ್ತೆಯಾಗಿಲ್ಲ. ಇಷ್ಟರ ನಡುವೆಯೂ ಅಂದು ಗುಂಡು ಹಾರಿಸಿದ್ದನ್ನು ಕಂಡಿರುವ ಪ್ರತ್ಯಕ್ಷ ಸಾಕ್ಷಿಗಳಿವೆ.
ಸಂಯುಕ್ತ ಕಿಸಾನ್ ಮೋರ್ಚಾ ಲಖೀಂಪುರ್ ಖೇರಿಯ ಘಟನೆಯನ್ನು ಕೈಬಿಡುವುದಿಲ್ಲ. ನ್ಯಾಯಕ್ಕಾಗಿ ಹೋರಾಟ ಮುಂದುವರೆಸುತ್ತದೆ. ಅದೇ ರೀತಿ ಪೊಲೀಸರಿಗೆ ನಿರ್ಭೀತಿಯಿಂದ ವರ್ತಿಸಲು ಪ್ರಚೋದಿಸುವ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ವಿರುದ್ಧವೂ ನಮ್ಮ ಹೋರಾಟ ಮುಂದುವರೆಯುವುದಾಗಿ ಎಸ್. ಕೆ. ಎಂ ಪುನರುಚ್ಚರಿಸಿದೆ.
ಖಟ್ಟರ್ರನ್ನು ಮುಖ್ಯಮಂತ್ರಿಗಾದಿಯಿಂದ ಕೆಳಗಿಳಿಸುವವರೆಗೆ ಸಂಯುಕ್ತ ಕಿಸಾನ್ ಮೋರ್ಚಾ ವಿರಮಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದೆ. ಮುಂದಿನ ದಿನಗಳಲ್ಲಿ ಹೋರಾಟದ ಸ್ವರೂಪವನ್ನೂ ಪ್ರಕಟಿಸುವುದಾಗಿ ಎಸ್.ಕೆ.ಎಂ ಹೇಳಿದೆ.
ಇಂದು ಹರಿಯಾಣದ ಬಿವಾನಿಯಲ್ಲಿ ಕೃಷಿ ಸಚಿವ ಜೆ.ಪಿ. ದಲಾಲ್ ಪಾಲ್ಗೊಂಡಿದ್ದ ಕಾರ್ಯಕ್ರಮದ ಎದುರು ಭಾಜಪ ಸರ್ಕಾರಗಳ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ.












Click it and Unblock the Notifications