ಕಾಡು ಪ್ರಾಣಿಗಳ ಹಾವಳಿ, ಗಣಿಗಾರಿಕೆಯಿಂದ ತತ್ತರಿಸಿದ ಬಂಡೀಪುರ ಕಾಡಂಚಿನ ರೈತರು
ಚಾಮರಾಜನಗರ, ಮೇ 16: ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ಲಾಭದಾಯಕವಾಗಿ ನಡೆಯುತ್ತಿದ್ದು, ಪ್ರಭಾವಿ ವ್ಯಕ್ತಿಗಳು ಅಕ್ರಮವಾಗಿ ಗಣಿಗಾರಿಕೆಯನ್ನು ನಡೆಸುತ್ತಿರುವುದರಿಂದ ಅಕ್ಕಪಕ್ಕದ ರೈತರು ಸಂಕಷ್ಟ ಎದುರಿಸುವಂತಾಗಿದೆ.
ಒಂದು ಕಡೆ ಕಾಡು ಪ್ರಾಣಿಗಳ ಹಾವಳಿ, ಮತ್ತೊಂದು ಕಡೆ ಕಲ್ಲು ಗಣಿಗಾರಿಕೆಯಿಂದ ಹಾರಿ ಬರುವ ಕಲ್ಲು ಚೂರುಗಳು, ಟಿಪ್ಪರ್, ಜೆಸಿಬಿಯಂತಹ ವಾಹನಗಳು ಸಂಚರಿಸುವುದರಿಂದಾಗಿ ಮೇಲಿಂದ ಮೇಲೆ ರೈತರು ತೊಂದರೆಗಳನ್ನು ಸಹಿಸಿಕೊಂಡು ಕೃಷಿ ಚಟುವಟಿಕೆ ಮಾಡುವಂತಾಗಿದೆ.
ಜಿಲ್ಲೆಯ ಕಾಡಂಚಿನ ಅದರಲ್ಲೂ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿಯೋಜನೆಯ ಬಫರ್ ವಲಯದ ಅರಣ್ಯಪ್ರದೇಶದ ಅಂಚಿನ ಹಸಗೂಲಿ ಗ್ರಾಮದಲ್ಲಿ ಅವ್ಯಾಹತವಾಗಿ ಗಣಿಗಾರಿಕೆ ನಡೆಯುತ್ತಿದ್ದು, ಇದನ್ನು ತಡೆಯಲು ಯಾರಿಂದಲೂ ಸಾಧ್ಯವಾಗದಿರುವುದು ನಿಜಕ್ಕೂ ಅಚ್ಚರಿಯ ವಿಚಾರವೇ ಆಗಿದೆ.

ಬಂಡೀಪುರ ಹುಲಿಯೋಜನೆಯ ಓಂಕಾರ್ ವಲಯದ ಬಫರ್ ವಲಯಕ್ಕೆ ಸೇರಿದ ಹಸಗೂಲಿ ಹಾಗೂ ಮಂಚಹಳ್ಳಿ ಗ್ರಾಮಗಳ ನಡುವೆಯಿರುವ ಗುಡ್ಡದಲ್ಲಿ ಕಳೆದ ಎರಡು ವರ್ಷಗಳಿಂದ ಗಣಿ ಇಲಾಖೆಯಿಂದ ಗುತ್ತಿಗೆ ಪಡೆದ ಖಾಸಗಿ ವ್ಯಕ್ತಿಯೊಬ್ಬರು ಬಿಳಿಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಇಲ್ಲಿ ಬಳಕೆ ಮಾಡುವ ಸ್ಫೋಟಕದಿಂದ ಅಕ್ಕ ಪಕ್ಕದ ಜಮೀನುಗಳಿಗೆ ಕಲ್ಲಿನ ಚೂರುಗಳು ಹಾರಿ ಬಂದು ಬೀಳುತ್ತಿದ್ದು, ರೈತರು ಕೃಷಿ ಚಟುವಟಿಕೆ ಮಾಡಲು ಭಯ ಬೀಳುವಂತಾಗಿತ್ತು.
ಆ ನಂತರ ಗಣಿಗಾರಿಕೆಯಿಂದಾಗುತ್ತಿರುವ ಅನಾಹುತಗಳ ಬಗ್ಗೆ ಆಕ್ರೋಶಗೊಂಡ ರೈತರು ಪ್ರತಿಭಟನೆ ಮಾಡಿದ್ದರಿಂದ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲಾಗಿತ್ತು.
ಕೊನೆಗೆ ಅಲ್ಲಿ ಕೆಲಸ ನಿಲ್ಲಿಸಿದ ಗುತ್ತಿಗೆದಾರ ಸಮೀಪದ ಅರಣ್ಯ ಪ್ರದೇಶವನ್ನು ಅತಿಕ್ರಮಿಸಿ ಜೆಸಿಬಿಯಿಂದ ದಾರಿ ನಿರ್ಮಿಸಿ ಅಕ್ರಮವಾಗಿ ಗಣಿಗಾರಿಕೆ ಪ್ರಾರಂಭಿಸಿ, ಮೆಗ್ಗರ್ ಯಂತ್ರದ ಮೂಲಕ ಬಂಡೆಗಳನ್ನು ಸ್ಫೋಟಿಸುತ್ತಿರುವುದು ಇದೀಗ ಮತ್ತೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಗುಡ್ಡದಲ್ಲಿ ಹುಲಿ, ಚಿರತೆ, ಸೀಳುನಾಯಿಗಳು ಹಾಗೂ ನವಿಲುಗಳು ವಾಸಿಸುತ್ತಿದ್ದು, ಸ್ಫೋಟಕ ಶಬ್ದಕ್ಕೆ ಹೆದರಿ ಗ್ರಾಮಗಳತ್ತ ದಾಳಿ ಮಾಡುತ್ತಿವೆ. ಅಲ್ಲದೆ ಕಳ್ಳಬೇಟೆಗಾರರ ಹಾವಳಿಯಿಂದ ನವಿಲುಗಳು ಸಾವಿಗೀಡಾಗುತ್ತಿವೆ. ಆದ್ದರಿಂದ ಅರಣ್ಯ ಇಲಾಖೆಯವರು ಗಣಿಗಾರಿಕೆ ಸ್ಥಗಿತಗೊಳಿಸಬೇಕು ಎಂಬುದು ಸ್ಥಳೀಯ ಗ್ರಾಮಸ್ಥರ ಆಗ್ರಹವಾಗಿದೆ.
ಗಣಿಗಾರಿಕೆಗೆ ನೀಡಿರುವ ಅನುಮತಿ ರದ್ದುಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಜಿಲ್ಲಾಧಿಕಾರಿಗಳು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications