ಜೆಡಿಎಸ್ ಭದ್ರಕೋಟೆಯಲ್ಲೇ ಹೆಚ್ಚುತ್ತಿದೆ ರೈತರ ಆತ್ಮಹತ್ಯೆ!
ಮಂಡ್ಯ, ನವೆಂಬರ್.24: ಮಂಡ್ಯದಲ್ಲಿ ರೈತರ ಆತ್ಮಹತ್ಯೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಇದೀಗ ಸಿಎಂ ಜಿಲ್ಲೆಗೆ ಆಗಮಿಸುವ ವೇಳೆಯಲ್ಲಿಯೇ ಇಬ್ಬರು ರೈತರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಸಾವಿನ ಸ್ವಾಗತ ನೀಡಿದ್ದಾರೆ.
ಸಾಲಮನ್ನಾ ಘೋಷಣೆ ಮಾಡಿ ಆರು ತಿಂಗಳು ಕಳೆದರೂ ಇದುವರೆಗೆ ಸಾಲ ಮನ್ನವಾಗದ ಹಿನ್ನಲೆಯಲ್ಲಿ ರೈತರು ಇವತ್ತು ಆಗುತ್ತೆ, ನಾಳೆ ಆಗುತ್ತೆ ಎಂದು ಕಾಯುತ್ತಲೇ ಬರುತ್ತಿದ್ದಾರೆ.
ಅಷ್ಟೇ ಅಲ್ಲ, ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಳೇ ಮೈಸೂರು ವ್ಯಾಪ್ತಿಯಲ್ಲಿ ಹೆಚ್ಚಿನ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಪ್ರದೇಶ ಜೆಡಿಎಸ್ ನ ಭದ್ರಕೋಟೆಯಾಗಿದ್ದು, ಇದೀಗ ಇಲ್ಲಿಯೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಈ ನಡುವೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ನವೆಂಬರ್ ತಿಂಗಳಾಂತ್ಯದಲ್ಲಿ ಸಾಲ ಮನ್ನಾ ಜಾರಿಗೆ ಬರುತ್ತದೆ ಎಂದು ಭರವಸೆ ನೀಡಿದ್ದರೂ ಮಂಡ್ಯ ಜಿಲ್ಲೆಯಲ್ಲಿ ರೈತರ ಸರಣಿ ಆತ್ಮಹತ್ಯೆ ಮುಂದುವರೆದಿರುವುದು ಅಷ್ಟೇ ಅಲ್ಲದೆ ಅವರು ಜಿಲ್ಲೆಗೆ ಆಗಮಿಸುವ ಸಂದರ್ಭವೇ ಪ್ರತ್ಯೇಕ ಪ್ರಕರಣಗಳಲ್ಲಿ ವಿಷಸೇವಿಸಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಮುಂದೆ ಓದಿ...

5 ಲಕ್ಷ ರೂ. ಸಾಲ
ಮಂಡ್ಯ ತಾಲೂಕಿನ ದುದ್ದ ಬಳಿಯ ಕನ್ನಹಟ್ಟಿ ಗ್ರಾಮದ ಜಯಕುಮಾರ್(44) ಮತ್ತು ಮದ್ದೂರು ತಾಲ್ಲೂಕಿನ ತಗ್ಗಹಳ್ಳಿ ಗ್ರಾಮದ ಬಿಳಿಯಯ್ಯ(58) ಆತ್ಮಹತ್ಯೆ ಮಾಡಿಕೊಂಡ ರೈತರಾಗಿದ್ದಾರೆ. ಕನ್ನಹಟ್ಟಿ ಗ್ರಾಮದಲ್ಲಿ ಒಂದು ಎಕರೆ ಜಮೀನು ಹೊಂದಿದ್ದ ಜಯಕುಮಾರ್ ಬ್ಯಾಂಕ್ ಸೇರಿದಂತೆ ಖಾಸಗಿಯಾಗಿ 5 ಲಕ್ಷ ರೂ. ಸಾಲ ಮಾಡಿಕೊಂಡಿದ್ದನು ಎಂದು ತಿಳಿದುಬಂದಿದೆ.

ಕುಗ್ಗಿ ಹೋಗಿದ್ದ ಜಯಕುಮಾರ್
ಅಲ್ಲದೆ, ಜಯಕುಮಾರ್ ಗಂಟಲು ಕ್ಯಾನ್ಸರ್ನಿಂದ ಬಳಲುತ್ತಿದ್ದನು ಎನ್ನಲಾಗಿದ್ದು, ಖಾಸಗಿ ಸಾಲಗಾರರ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ತನ್ನ ಜಮೀನಿನ ಬಳಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಾನು ಮಾಡಿರುವ ಸಾಲ, ಅನುಭವಿಸಿದ ಯಾತನೆ ಬಗ್ಗೆ ಡೆತ್ ನೋಟ್ ನಲ್ಲಿ ಉಲ್ಲೇಖಿಸಿರುವ ಜಯಕುಮಾರ್, ಗಂಟಲು ಕ್ಯಾನ್ಸರ್ನಿಂದ ನಾನು ಕುಗ್ಗಿ ಹೋಗಿದ್ದು, ಇದರ ಚಿಕಿತ್ಸೆಗೆ 3 ಲಕ್ಷ ಬೇಕೆಂದು ವೈದ್ಯರು ತಿಳಿಸಿದ್ದಾರೆ ಎಂದು ಬರೆದಿದ್ದಾನೆ.

ಪ್ರಕರಣ ದಾಖಲಿಸಿಕೊಂಡಿದ್ದಾರೆ
4 ವರ್ಷದಿಂದ ಬರಗಾಲ ಬಂದು ವ್ಯವಸಾಯ ಮಾಡಲು ಆಗಲಿಲ್ಲ. ಅಲ್ಲದೆ, ಈ ವರ್ಷ ಮಳೆ ಬಂದ ಹಿನ್ನೆಲೆಯಲ್ಲಿ 80 ಸಾವಿರ ರೂ. ಖರ್ಚು ಮಾಡಿ ವ್ಯವಸಾಯ ಮಾಡಿದೆ. ಆದರೆ, ಅದೂ ಸಹ ಕೈಗೆ ಬರಲಿಲ್ಲ. ಈ ಎಲ್ಲಾ ಕಾರಣಗಳಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಜಯಕುಮಾರ್ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾನೆ. ಈ ಸಂಬಂಧ ಶಿವಳ್ಳಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಿಳಿಯಯ್ಯ ಆತ್ಮಹತ್ಯೆ
ಮತ್ತೊಂದು ಪ್ರಕರಣದಲ್ಲಿ ಮದ್ದೂರು ತಾಲೂಕಿನ ತಗ್ಗಹಳ್ಳಿ ಗ್ರಾಮದ ನಿವಾಸಿ ಬಿಳಿಯಯ್ಯ ಅವರು ಒಂದು ಎಕರೆ ಜಮೀನು ಹೊಂದಿದ್ದು, ಬೆಳೆ ಬೆಳೆಯಲು ಬ್ಯಾಂಕ್, ಸ್ವಸಹಾಯ ಸಂಘ ಹಾಗೂ ಇತರೆ 3 ಲಕ್ಷ ಸಾಲ ಮಾಡಿಕೊಂಡಿದ್ದರೆನ್ನಲಾಗಿದೆ. ಆದರೆ ಬೆಳೆದ ಕೃಷಿ ಕೈಹಿಡಿಯದೆ ನಷ್ಟ ಅನುಭವಿಸಿದ ಕಾರಣ ಸಾಲ ತೀರಿಸಲು ಸಾಧ್ಯವಾಗದೆ, ಇತ್ತ ಸಾಲಗಾರರ ಕಾಟ ಹೆಚ್ಚಾದ ಹಿನ್ನಲೆಯಲ್ಲಿ ರೈತ ಬಿಳಿಯಯ್ಯ ಅವರು ತಮ್ಮ ಜಮೀನಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಕೊಪ್ಪ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications