ಪ್ರತಿಭಟನೆಯಲ್ಲಿ ಇಳಿಯುತ್ತಿರುವ ರೈತರ ಸಂಖ್ಯೆ; ಹೊಸ ಕಾರ್ಯತಂತ್ರ ರಚನೆ
ನವದೆಹಲಿ, ಮಾರ್ಚ್ 6: ಕೇಂದ್ರ ಪರಿಚಯಿಸಿರುವ ನೂತನ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿಗಳಲ್ಲಿ ರೈತರ ಪ್ರತಿಭಟನೆ ಮುಂದುವರೆದಿದೆ. ಆದರೆ ರೈತರಿಗೆ ಮುಂದಿನ ತಿಂಗಳು ಕೊಯ್ಲಿನ ಸಮಯವಾದ್ದರಿಂದ ಪ್ರತಿಭಟನೆಯಲ್ಲಿ ಈಚೆಗೆ ರೈತರ ಸಂಖ್ಯೆ ಇಳಿಮುಖವಾಗುತ್ತಿದೆ. ಹೀಗಾಗಿ ರೈತರ ಸಂಖ್ಯೆಯಲ್ಲಿ ಸಮತೋಲನ ಕಾಯ್ದುಕೊಳ್ಳಲು ಪಂಜಾಬ್ ಹಾಗೂ ಹರಿಯಾಣ ರೈತರು ಹೊಸ ಕಾರ್ಯತಂತ್ರವನ್ನು ಅನುಸರಿಸಲು ನಿರ್ಧರಿಸಿದ್ದಾರೆ.
ಈ ಮೊದಲು ಏಪ್ರಿಲ್ ತಿಂಗಳಿಡಿ ರೈತರು ಕೊಯ್ಲು ಮಾಡುತ್ತಿದ್ದರು. ಆದರೆ ಈ ಬಾರಿ ಪ್ರತಿಭಟನೆ ನಡೆಸುತ್ತಿರುವುದರಿಂದ ಕೊಯ್ಲಿಗೆ ಸಮಸ್ಯೆಯಾಗಿದೆ. ಹೀಗಾಗಿ ಎರಡನ್ನೂ ನಿಭಾಯಿಸಲು ಪ್ರತಿಭಟನಾನಿರತ ರೈತರು ಕಾರ್ಯತಂತ್ರವನ್ನು ಅನುಸರಿಸಲು ಯೋಜಿಸಿದ್ದಾರೆ. ಹತ್ತು ದಿನಗಳ ಕಾಲ ಬೆಳೆ ಕೊಯ್ಲು ಮಾಡಿ, ಮತ್ತೆ ಹತ್ತು ದಿನಗಳ ಕಾಲ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದಾರೆ. ಇದಕ್ಕಾಗಿ ತಂಡಗಳನ್ನು ರೂಪಿಸಲಿದ್ದಾರೆ.
ನೂರು ದಿನ ಮುಟ್ಟಿದ ಪ್ರತಿಭಟನೆ; ಕೇಂದ್ರದ ವಿರುದ್ಧ ಕರಾಳ ದಿನಾಚರಣೆ
ತಿಂಗಳಲ್ಲಿ ಮೂರು ಬಾರಿ ಬ್ಯಾಚ್ಗಳ ಮೂಲಕ, ಒಂದೊಂದು ಬ್ಯಾಚ್ನಂತೆ ಕಾರ್ಯನಿರ್ವಹಿಸಲಿದ್ದಾರೆ. ಒಂದು ತಂಡ ಕೊಯ್ಲಿಗೆ ತೆರಳಿದರೆ, ಮತ್ತೊಂದು ತಂಡ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದೆ. ಇಡೀ ಏಪ್ರಿಲ್ನಲ್ಲಿ ಈ ಪದ್ಧತಿಯನ್ನು ಮುಂದುವರೆಸುತ್ತೇವೆ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ಜಗದೀಶ್ ಧಿಲ್ಲನ್ ತಿಳಿಸಿದ್ದಾರೆ. ಪ್ರತಿಭಟನೆ ಹಾಗೂ ಕೊಯ್ಲು ಎರಡೂ ಕಡೆ ಸಮತೋಲನ ಕಾಯ್ದುಕೊಳ್ಳಬೇಕಿದೆ. ನಮಗೆ ಹೋರಾಟ ಮುಖ್ಯವಾಗಿದೆ ಎಂದು ಹೇಳಿದ್ದಾರೆ.
ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ಕಳೆದ ನವೆಂಬರ್ 26 ರಿಂದಲೂ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪಂಜಾಬ್, ಹರಿಯಾಣ, ಪಶ್ಚಿಮ ಉತ್ತರ ಪ್ರದೇಶದ ರೈತರು ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಶನಿವಾರ 100ನೇ ದಿನಕ್ಕೆ ರೈತರ ಪ್ರತಿಭಟನೆ ಕಾಲಿಟ್ಟಿದೆ.