ಶಿವಮೊಗ್ಗ ರೈತ ಸಮಾವೇಶದಿಂದ ರೈತ ಸಂಘಕ್ಕೆ ಲಾಭವೇನು.. ನಷ್ಟವೇನು?
ಶಿವಮೊಗ್ಗ, ಮಾರ್ಚ್ 21: ನವದೆಹಲಿಯಲ್ಲಿ ಮೂರು ತಿಂಗಳಿನಿಂದ ಕೊರೆವ ಚಳಿ, ಸುಡುವ ಬಿಸಿಲಿನನ್ನೂ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಮಧ್ಯೆ ಶಿವಮೊಗ್ಗದಲ್ಲಿ ನಡೆದ ರೈತ ಮಹಾಪಂಚಾಯತ್ ಸಭೆಯಲ್ಲಿ ರೈತ ನಾಯಕ ರಾಕೇಶ್ ಟಿಕಾಯತ್, ಯುದ್ಧವೀರ್ ಸಿಂಗ್, ಡಾ. ದರ್ಶನ್ ಪಾಲ್ ಬಲು ಉತ್ಸಾಹದಿಂದ ಭಾಗವಹಿಸಿದ್ದರು.
ಶಿವಮೊಗ್ಗದ ರೈತ ಮಹಾಪಂಚಾಯತ್ "ಕಾರ್ಯಕ್ರಮ ಯಶಸ್ವಿಯಾಯಿತು" ಎಂದು ಹೇಳುವುದಕ್ಕೆ ಬೇಕಾದ ವೇದಿಕೆ, ಅರೇಂಜ್ಮೆಂಟ್ಸ್, ಜನ, ಹೋರಾಟದ ಹಾಡುಗಳು, ಭಾಷಣಗಳು ಎಲ್ಲವೂ ಇತ್ತು. ಇದರಿಂದ ಕರ್ನಾಟಕ ರಾಜ್ಯ ರೈತ ಸಂಘಕ್ಕೆ ಯಾವ ರೀತಿ ಪ್ರಯೋಜನವಾಯಿತು ಎಂಬುದನ್ನು ತಿಳಿಯಬೇಕಿದೆ. ಅಂತೆಯೇ ಕ.ರಾ.ರೈ.ಸಂಘಕ್ಕಾದ ನಷ್ಟವನ್ನೂ ಅರಿಯಬೇಕಿದೆ.
ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ಮುಖಂಡರಾದ ಹೆಚ್ ಆರ್ ಬಸವರಾಜಪ್ಪ, ಕೆ.ಟಿ.ಗಂಗಾಧರ್, ಕೋಡಿಹಳ್ಳಿ ಚಂದ್ರಶೇಖರ್ ಮತ್ತು ಚುಕ್ಕಿ ನಂಜುಂಡಸ್ವಾಮಿ ಕಳೆದ ಕೆಲವರ್ಷಗಳಿಂದ ಬೇರೆ ಬೇರೆಯಾಗಿ ಚಳುವಳಿಯಲ್ಲಿ ತೊಡಗಿದ್ದವರು. ಇದೀಗ ದೆಹಲಿಯ ನಾಯಕರ ಆಗಮನದ ಹಿನ್ನೆಲೆ ಒಂದೇ ವೇದಿಕೆಯಲ್ಲಿದ್ದು ಸಾಲಿಡಾರಿಟಿಯನ್ನು ತೋರಿದ್ದು ಕರ್ನಾಟಕದ ರೈತ ಚಳುವಳಿಯ ಯಶಸ್ಸು ಎನ್ನುವಂತಿದೆ.

ನಷ್ಟದ ವಿಷಯವೂ ಬಲುಮುಖ್ಯ:
ಇನ್ನು ನಷ್ಟದ ವಿಚಾರವೂ ಹೇಳಬೇಕು. ಚಾಮರಸ ಮಾಲಿ ಪಾಟೀಲ್, ಬಡಗಲಪುರ ನಾಗೇಂದ್ರ ಮತ್ತು ವೀರಸಂಗಯ್ಯ ಈ ಕಾರ್ಯಕ್ರಮಕ್ಕೆ ಬರಲಿಲ್ಲ. ಅದು ನಷ್ಟ. ರೈತ ಸಂಘಕ್ಕಾದ ನಷ್ಟ. ಇದು ರೈತ ಸಂಘದ ಆಂತರ್ಯವನ್ನರಿತವರಿಗೆ ಅರ್ಥವಾಗುವ ಅಂಶ. ರೈತ ಸಂಘದ ಬಣಗಳ ನಡುವೆ ಇರುವ ಬಿನ್ನಾಭಿಪ್ರಾಯಗಳನ್ನೇ ದಾಳವಾಗಿಸಿಕೊಂಡು ಹೊರಗಿನ 'ಶಕ್ತಿ'ಗಳು ತಮ್ಮ 'ಕೈ' ಬಲಪಡಿಸಿಕೊಳ್ಳಲು ಯತ್ನಿಸುತ್ತಿವೆಯೇ ? ಅದಕ್ಕೆ ಕೆಲವು ರೈತ ಮುಖಂಡರು ಬಲಿಯಾಗಿದ್ದಾರೆಯೇ? ಈ ಪ್ರಶ್ನೆಗಳಿಗೆ ಕಾಲವೇ ಉತ್ತರಿಸಬೇಕು.












Click it and Unblock the Notifications